ಮೈಸೂರು : ಮೈಸೂರು ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ನಿರಂತರ ಫೌಂಡೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದೊಂದಿಗೆ ಏರ್ಪಡಿಸಿದ್ದ ಹಿರಿಯ ರಂಗಕರ್ಮಿ ಪ್ರಸಾದ್ ಕುಂದೂರು ಅನುವಾದಿತ ‘ಪಾರ್ಟಿ’ ನಾಟಕ ಪ್ರದರ್ಶನವು ದಿನಾಂಕ 03 ಏಪ್ರಿಲ್ 2026ರಂದು ಚಾಲನೆಗೊಂಡಿತು.
ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ವಿಮರ್ಶಕ ಪ್ರೊ. ಓ.ಎಲ್. ನಾಗ ಭೂಷಣಸ್ವಾಮಿ “ರಂಗಭೂಮಿ ಜನಜೀವನವನ್ನು ಪ್ರತಿಬಿಂಬಿಸುವ ಜೀವಂತ ಕ್ಷೇತ್ರವಾಗಿದ್ದು, ಇದನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರಂಗ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ರಂಗಭೂಮಿಯಲ್ಲಿ ಜನಪರ ಚಿಂತನೆ, ಸಾಂಸ್ಕೃತಿಕ ಹೊಣೆಗಾರಿಕೆ ಆಧಾರಿತ ನಾಟಕಗಳು ಹೆಚ್ಚು ಪ್ರದರ್ಶನ ಕಾಣಬೇಕು. ಈ ನಿಟ್ಟಿನಲ್ಲಿ ನಿರಂತರ ಫೌಂಡೇಶನ್ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಪಾರ್ಟಿ ನಾಟಕವನ್ನು ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ಅವರು ಮನೋಜ್ಞವಾಗಿ ನಿರ್ದೇಶಿಸಿದ್ದಾರೆ. ಇಂದಿನ ಸಮಾಜದಲ್ಲಿನ ಚಟುವಟಿಕೆಗಳೇ ಈ ನಾಟಕದ ಕಥಾವಸ್ತುವಾಗಿರುವುದು ಉತ್ತಮ ಸಂಗತಿ. ರಂಗಭೂಮಿ ಕ್ಷೇತ್ರದಲ್ಲಿ ಕಳೆದ ಐದು ದಶಕಗಳ ಪ್ರಾವಿಣ್ಯತೆ ಹೊಂದಿರುವ ಜಂಬೆ ಅವರು, ರಂಗಾಯಣ ನಿರ್ದೇಶಕರಾಗಿ, ನೀನಾಸಂ, ಸಾಣೆಹಳ್ಳಿ ರಂಗಶಾಲೆಗಳಲ್ಲಿ ಕೆಲಸ ಮಾಡಿದ್ದಾರೆ. ಆ ವೇಳೆ ನೂರಾರು ಕಲಾವಿದರನ್ನು ಸೃಷ್ಟಿಸಿದ್ದಾರೆ. ಪಾರ್ಟಿ ನಾಟಕದ ಪಾತ್ರಗಳಲ್ಲೂ ಅವರ ಅಪಾರ ಅನುಭವವನ್ನು ಗುರುತಿಸಬಹುದು” ಎಂದು ಹೇಳಿದರು.

ಈ ವೇಳೆ ಹಿರಿಯ ಕಲಾವಿದರಾದ ರಾಮೇಶ್ವರಿ ವರ್ಮಾ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ನಿರಂತರ ಸಂಸ್ಥೆಯ ಎಂ.ಎಂ. ಸುಗಣ, ನಿವೃತ್ತ ಪ್ರಾಂಶುಪಾಲ ಪ್ರೊ. ಕಾಳಚನ್ನೇಗೌಡ, ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ, ಲೇಖಕ ವಡ್ದಗರೆ ಚಿನ್ನಸ್ವಾಮಿ, ರತ್ನ ಮಿರ್ಲೆ, ನಿರಂತರ ಶ್ರೀನಿವಾಸ್, ಡಾ. ರೇಖಾ. ರಾಘವೇಂದ್ರ ರೆಡ್ಡಿ ಬಳ್ಳಾರಿ ಮತ್ತಿತರರು ಉಪಸ್ಥಿತರಿದ್ದರು. ನಾಟಕವು ದಿನಾಂಕ 04 ಮತ್ತು 05 ಏಪ್ರಿಲ್ 2026ರಂದು ಸಂಜೆ 7-00 ಗಂಟೆಗೆ ಪ್ರದರ್ಶನಗೊಳ್ಳಲಿದೆ.

