ಉಡುಪಿ : ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಕೋಲ್ಕತಾದ ಭಾರತೀಯ ಭಾಷಾ ಪರಿಷತ್ ನೀಡುವ ಪ್ರತಿಷ್ಠಿತ ‘ಕರ್ತೃತ್ವ ಸಮಗ್ರ ಸಮ್ಮಾನ್ ಪ್ರಶಸ್ತಿ’ಗೆ ಕನ್ನಡದ ಲೇಖಕಿ ವೈದೇಹಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ರೂ. ಒಂದು ಲಕ್ಷ ಗೌರವ ಧನದೊಂದಿಗೆ ಪದಕ ಒಳಗೊಂಡಿದೆ. ದಿನಾಂಕ 01 ಮೇ 2026ರಂದು ಬಂಗಾಳಿ ಲೇಖಕ ರಾಮ್ ಕುಮಾರ್ ಮುಖೋಪಾಧ್ಯಾಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ‘ಜಾನಕಿ ಶ್ರೀನಿವಾಸಮೂರ್ತಿ’ಯವರು ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಸಣ್ಣಕಥೆ, ಕಾವ್ಯ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದಾರೆ. ‘ವಾಸಂತಿ’ ಎಂಬುದು ಇವರ ಮೂಲ ಹೆಸರು. ಸಾಹಿತ್ಯಕ್ಕಾಗಿ ಹಲವು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಕ್ರೌಂಚ ಪಕ್ಷಿಗಳು ಎಂಬ ಕಥಾಸಂಕಲನಕ್ಕೆ 2009ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.
