ತೆಕ್ಕಟ್ಟೆಯ ಯಶಸ್ವಿ ಕಲಾವೃಂದ (ರಿ.) ಇವರ ಮಹಿಳಾ ಶಾಖೆಯ ಮಹಿಳೆಯರಿಂದ ಫ್ರೆಂಚ್ ಲೇಖಕ ಮೊಪಾಸಾನ ಕಥೆ (ಕನ್ನಡ ಅನುವಾದ : ಪ್ರಮೋದ ಮುತಾಲಿಕ್) ಆಧಾರಿತ ನಾಟಕ ‘ದಿ ಡೆವಿಲ್’ (ರಂಗರೂಪ, ವಿನ್ಯಾಸ ಮತ್ತು ನಿರ್ದೇಶನ : ರೋಹಿತ್ ಬೈಕಾಡಿ)
ಹನೋರ್ ಅನ್ನುವ ಬಡ ರೈತನೊಬ್ಬನ ವೃದ್ಧೆ ತಾಯಿ ಕಾಯಿಲೆ ಹಿಡಿದು ಮರಣಶಯ್ಯೆಯಲ್ಲಿರುತ್ತಾಳೆ. ವೈದ್ಯರು ಪರೀಕ್ಷಿಸಿ ಅವಳು ಇನ್ನು ಕೆಲವೇ ಗಂಟೆಗಳಲ್ಲಿ ಸಾಯುತ್ತಾಳೆಂದೂ ಅವಳನ್ನು ಕೊನೆಯ ಗಳಿಗೆಯಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕೆಂದೂ ತಾಕೀತು ಮಾಡುತ್ತಾರೆ. ಆದರೆ ಹನೋರ್ ಗೆ ಹೊಲದಿಂದ ಬರುವ ಫಸಲಿನ ಚಿಂತೆ. ಕಟಾವಿಗೆ ಹೋಗದಿದ್ದರೆ ಬಲು ದೊಡ್ಡ ನಷ್ಟ. ಹಾಗಾದರೆ ಮುದುಕಿಯ ಬಳಿ ಇರಲು ಯಾರನ್ನಾದರೂ ಹಣ ಕೊಟ್ಟು ನೇಮಿಸಿ ಹೋಗು ಅನ್ನುತ್ತಾರೆ ವೈದ್ಯರು. ಹನೋರ್ ಪೈಸೆ ಪೈಸೆಗೂ ಲೆಕ್ಕ ಹಾಕುವವನು. ಸಾಯುವವರ ಬಳಿ ನಿಂತು ಚಾಕರಿ ಮಾಡಿ ಬಹಳಷ್ಟು ಅನುಭವವಿರುವ ರಾಪೆ ಎಂಬ ಹೆಂಗಸಿನ ಬಳಿ ಹೋಗಿ ವ್ಯವಾಹಾರ ಕುದುರಿಸುತ್ತಾನೆ. ಮಾಡಿಕೊಂಡ ಒಪ್ಪಂದವೇನೆಂದರೆ ಮುದುಕಿ ಬೇಗ ಸತ್ತರೆ ಅವಳಿಗೆ ಲಾಭ. ತಡ ಮಾಡಿದರೆ ಅವಳಿಗೆ ನಷ್ಟ. ಏನಿದ್ದರೂ ತನಗೆ ಏನೂ ನಷ್ಟವಾಗಲಾರದೆಂದು ಹನೋರ್ ನಂಬುತ್ತಾನೆ.

ಮುದುಕಿ ಎರಡು ಮೂರು ದಿನಗಳಾದರೂ ಸಾಯುವುದಿಲ್ಲ. ರಾಪೆಗೂ ಸಾಕಾಗುತ್ತದೆ. ಹನೋರ್ ಚಾಪೆ ಕೆಳಗೆ ತೂರಿದರೆ ಅವಳು ರಂಗೋಲಿ ಕೆಳಗೆ ತೂರುವವಳು. ಅವಳು ಭೂತ ಪಿಶಾಚಿಗಳ ವೇಷ ಹಾಕಿಕೊಂಡು ಬಂದು ಮುದುಕಿಯನ್ನು ಹೆದರಿಸುತ್ತಾಳೆ. ನಿತ್ರಾಣಿಯಾಗಿದ್ದ ಮುದುಕಿ ಹೆದರಿ ಸತ್ತೇ ಹೋಗುತ್ತಾಳೆ. ಆ ದಿನ ಹೊಲದಿಂದ ಬಂದ ಹನೋರ್ ‘ಇನ್ನು ಈ ಹೆಂಗಸಿಗೆ ಎಷ್ಟು ಹಣ ಕೊಡಬೇಕಾಗುತ್ತದೋ’ ಎಂದು ಚಿಂತಿಸುತ್ತಾನೆ. ಒಟ್ಟಿನಲ್ಲಿ ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧಗಳಿಗಿಂತಲೂ ಹಣದ ವ್ಯವಹಾರವೇ ಹೇಗೆ ಹೆಚ್ಚು ಮುಖ್ಯವಾಗುತ್ತದೆ ಮತ್ತು ಬಡತನವು ಮನುಷ್ಯನ ಕೈಯಲ್ಲಿ ಏನೆಲ್ಲ ಮಾಡಿಸುತ್ತದೆ, ಭಾವನೆಗಳು ಬತ್ತುವಂತೆ ಮಾಡುತ್ತದೆ ಅನ್ನುವುದನ್ನು ನಾಟಕ ತೋರಿಸುತ್ತದೆ.

ನಾಟಕದಲ್ಲಿ ಮುಖ್ಯವಾಗಿ ಇರುವುದು ಮೂರೇ ಪಾತ್ರಗಳು. ಹನೋರ್ ಪಾತ್ರದಲ್ಲಿ ಸುಪ್ರೀತಾ ಪುರಾಣಿಕ್, ವೈದ್ಯರ ಪಾತ್ರದಲ್ಲಿ ಸಂಧ್ಯಾ ಭಟ್ ಮತ್ತು ಅಗಸರ ಹೆಂಗಸಿನ ಪಾತ್ರದಲ್ಲಿ ಅಕ್ಷತಾ ಆಚಾರ್ಯ ಸಮರ್ಥವಾಗಿ ಅಭಿನಯಿಸಿದ್ದಾರೆ. ಕಥೆಯ ನಿರೂಪಣೆಗೆ ನಿರ್ದೇಶಕರು ಆರು ಮಂದಿ ಇರುವ ಒಂದು ಮೇಳವನ್ನು ನಿರ್ಮಿಸಿದ್ದಾರೆ. ಸುಮನಾ ಹೇರ್ಳೆ, ಭಾಗ್ಯಲಕ್ಷ್ಮಿ ವೈದ್ಯ, ಸಂಧ್ಯಾ, ರೇಷ್ಮಾ, ಶ್ವೇತಾ, ರೇಣುಕಾ, ನಟಿಸಿದ ಮೇಳದಲ್ಲಿ ಅತ್ಯುತ್ತಮವಾದ ಹೊಂದಾಣಿಕೆಯಿದ್ದು ಪ್ರತಿಯೊಬ್ಬರ ನಿರ್ವಹಣೆ ಬಹಳ ಅಚ್ಚುಕಟ್ಟಾಗಿ ಮೂಡಿ ಬಂತು. ಪಾತ್ರಗಳ ಸ್ವಭಾವ-ವರ್ತನೆಗಳಿಗೆ ಅವರು ಪ್ರತಿಕ್ರಿಯಿಸುವ ಪರಿ ಹೃದಯಸ್ಪರ್ಶಿಯಾಗಿತ್ತು. ವೇಷಭೂಷಣಗಳೂ ಔಚಿತ್ಯ ಪೂರ್ಣವಾಗಿದ್ದವು. ತಾಂತ್ರಿಕ ನಿರ್ವಹಣೆಯ ದೃಷ್ಟಿಯಿಂದಲೂ (ಸುಮೇಧ ಪುರಾಣಿಕ್ ಮತ್ತು ಶ್ರೀಶ ತೆಕ್ಕಟ್ಟೆ) ನಾಟಕ ಯಶಸ್ವಿಯಾಯಿತು.

ವಿಮರ್ಶಕರು : ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು
