ಸುರತ್ಕಲ್ : ಸುರತ್ಕಲ್ನ ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸಹಯೋಗದಲ್ಲಿ ಸುರತ್ಕಲ್ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ದಿನಾಂಕ 25 ಏಪ್ರಿಲ್ 2026ರಂದು ಆಯೋಜಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಮತ್ತು ಭರತನಾಟ್ಯ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚೆನ್ನೈಯ ಹಿರಿಯ ಸಂಗೀತ ಕಲಾವಿದ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಇವರು ಮಾತನಾಡಿ “ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ ದೈವಿಕ ಕಲೆಗಳಾಗಿದ್ದು ಹಿರಿಯ ಕಲಾವಿದರು ಕಿರಿಯ ತಲೆಮಾರಿಗೆ ವರ್ಗಾಯಿಸುವ ಕಾರ್ಯ ಮಾಡಬೇಕು. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕಳೆದ ಕೆಲವು ದಶಕಗಳಿಂದ ಪ್ರತಿಭಾವಂತ ಯುವ ಕಲಾವಿದರು ಪ್ರಕಾಶಕ್ಕೆ ಬರುತ್ತಿದ್ದು, ಸಂಗೀತ ಮತ್ತು ನೃತ್ಯ ಕಲಾ ಸಂಘಟಕರ ಪಾತ್ರ ಹಿರಿದಾಗಿದೆ. ಪ್ರತಿಭವಂತ ಯುವ ಕಲಾವಿದರಿಗೆ ಅವಕಾಶಗಳನ್ನು ನೀಡುವ ಮೂಲಕ ಸಾಂಸ್ಕೃತಿಕ ಸಂಘಟನೆಗಳು ಸಂಸ್ಕೃತಿ ಪ್ರಚಾರದ ಕಾರ್ಯ ಮಾಡಬಹುದಾಗಿದೆ” ಎಂದು ಹೇಳಿದರು.
ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಕರ್ಮಯೋಗಿ ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಶ್ರೀ ಕ್ಷೇತ್ರ ಎಡನೀರು ಮಠದ ರಾಜೇಂದ್ರ ಕಲ್ಲೂರಾಯ ಇವರು ಕಲಾವಿದ ಶ್ರೀಕಾಂತ್ ಗೋಪಾಲಕೃಷ್ಣನ್ ಇವರನ್ನು ಗೌರವಿಸಿದರು. ಹಿರಿಯ ಕಲಾವಿದ ವಿದ್ವಾನ್ ಚಂದ್ರಶೇಖರ ನಾವಡ, ನಾಗರಿಕ ಸಲಹಾ ಸಮಿತಿಯ ಸದಸ್ಯ ಕೃಷ್ಣಮೂರ್ತಿ ಪಿ., ನೃತ್ಯ ವಿದುಷಿ ಪ್ರವಿತಾ ಅಶೋಕ್, ಜಯಶ್ರೀ ಆರ್. ಭಟ್, ವಿಭು ರಾವ್ ಉಪಸ್ಥಿತರಿದ್ದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದರಾವ್ ಸ್ವಾಗತಿಸಿದರು. ಶೋಭಿತ ಭಟ್ ಕಿನ್ನಿಗೋಳಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಮಹತೀ ಕೆ. ಕಾರ್ಕಳ ವಯಲಿನ್ನಲ್ಲಿ ಸಂದೀಪ್ ರಾಮಮೂರ್ತಿ ಮೃದಂಗದಲ್ಲಿ ಮತ್ತು ವಿದ್ವತ್ ರಾವ್ ತಂಬೂರದಲ್ಲಿ ಸಹಕರಿಸಿದರು. ಗಾರ್ಗಿದೇವಿ ಕುಂದಾಪುರ ಇವರು ಭರತನಾಟ್ಯ ಪ್ರದರ್ಶನ ನೀಡಿದರು.

