ಮಂತ್ರಾಲಯ : ಶ್ರೀಮಠದಲ್ಲಿ ನಾದನಮನ ಕಲಾಸೇವೆಯ ಪ್ರಯುಕ್ತ ಹುಣ್ಣಿಮೆಯಂದು ದಿನಾಂಕ 29 ಜೂನ್ 2026ನೇ ಸೋಮವಾರ ಜಿಲ್ಲೆಯ ಪ್ರಪ್ರಥಮ ಮಕ್ಕಳ ಮೇಳ ಮಂತ್ರಾಲಯದಲ್ಲಿ ಪ್ರಪ್ರಥಮ ಬಾರಿಗೆ ‘ಶ್ರೀ ರಾಮ ದರ್ಶನ’ ಎಂಬ ಬಯಲಾಟ ಶ್ರೀಗಳ ಉಪಸ್ಥಿತಿಯಲ್ಲಿ ಜರಗಿತ್ತು.
“ಕಲೆಗಳೆಲ್ಲವೂ ಗೌರವಿಸ ಪಡಬೇಕಾದುದೇ. ಯಕ್ಷಗಾನವೂ ಅದಕ್ಕೆ ಹೊರತಾಗಿಲ್ಲ. ಮಕ್ಕಳು ಕಲೆಯಲ್ಲಿ ಆಸಕ್ತಿ ತೋರಿಸಿ ಶ್ರೀಮಠದವರೆಗೂ ಬಂದು ತಮ್ಮ ಕಲಾ ಜಾಣ್ಮೆಯನ್ನು ಪ್ರದರ್ಶಿಸಿದ್ದಾರೆ. ತಾವೂ ಕೂಡಾ ಶ್ರೀಕ್ಷೇತ್ರದಲ್ಲಿ ವಿವಿಧ ಕಲಾಪ್ರಕಾರಗಳಿಗೆ ಅವಕಾಶವೀಯುತ್ತಾ ಬರುತ್ತಿದ್ದೇವೆ. ಇಂದೂ ಸರಯೂ ಮಕ್ಕಳ ಮೇಳವು ಶ್ರೀ ಗುರುರಾಯರ ಸನ್ನಿಧಿಯಲ್ಲಿ ಯಕ್ಷಗಾನವನ್ನು ಪ್ರಸ್ತುತಪಡಿಸಿದ್ದಾರೆ. ಮುಂದೆಯೂ ನಾವು ಈ ತಂಡವನ್ನು ಶ್ರೀಮಠಕ್ಕೆ ಕರೆಸಿಕೊಳ್ಳುತ್ತೇವೆ. ಮಕ್ಕಳು ಕಲಾಪ್ರೌಢಿಮೆಯಿಂದ ಬೆಳೆದು ಬೆಳಗಲಿ. ನಾವೂ ಸಂತೋಷದಿಂದ ಎಲ್ಲರಿಗೂ ಫಲಮಂತ್ರಾಕ್ಷತೆಯನ್ನು ನೀಡಿ ಹರಸುತ್ತೇವೆ” ಎ೦ದು ಮಂತ್ರಾಲಯದ ಶ್ರೀ ಶ್ರೀ 1008 ವಿಭುದೇಂದ್ರ ತೀರ್ಥ ಸ್ವಾಮೀಜಿಯವರು ಸರಯೂ ಮಕ್ಕಳ ಮೇಳಕ್ಕೆ ಶುಭಾಶೀರ್ವಾದ ನೀಡಿ ಆಶೀರ್ವಚನವಿತ್ತರು.

ಹಿಮ್ಮೇಳದಲ್ಲಿ ರವಿ ಕೃಷ್ಣ ದಂಬೆ, ವರ್ಕಾಡಿ ಮಧುಸೂದನ ಅಲೆವೂರಾಯ, ಅಕ್ಷಯ ರಾವ್ ವಿಟ್ಲ ಸಹಕರಿಸಿದರು. ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ, ವಿಜಯಲಕ್ಷ್ಮೀ ಎಲ್.ಎನ್., ಅಕ್ಷಯ್ ಕೋಡಿಕಲ್, ನಿತ್ಯಶ್ರೀ ಪೂಜಾರಿ, ಸೈಶಾ ಭಂಡಾರಿ, ದೃಶಾಲ್ ಕೆ., ಉದಿತ್ ಕೋಟ್ಯಾನ್, ಆಗಮ್ ಶರ್ಮಾ, ಪ್ರಮೋದ್ ಕೆ., ಗೌತಂ ಭಂಡಾರಿ, ದೀಪಕ್ ಶರ್ಮಾ, ಕುಸುಮಾ ತಂಡದಲ್ಲಿದ್ದರು. ಸಹಾಯಕರಾಗಿ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್, ಶ್ರೀಮತಿ ಭಾರತೀ, ಶ್ರೀಮತಿ ಜಯಶ್ರೀ ಮನೋಜ್, ಶ್ರೀಮತಿ ಪೂಜಾ ಹಾಗೂ ರೂಪೇಶ್ ಪೂಜಾರಿ ತಂಡದಲ್ಲಿದ್ದರು.
