ತೆಕ್ಕಟ್ಟೆ : ನಾದಾವಧಾನ ಪ್ರತಿಷ್ಠಾನ ಕುಂದಾಪುರ ಆಯೋಜಿಸಿದ ‘ನಾದಾವಧಾನ-ವಾರ್ಷಿಕೋತ್ಸವ-2026’ ಕಾರ್ಯಕ್ರಮವು ದಿನಾಂಕ 21 ಜೂನ್ 2026ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಡನೀರು ಮಠದ ಶ್ರೀ ಶ್ರೀಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಗುರು ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುವುದು ಪ್ರಸ್ತುತ ಕಾಲಘಟ್ಟದಲ್ಲಿ ಸುಲಭವಲ್ಲ. ಈ ನಿಟ್ಟಿನಲ್ಲಿ ಸಮರ್ಥ ಗುರುಗಳೀರ್ವರು ಆರೇಳು ವರ್ಷಗಳ ಪರ್ಯಂತ ಆನ್ ಲೈನ್ ಮೂಲಕ ಯಕ್ಷಗಾನ ಕಲಿಸಿ ಶಿಷ್ಯರಿಂದ ಸೈ ಎನಿಸಿಕೊಂಡು ನಿರಂತರ ಚಟುವಟಿಕೆಯಲ್ಲಿ ಶಿಷ್ಯರನ್ನನೇಕರನ್ನು ತೊಡಗಿಸಿಕೊಂಡು ಮುನ್ನಡೆಯುತ್ತಿರುವ ಕಾರ್ಯ ಶ್ಲಾಘನೀಯವಾದದ್ದು. ಕಲಾಸಕ್ತರ ಆನ್ ಲೈನ್ ಮೂಲಕ ಗಮನ ಸೆಳೆದ ಸಂಸ್ಥೆ ‘ನಾದಾವದಾನ’. ಉತ್ತರೋತ್ತರ ಶ್ರೇಯಸ್ಸಾಗಲಿ ಎಂದು ಆಶೀರ್ವಚನ ಸಲ್ಲಿಸಿದರು.

ಸಭಾ ಕಾರ್ಯಕ್ರಮದಲ್ಲಿ ಗುರುಗಳಾದ ಎ.ಪಿ. ಪಾಠಕ್ ಮಾತನ್ನಾಡಿ ಅನಾರೋಗ್ಯ ನಿಮಿತ್ತ ಮನೆಯಲ್ಲುಳಿದ ಪ್ರಾಚಾರ್ಯ ಕೆ.ಪಿ. ಹೆಗಡೆವರಿಗೆ ಗುರುವಂದನೆಯನ್ನು ಗುರು ನಿವಾಸದಲ್ಲಿ ಸಲ್ಲಿಸುವುದಾಗಿ ವಿನಂತಿಸಿದರು. ಪುತ್ತಿಗೆ ರಘುರಾಮ ಹೊಳ್ಳ, ರಾಘವೇಂದ್ರ ಮೈಯ್ಯ, ಪ್ರಸನ್ನ ಭಟ್ ಬಾಳ್ಕಲ್, ವಿದ್ಯುತ್ ಗುತ್ತಿಗೆದಾರರಾದ ಕೆ.ಆರ್. ನಾಯಕ್, ಎನ್.ಜಿ. ಹೆಗಡೆ, ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ, ಮೇಳದ ಯಜಮಾನರಾದ ರಂಜಿತ್ ಶೆಟ್ಟಿ, ಬಣ್ಣದ ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಸಮಿತಿಯ ಮಂಜುನಾಥಯ್ಯ ಉಪಸ್ಥಿತರಿದ್ದರು. ಅಶೋಕ್ ಆಚಾರ್ ಸಾಯ್ಬರಕಟ್ಟೆ ನಿರೂಪಣೆಗೈದರು. ಬಳಿಕ ಯಶಸ್ವಿ ಕಲಾವೃಂದ ಕೊಮೆ ಸಹಕಾರದೊಂದಿಗೆ ನಾದಾವಧಾನ ಸಂಸ್ಥೆಯ ವಿದ್ಯಾರ್ಥಿಗಳಿಂದ ಗಾನವೈಭವ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ‘ಮಾಗದವಧೆ’ ರಂಗ ಪ್ರಸ್ತುತಿಗೊಂಡಿತು.

