ಮಂಗಳೂರು : ಸನಾತನ ನಾಟ್ಯಾಲಯದ ವಿದ್ಯಾರ್ಥಿನಿ ವಿದುಷಿ ಶಾರ್ವರಿ ವಿ. ಮಯ್ಯ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 05 ಜುಲೈ 2026ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಜೆ 5-00 ಗಂಟೆಗೆ ನಡೆಯಲಿದೆ.
ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆಯಾಗಿ ಕಳೆದ 17 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿರುವ ಶಾರ್ವರಿ ಮಯ್ಯ, ವೀಣಾವಾದನ ಕಲಿಯುತ್ತಿದ್ದಾರೆ. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡುತ್ತಿದ್ದಾರೆ. ಡಾ. ಗಂಗೂಬಾಯಿ ಹಾನಗಲ್ ನೃತ್ಯ ಮತ್ತು ಸಂಗೀತ ವಿಶ್ವವಿದ್ಯಾಲಯ ನಡೆಸುವ ಭರತನಾಟ್ಯ ವಿದ್ವತ್ ಪರೀಕ್ಷೆಯನ್ನು ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ನಿಟ್ಟೆ ಡೀಮ್ಡ್ ಟು ಬಿ ಯುನಿವರ್ಸಿಟಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಎಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಓದುತ್ತಿರುವ ಇವರು ಸನಾತನ ನಾಟ್ಯಾಲಯದ ಪ್ರಮುಖ ನೃತ್ಯ ಕಾರ್ಯಕ್ರಮಗಳಾದ ‘ಪುಣ್ಯಭೂಮಿ ಭಾರತ’ ಮತ್ತು ‘ರಾಷ್ಟ್ರದೇವೋ ಭವ’ದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ತಂದೆ ವೆಂಕಟೇಶ ಮಯ್ಯ ಮತ್ತು ತಾಯಿ ರಜನಿ ವಿ. ಇವರ ಮಾರ್ಗದರ್ಶನ ಅವರ ಈ ಕಲಾಸಕ್ತಿಗೆ ಪ್ರೇರಣೆಯಾಗಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ, ಬೇಕಲ ಗೋಕುಲಂ ಗೋಶಾಲೆ ನಡೆಸುವ ವೈಶಾಖ ನಟನಂ, ಮಧೂರು ಬ್ರಹ್ಮಕಲಶೋತ್ಸವ, ರಾಜಾಂಗಣ ಉಡುಪಿ ಮುಂತಾದೆಡೆ ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡಿದ್ದಾರೆ. ರಂಗಪ್ರವೇಶ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನೃತ್ಯಗುರು ಉಳ್ಳಾಲ ಮೋಹನ ಕುಮಾರ್, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ವಯಲಿನ್ ವಿದ್ವಾಂಸ ಸ್ವರರತ್ನ ವಿದ್ವಾನ್ ವಿಠಲರಾಮಮೂರ್ತಿ ಭಾಗವಹಿಸುವರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಟುವಾಂಗದಲ್ಲಿ ವಿದುಷಿ ಶಾರದಾಮಣಿ ಶೇಖರ್, ಗಾಯನದಲ್ಲಿ ವಿನೀತ್ ಪುರವಂಕರ, ಮೃದಂಗದಲ್ಲಿ ರಾಜನ್ ಪಯ್ಯನೂರು, ಕೊಳಲಿನಲ್ಲಿ ಮುರಳೀಧರ್ ಉಡುಪಿ ಹಾಗೂ ವೀಣೆಯಲ್ಲಿ ವಿ. ಸೌಂದರರಾಜನ್ ಸಹಕರಿಸುವರು ಎಂದು ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ.

