ಮಂಗಳೂರು : ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ.) ಕೊಂಚಾಡಿ ಇವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಲೆ ಅಷ್ಟಾಹ ಸಂಭ್ರಮ ‘ಯಕ್ಷಮಂಜರಿ’ಯ ದ್ವಿತೀಯ ದಿನದ ಕಾರ್ಯಕ್ರಮವು ದಿನಾಂಕ 02 ಮಾರ್ಚ್ 2026ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಶ್ರೀ ಅರವಿಂದ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಮಾತನಾಡುತ್ತಾ “ದೇವಸ್ಥಾನಗಳು ಕೇವಲ ಪೂಜಾ ಕೇಂದ್ರಗಳಾಗದೇ ನಮ್ಮ ಸಂಸ್ಕೃತಿ ಸಂಸ್ಕಾರ ಬೆಳೆಸುವ ಕೇಂದ್ರಗಳಾಗಬೇಕು. ಇಂತಹ ಕಾರ್ಯಕ್ರಮಗಳು ಪ್ರತಿಷ್ಠಾನದಿಂದ ಆಯೋಜಿಸಲ್ಪಡಲಿ. ದೇವರ ಅನುಗ್ರಹ ಸರ್ವರಿಗೂ ಪ್ರಾಪ್ತವಾಗಲಿ” ಎಂದು ಹಾರೈಸಿದರು.

ವೇದಿಕೆಯಲ್ಲಿ ಮಂದಾರಬಯಲು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಶ್ರೀ ಲಕ್ಷ್ಮಣ ದೇವಾಡಿಗ, ಖ್ಯಾತ ನಿರೂಪಕಿ ವಾಗ್ಮಿ ಶ್ರೀಮತಿ ಪ್ರಿಯಾ ಹರೀಶ್, ಉದ್ಯಮಿ ಶ್ರೀ ಸುರೇಶ್ ಕುಮಾರ್, ಸಂಗೀತ ಗುರುಗಳಾದ ಶ್ರೀಮತಿ ರಶ್ಮಿ ರವಿಕುಮಾರ್, ಯಕ್ಷ ವಾಸ್ಯಮ್ (ರಿ.) ಕಾರಿಂಜ ಇದರ ಸಂಚಾಲಕಿ ಸಾಯಿಸುಮಾ ನಾವಡ, ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಮಧುಸೂದನ ಅಲೆವೂರಾಯ, ಅಧ್ಯಕ್ಷೆ ಗೀತಾ ಲಕ್ಷ್ಮೀಶ, ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ಕಲಾಭಿಮಾನಿಗಳು ಉಪಸ್ಥಿತರಿದ್ದರು. ನಂತರ ಯಕ್ಷವಾಸ್ಯಮ್ (ರಿ.) ಕಾರಿಂಜ ಇದರ ಮಹಿಳಾ ಕಲಾವಿದರಿಂದ ‘ಇಂದ್ರ ಕೀಲಕ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
