ಮಂಚಿ : ಲಯನ್ಸ್ ಸೇವಾ ಟ್ರಸ್ಟ್ (ರಿ.) ಮಂಚಿ, ಲಯನ್ಸ್ ಕ್ಲಬ್ ಕೊಳ್ತಾಡು–ಸಾಲೆತ್ತೂರು ಹಾಗೂ ವಸುಧಾರಾ ಕಲಾಕೇಂದ್ರ ಬೊಳಂತೂರು–ಮಂಚಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ಕಲಾಧಾರಾ–10’ ಕಾರ್ಯಕ್ರಮವು ದಿನಾಂಕ 26 ಜೂನ್ 2026ರಂದು ಯುವ ಪ್ರತಿಭೆಗಳ ಭರತನಾಟ್ಯ ಪ್ರದರ್ಶನ, ಸಾಧಕ ಗುರುಗಳ ಸನ್ಮಾನ ಹಾಗೂ ಕಲಾಸೇವೆಯ ಮೌಲ್ಯವನ್ನು ಸಾರುವ ಅರ್ಥಪೂರ್ಣ ಕ್ಷಣಗಳಿಗೆ ಸಾಕ್ಷಿಯಾಯಿತು.



ದಿವ್ಯ ಅವರ ಓಂಕಾರ, ಶ್ರೀಮತಿ ರಮಾ ಆಚಾರ್ ಅವರ ಶಂಖನಾದ, ಸ್ಪರ್ಶ, ಕನಿಷ್ಕ, ಆದ್ಯ ಹಾಗೂ ನಿಹಾರಿಕಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಿಧಿ ಕೈರಂಗಳ ನಿತ್ಯ ಪಂಚಾಂಗ ವಾಚಿಸಿದರೆ, ಪ್ರಿಯಾಂಶಿ ಸುಭಾಷಿತವನ್ನು ಹೇಳಿದರು. ಶ್ರೀತಲ್ ಪಿ.ಎಸ್. ಹಾಗೂ ಪಾವನ ಅಭ್ಯಾಗತರನ್ನು ಪರಿಚಯಿಸಿದರೆ, ರಿಷಿಕಾ, ಅವನಿ ಹಾಗೂ ಪೂಜಾ ಕಲಾವಿದರನ್ನು ಪರಿಚಯಿಸಿದರು. ಚಿನ್ಮಯಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.



ಗುರು ವಿದ್ವಾನ್ ಬಿ. ದೀಪಕ್ ಕುಮಾರ್ ಇವರ ಶಿಷ್ಯೆಯರಾದ ಕುಮಾರಿ ವಿಷ್ಣುಪ್ರಿಯ, ಕುಮಾರಿ ಆಕಾಂಕ್ಷಾ ಕಜೆಗದ್ದೆ ಹಾಗೂ ಕುಮಾರಿ ಭಾನವಿ ಕೃಷ್ಣ ಪಿ. ಇವರು ಭರತನಾಟ್ಯದ ವಿವಿಧ ನೃತ್ಯ ಸಂಯೋಜನೆಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ವಿಶೇಷವಾಗಿ ನರಸಿಂಹಾವತಾರ ಹಾಗೂ ಗಜೇಂದ್ರ ಮೋಕ್ಷ ಪ್ರಸಂಗಗಳ ಭಾವಾಭಿನಯವು ಸಭಿಕರ ಮನಸ್ಸನ್ನು ಸ್ಪರ್ಶಿಸಿತು. ಸಮಾರೋಪದಲ್ಲಿ ಪ್ರಸ್ತುತಗೊಂಡ ತಿಲ್ಲಾನ ನೃತ್ಯ ಸಂಯೋಜನೆಯು ನೃತ್ಯದ ಲಾಲಿತ್ಯ, ಲಯ ಮತ್ತು ಚೈತನ್ಯವನ್ನು ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಅದ್ಭುತ ಮುಕ್ತಾಯವನ್ನು ನೀಡಿತು.


ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಕರಾವಳಿ ಕರ್ನಾಟಕದಲ್ಲೇ ಮೊದಲ ಬಾರಿಗೆ, ದೂರದರ್ಶನದ ಎ-ಟಾಪ್ ಗ್ರೇಡ್ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಿದ್ವಾನ್ ಬಿ. ದೀಪಕ್ ಕುಮಾರ್ ಇವರನ್ನು ಸನ್ಮಾನಿಸಿ ‘ಕಲಾಶ್ರಯ ದೀಪಾಂಕರ’ ಎಂಬ ಗೌರವ ಬಿರುದನ್ನು ಪ್ರದಾನಿಸಲಾಯಿತು. ಇದೇ ಸಂದರ್ಭದಲ್ಲಿ ದೂರದರ್ಶನದ ಬಿ-ಹೈ ಗ್ರೇಡ್ ಕಲಾವಿದರಾದ ವಿದುಷಿ ಪ್ರೀತಿಕಲಾ ಹಾಗೂ ವಿದ್ವಾನ್ ಬಿ. ಗಿರೀಶ್ ಕುಮಾರ್ ಇವರನ್ನೂ ಗೌರವಿಸಲಾಯಿತು. ಈ ಗೌರವ ಸಮರ್ಪಣೆಯ ಪರಿಕಲ್ಪನೆ ಹಾಗೂ ಆಯೋಜನೆಯಲ್ಲಿ ಲಯನ್ ಡಾ. ಗೋಪಾಲ್ ಆಚಾರ್ ಅವರ ವಿಶೇಷ ಪರಿಶ್ರಮ ಮತ್ತು ಮಾರ್ಗದರ್ಶನ ಪ್ರಮುಖವಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ವೆಂಕಟೇಶ್ ಹೆಬ್ಬಾರ್ ಹಾಗೂ ಶ್ರೀಮತಿ ಪ್ರತಿಭಾ ಹೆಬ್ಬಾರ್ ಇವರು ಕಾರ್ಯಕ್ರಮವನ್ನು ಶ್ಲಾಘಿಸಿ, ಯುವ ಕಲಾವಿದರಿಗೆ ಇಂತಹ ವೇದಿಕೆಗಳು ಆತ್ಮವಿಶ್ವಾಸವನ್ನು ಬೆಳೆಸುವುದರ ಜೊತೆಗೆ ಶಾಸ್ತ್ರೀಯ ಕಲೆಯ ನಿರಂತರ ಬೆಳವಣಿಗೆಗೆ ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ಅಭ್ಯಾಗತರಾದ, ಸ್ವತಃ ಯಕ್ಷಗಾನ ಕಲಾವಿದರೂ ಆಗಿರುವ ಶ್ರೀ ಪುಷ್ಪರಾಜ್ ಕುಕ್ಕಾಜೆ ಅವರು ಮಾತನಾಡಿ, “ಕಲಾಧಾರಾ ಎಂಬ ಹೆಸರಿನ ಅರ್ಥವ್ಯಾಪ್ತಿಯನ್ನು ಮನೋಜ್ಞವಾಗಿ ವಿಶ್ಲೇಷಿಸಿದರು. ‘ಕಲೆಗೆ ಆಧಾರ’ ಎಂಬ ಸಂದೇಶವನ್ನು ಹೊತ್ತಿರುವ ಈ ಹೆಸರು, ಮತ್ತೊಂದೆಡೆ ‘ಕಲೆಯ ಧಾರೆ’ಯಾಗಿ ನಿರಂತರವಾಗಿ ಹರಿದು ಕಲಾವಿದರನ್ನು ಪೋಷಿಸುವ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯ ನಿರಂತರತೆಯನ್ನು ಉಳಿಸುವ ಮಹತ್ತರ ಕಾರ್ಯವನ್ನು ನಿರ್ವಹಿಸುತ್ತಿವೆ” ಎಂದು ಶ್ಲಾಘಿಸಿದರು.


ಕಾರ್ಯಕ್ರಮದಲ್ಲಿ ಕಲಾವಿದರ ಪೋಷಕರು ಉಪಸ್ಥಿತರಿದ್ದು, ತಮ್ಮ ಮಕ್ಕಳಿಗೆ ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರದರ್ಶನ ನೀಡುವ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ನೆರೆದಿದ್ದ ಕಲಾರಸಿಕರು ಪ್ರತಿಯೊಂದು ನೃತ್ಯಕ್ಕೂ ಹೃತ್ಪೂರ್ವಕ ಕರತಾಡನದ ಮೂಲಕ ಮೆಚ್ಚುಗೆ ಸೂಚಿಸಿದರು.

