ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಇವರ ಆಶ್ರಯದಲ್ಲಿ ದಿನಾಂಕ 20 ಮೇ 2026ರಂದು ಸುರತ್ಕಲ್ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಹರಿಕಥಾ ಕೀರ್ತನ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವಿಜಯ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧಕ ಮತ್ತು ಪುತ್ತೂರು ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷಗಾನ ಪ್ರತಿಷ್ಠಾನದ ಅಧ್ಯಕ್ಷ ಸುಂದರ ಶೆಟ್ಟಿ ಬೆಟ್ಟಂಪಾಡಿ “ಕಥಾ ಕೀರ್ತನೆಯು ಜೀವನ ಮೌಲ್ಯಗಳು ಮತ್ತು ಪೌರಾಣಿಕ ಪ್ರಜ್ಞೆಯನ್ನು ಮೂಡಿಸುವ ಶ್ರೇಷ್ಠ ಕಲೆಯಾಗಿದೆ. ಕಥಾ ಕೀರ್ತನೆಗೆ ಹಿರಿದಾದ, ಪರಂಪರೆಯಿದ್ದು ಧಾರ್ಮಿಕ ಕೇಂದ್ರಗಳು ಈ ಕಲೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕಾಗಿವೆ” ಎಂದು ನುಡಿದರು.

ಹರಿಕಥಾ ಪರಿಷತ್ನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಮಾತನಾಡಿ “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿದಾಸರ ಸಂಖ್ಯೆ ಕಡಿಮೆಯಾಗುತ್ತಿದ್ದು, ಯುವ ಸಮುದಾಯ ಆಸಕ್ತಿ ತಾಳ ಬೇಕಾಗಿದೆ. ಹರಿಕಥಾ ಪರಿಷತ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಸಂಸ್ಥೆಗಳ ಸಹಕಾರ ಅಗತ್ಯ” ಎಂದರು.
ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ಇವರಿಂದ ‘ಶ್ರೀ ಕೃಷ್ಣ ತುಲಾಭಾರ’ ಕಥಾ ಕೀರ್ತನ ನಡೆಯಿತು. ತಬಲಾದಲ್ಲಿ ದೀಪಕ್ ರಾಜ್ ಉಳ್ಳಾಲ್ ಮತ್ತು ಕೀ ಬೋರ್ಡ್ನಲ್ಲಿ ಸತೀಶ್ ಸುರತ್ಕಲ್ ಸಹಕರಿಸಿದರು. ಹರಿಕಥಾ ಪರಿಷತ್ನ ಉಪಾಧ್ಯಕ್ಷ ನಾರಾಯಣ ರಾವ್ ಮತ್ತು ವಿಭು ರಾವ್ ಉಪಸ್ಥಿತರಿದ್ದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿ, ಕೃಷ್ಣಮೂರ್ತಿ ವಂದಿಸಿದರು.

