ಉಡುಪಿ : ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಉಡುಪಿಯ ಪ್ರಾದೇಶಿಕ ಜಾನಪದ ಮತ್ತು ರಂಗಕಲೆಗಳ ಅಧ್ಯಯನ ಕೇಂದ್ರ (ಆರ್.ಆರ್.ಸಿ.) ಸಂಘಟಿಸುತ್ತಿರುವ ಜನಪದ ದೇಶೀಯ ಕಲೆಯ ಸರಣಿ ಕಲಾ ಕಾರ್ಯಾಗಾರದ 20ನೇ ಕಾರ್ಯಾಗಾರವು ಹಿರಿಯ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಇವರಿಂದ ದಿನಾಂಕ 27 ಜೂನ್ 2026ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಎಂ.ಜಿ.ಎಂ. ಕಾಲೇಜಿನ ಧ್ವನ್ಯಾಲೋಕದಲ್ಲಿ ಉದ್ಘಾಟನೆಗೊಳ್ಳಲಿದೆ.
ಆರ್.ಆರ್.ಸಿ.ಯ ಆಡಳಿತ ಅಧಿಕಾರಿಗಳಾದ ಡಾ. ಬಿ. ಜಗದೀಶ್ ಶೆಟ್ಟಿ ಹಾಗೂ ಫೌಂಡೇಶನ್ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿರುತ್ತಾರೆ. ಭಾರತೀಯ ಕಲೆಯನ್ನು ಉಡುಪಿ ಹಾಗೂ ಕರಾವಳಿ ಭಾಗದ ಜನತೆಗೆ ಪರಿಚಯಿಸುವ ಹಾಗೂ ಅದನ್ನು ಅರ್ಥೈಸಿಕೊಳ್ಳುವ ದೃಷ್ಟಿಯಿಂದ ಈ ಕಾರ್ಯಗಾರವನ್ನು ಸಂಘಟಿಸಲಾಗುತ್ತಿದೆ. ಈ ಸರಣಿ ಕಲಾ ಕಾರ್ಯಗಾರದ ಇಪ್ಪತ್ತನೆಯ ಕಾರ್ಯಾಗಾರ ಇದಾಗಿದ್ದು ಗುಜರಾತನ ಬುಡಕಟ್ಟು ಜನರ ಲೋಕ ಚಿತ್ರ ಶೈಲಿಯಾದ ಪಿಥೋರಾ ಚಿತ್ರಕಲೆಯನ್ನು ನೋಂದಾಯಿಸಿಕೊಂಡ ಆಸಕ್ತರಿಗೆ ಕಲಿಸಿಕೊಡಲಾಗುತ್ತಿದೆ.
ಪಿಥೋರಾ ಚಿತ್ರ ಕಲಾವಿದರಾದ ರಥ್ವಾ ನಾರನ್ ಭಾಯಿ ಹರಿಭಾಯಿ ಇವರು ಈ ಚಿತ್ರಕಲೆಯ ಇತಿಹಾಸ ಅದರ ತಂತ್ರಗಾರಿಕೆ ಚಿತ್ರ ಶೈಲಿ ಇದನ್ನೆಲ್ಲ ವಿವರಿಸುವುದರ ಜೊತೆಗೆ ಈ ಒಂದು ದಿನದ ಕಾರ್ಯಾಗಾರದಲ್ಲಿ ಈ ಶೈಲಿಯ ಚಿತ್ರ ನಿರ್ಮಾಣವನ್ನು ಮಾಡಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ 9845650544 ಇವರನ್ನು ಸಂಪರ್ಕಿಸಬಹುದು.

