ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ದೇವಾಡಿಗ ಸಂಘ ಜಂಟಿಯಾಗಿ ದಿನಾಂಕ 04 ಎಪ್ರಿಲ್ 2026ರಂದು ಮುಂಬಯಿ ವಿಶ್ವವಿದ್ಯಾಲಯದ ಕವಿ ಕುಸುಮಾಗ್ರಜ ಮರಾಠಿ ಭಾಷಾಭವನದಲ್ಲಿ ಆಯೋಜಿಸಲಾಗಿದ್ದ ಕನ್ನಡ ವಿಭಾಗದ ನಲವತ್ತೆಂಟರ ಸಂಭ್ರಮ, ಪ್ರೊ. ಜಿ.ಎನ್. ಉಪಾಧ್ಯ ಇವರ ಹನ್ನೆರಡು ಕೃತಿಗಳ ಬಿಡುಗಡೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ‘ವರ್ತಮಾನದಲ್ಲಿ ಸಾಹಿತ್ಯದ ಅಗತ್ಯ ಮತ್ತು ಮಹತ್ವ’ ಎಂಬ ವಿಷಯದ ಕುರಿತು ಉಪನ್ಯಾಸಕರಾಗಿ ಪಾಲ್ಗೊಂಡ ನವದೆಹಲಿಯ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಬಿ.ಎನ್. ಶ್ರೀಕೃಷ್ಣ ಇವರು ಮಾತನಾಡಿ “ಯಾವುದು ಸಮಾಜವನ್ನು, ಜನರ ಮನಸ್ಸುಗಳನ್ನು ಜೋಡಿಸುವ ಕೂಡಿಸುವ ಕೆಲಸವನ್ನು ಮಾಡುವುದೋ, ಅದು ಸಾಹಿತ್ಯ. ಜನರಲ್ಲಿ ಒಗ್ಗಟ್ಟನ್ನು, ಹೊಂದಾಣಿಕೆಯನ್ನು ಮಾಡಿಸುವುದು ನಿಜವಾದ ಸಾಹಿತ್ಯ. ಅದು ಜನರಲ್ಲಿ ಒಂದು ಪ್ರೇರೇಪಣೆಯನ್ನು, ಹೃದಯ ಸ್ಪಂದನವನ್ನು ಉಂಟುಮಾಡುತ್ತದೆ. ಸಾಹಿತ್ಯವು ಕೆಲವೊಮ್ಮೆ ನೇರವಾಗಿ ಕೆಲವೊಮ್ಮೆ ಪರ್ಯಾಪ್ತವಾಗಿ, ವ್ಯಂಗ್ಯವಾಗಿ ಒಳ್ಳೆಯ ಮಾರ್ಗವನ್ನು ಅನುಸರಿಸಲು ಹೇಳಿಕೊಡುತ್ತದೆ. ಸಮಾಜದಲ್ಲಿ ತಿಕ್ಕಾಟ ಬರದ ರೀತಿಯಲ್ಲಿ, ಇತರರಿಗೆ ಕೆಡುಕು ಮಾಡದಂತೆ ಹೇಳಿಕೊಡುವ, ಸರ್ವರಿಗೂ ಒಳಿತನ್ನು ಬಯಸುವುದು. ಹಿತವಿಲ್ಲದ್ದು, ಮಿತವಲ್ಲದ್ದು ಸಾಹಿತ್ಯವಲ್ಲ. ವಿವಿಧ ಭಾಷೆಗಳಲ್ಲಿ ರಚಿತವಾದ ರಾಮಾಯಣವು ಮಾನವೀಯತೆ, ಧರ್ಮ, ಸಾಮಾಜಿಕ ಹಿತವನ್ನು ಪರಿಣಾಮಕಾರಿಯಾಗಿ ಹೇಳುತ್ತದೆ. ಇಂತಹ ಸಾಹಿತ್ಯವನ್ನು ಓದಿ ಏನಾದರೂ ಕಲಿಯಲು, ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಪಡಬೇಕು. ಎಂದಿಗಿಂತ ಹೆಚ್ಚು ಇಂದು ಇಂತಹ ಸಾಹಿತ್ಯದ ಅಗತ್ಯವಿದೆ. ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಎಲೆಕ್ಟ್ರಿಕ್ ವೆಹಿಕಲ್ ನಂತೆ ಓಡುತ್ತ, ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ವಿಭಾಗದ ನಲವತ್ತೆಂಟರ ಸಂಭ್ರಮದ ಹೊತ್ತಿಗೆ ಪ್ರೊ. ಉಪಾಧ್ಯ ಇವರು ಹನ್ನೆರಡು ಕೃತಿಗಳನ್ನು ರಚಿಸಿ ಬಿಡುಗಡೆ ಮಾಡುತ್ತಿರುವುದು, ಅವರು ಒಬ್ಬ ಶ್ರೇಷ್ಠ ಲೇಖಕರಾಗುವ ಯೋಗ್ಯತೆಯನ್ನು ಗಳಿಸಿಕೊಂಡಿದ್ದಾರೆ. ಕನ್ನಡ ವಿಭಾಗದ ತೇರು ಇದೇ ರೀತಿ ಭರದಿಂದ ಓಡುತ್ತ ಇರಲಿ” ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಂಗತಜ್ಞ, ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ.ಭರತ್ ಕುಮಾರ್ ಪೊಲಿಪು ಅವರು ಮಾತನಾಡಿ, “ಸಾಹಿತ್ಯ ಯಾವತ್ತೂ ನಮ್ಮ ಅಂತಃಕರಣವನ್ನು ಅರಳಿಸಬೇಕು. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವಲ್ಲಿ ಸಾಹಿತ್ಯ ನಮಗೆ ಪ್ರೇರಕವಾಗಬೇಕು. ಸಾಹಿತಿ ಕೂಡ ಸಮಾಜದ ಒಂದು ನಿರ್ಮಿತಿ. ಅವನು ಬರೆಯುವ ಸಾಹಿತ್ಯ ಅವನನ್ನು ಬೆಳೆಸುವುದರ ಜೊತೆಗೆ ಅವನ ಅಂತರಂಗವನ್ನು ಅರ್ಥೈಸಿ ಇಡೀ ಸಮಾಜವನ್ನು ಅರ್ಥೈಸಿಕೊಳ್ಳಲು, ಓದುಗನನ್ನು ಒಂದು ಹೊಸ ಮನುಷ್ಯನನ್ನು ಮಾರ್ಪಡಿಸಲು ಅನುಕೂಲ ಮಾಡಿಕೊಡಬೇಕು. ಇಂದು ಪ್ರೊ. ಉಪಾಧ್ಯ ಇವರ ಹನ್ನೆರಡು ಕೃತಿಗಳು ಬಿಡುಗಡೆಗೊಳ್ಳುತ್ತಿರುವುದು ಒಂದು ರೋಚಕ ಸನ್ನಿವೇಶ. ಇಂದಿನದು ಸಾಹಿತ್ಯ ಮತ್ತು ಸಂಸ್ಕೃತಿಯ ಅನುಸಂಧಾನದ ಕಾರ್ಯಕ್ರಮ. ಉಪಾಧ್ಯರು ಕನ್ನಡ ಸಾರಸ್ವತ ಲೋಕದಲ್ಲಿ ಒಂದು ಹೊಸ ಬಗೆಯ ವಿಮರ್ಶಾ ವಿಧಾನವನ್ನು ರೂಪಿಸಿದವರು. ಉಪಾಧ್ಯರ ವಿಮರ್ಶೆ ಕಾಂತಾಸಂಮ್ಮಿತವಾಗಿ ತಾಯಿಯ ಅಂತಃಕರಣವನ್ನು ಹೊರಹೊಮ್ಮಿಸುವಂಥ ವಿಮರ್ಶೆಯಾಗಿದೆ. ಅದು ಕೃತಿಯ ಉತ್ತಮಾಂಶಗಳನ್ನು ಹೇಳುತ್ತ, ಓದುಗರನ್ನು ಹೊಸ ಬಗೆಯ ಓದಿಗೆ, ಚಿಂತನೆಗೆ ಹಚ್ಚುವಂಥದ್ದು. ಅವರು ವಿಮರ್ಶೆಯ ಹೊಸ ವಿಧಾನವನ್ನು ಹೇಳಿ ಕೊಟ್ಟು ವಿದ್ಯಾರ್ಥಿಗಳನ್ನು ಕೂಡ ತಯಾರು ಮಾಡುತ್ತಾ ಇದ್ದಾರೆ. ಅದಕ್ಕಾಗಿ ಅವರನ್ನು ನಾನು ಅಭಿನಂದಿಸುತ್ತೇನೆ. ಧರ್ಮಪಾಲ ದೇವಾಡಿಗರು ಇಡೀ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಸಂಘಟಕರಾಗಿಯೂ ಪರಿಚಿತರು. ಓರ್ವ ಸಂಘಟಕ ಸೃಜನಶೀಲವಾಗಿ ಕೆಲಸವನ್ನು ಮಾಡುವ ಪ್ರಯತ್ನಪಡುತ್ತಾನೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಹಿರಿಯ ಪ್ರಾಧ್ಯಾಪಕರೂ ಆದ ಪ್ರೊ. ಉಪಾಧ್ಯ ಇವರು, ಕನ್ನಡ ವಿಭಾಗದ ನಲವತ್ತೆಂಟರ ಸಂಭ್ರಮ, ಹನ್ನೆರಡು ಕೃತಿಗಳ ಬಿಡುಗಡೆ ಕಾರ್ಯಕ್ರಮವು ಸಾಂಸ್ಕೃತಿಕ ಸಂವಾದ ಕಾರ್ಯಕ್ರಮವಾಗಿದೆ ಎಂದು ಅಂದುಕೊಂಡಿದ್ದೇನೆ. ದೇಶವಿದೇಶಗಳಲ್ಲಿ ಹೆಸರು ಮಾಡಿರುವಂತಹ ಜಸ್ಟೀಸ್ ಶ್ರೀಕೃಷ್ಣ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಸಾಹಿತ್ಯದ ಅಗತ್ಯ ಮತ್ತು ಮಹತ್ವದ ಕುರಿತು ಮಾತಾಡುವುದು ನಮ್ಮ ಭಾಗ್ಯ. ಕನ್ನಡವನ್ನು ಕಟ್ಟುವ ಕಾಯಕ ನಿರಂತರವಾಗಿ ನಡೆಯಬೇಕಾಗುತ್ತದೆ. ನಾವು ದೊಡ್ಡ ಪರಂಪರೆಯ ವಾರಸುದಾರರು ಎಂದು ಅಭಿಮಾನ ಪಡಬೇಕು. ಬೇರೆ ಭಾಷೆಗಳಿಗೆ ಇಲ್ಲದ ಸುದೀರ್ಘವಾದ ಸಾಹಿತ್ಯಕ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಕನ್ನಡ ನಮ್ಮ ಭಾಷೆ. ನಮ್ಮ ಭಾಷೆ, ನಮ್ಮ ಸಾಹಿತ್ಯ ಸಂಸ್ಕೃತಿಯ ಸಂವಾದ ನಿರಂತರವಾಗಿ ನಡೆಯಬೇಕಾಗುತ್ತದೆ. ಇವತ್ತಿನ ಕಾರ್ಯಕ್ರಮ ಒಂದು ರೀತಿಯಲ್ಲಿ ಸಾಂಸ್ಕೃತಿಕ ಪುನರ್ ನಿರ್ಮಾಣ ಎಂದುಕೊಂಡಿದ್ದೇನೆ. ಒಬ್ಬ ಲೇಖಕ ಸಮಾಜದ ನಡುವೆ ನಿಂತು ವಿಚಾರಗಳನ್ನು ದಾಖಲಿಸಬೇಕಾಗುತ್ತದೆ. ಒಂದು ಕೃತಿ ಹುಟ್ಟುವುದು ಅಂದರೆ ಅದು ಕಾಲದ ಬೇಡಿಕೆ. ಹಿಂದಿನ ತಲೆಮಾರಿನವರು ಸಾಹಿತ್ಯಕವಾಗಿ ದೊಡ್ಡ ಕೆಲಸವನ್ನು ಮಾಡಿದವರು. ಆ ಕೆಲಸವನ್ನು ನಾವು ಇವತ್ತು ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ. ಸಾಹಿತ್ಯ ನಮಗೆ ಎಚ್ಚರಿಕೆಯನ್ನು ಕೊಡುತ್ತದೆ” ಎಂದು ನುಡಿದರು.

ಸಂಘಟಕರಾದ ಧರ್ಮಪಾಲ ದೇವಾಡಿಗ, ಸಂಘಟಕರಾದ ಹಿರಿಯಡಕ ಮೋಹನದಾಸ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಪೂರ್ಣಿಮಾ ಶೆಟ್ಟಿ ಅವರು ಪ್ರೊ. ಜಿ.ಎನ್. ಉಪಾಧ್ಯ ಇವರ ನೂತನ ಕೃತಿ ‘ಬಾಯಿ ಇದ್ದರೆ ಬೊಂಬಾಯಿ’ ಕೃತಿಯ ಪರಿಚಯವನ್ನು ಮಾಡಿ, ಈ ಸಂಕಲನವು ಸಮಾಜ, ಸಂಸ್ಕೃತಿ, ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳ ಕುರಿತು ಚಿಂತನೆಗೆ ಹಚ್ಚುವ ಕೃತಿಯಾಗಿದೆ. ಲಘು ಹಾಸ್ಯ, ಗಂಭೀರತೆ ಮತ್ತು ಚಿಂತನೆಯ ಮಿಶ್ರಣ ಓದಿನ ಪ್ರತಿಯೊಂದು ಹಂತದಲ್ಲೂ ಓದುಗರನ್ನು ಆಕರ್ಷಿಸುತ್ತದೆ. ಕತ್ತಲಿನಿಂದ ಬೆಳಕಿನತ್ತ ಸಾಗುವ ಚಿಂತನಾಪಥವನ್ನು ತೋರಿಸುವ, ವಿಚಾರಪ್ರಜ್ಞೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿಸುವ ಕೃತಿ ‘ಬಾಯಿ ಇದ್ದರೆ ಬೊಂಬಾಯಿ’ ಎಂದರು.
ಕಲಾ ಭಾಗ್ವತ್ ಅವರು ಪ್ರೊ . ಉಪಾಧ್ಯ ಅವರ ನಾಲ್ಕು ವಿಮರ್ಶಾ ಕೃತಿಗಳ ಕುರಿತು ಮಾತನಾಡುತ್ತಾ ವರ್ತಮಾನದ ಕನ್ನಡಕದಲ್ಲಿ ಸಮಗ್ರವಾಗಿ ಕಾಣುವ ಉಪಾಧ್ಯ ಅವರ ವಿಮರ್ಶಾ ಕೃತಿಗಳು ಒಂದು ಬಗೆಯ ಸಾಂಸ್ಕೃತಿಕ ಪಠ್ಯವಾಗಿಯೂ ಜ್ಞಾನ ವಲಯವನ್ನು ವಿಶಾಲವಾಗಿ ವಿಸ್ತರಿಸಿಕೊಂಡಿವೆ. ವಿಮರ್ಶೆಯ ಸಿಕ್ಕನ್ನು ಬಿಡಿಸಿ ಸರಳ ಸುಲಲಿತವಾದ ಭಾಷೆಯಲ್ಲಿ ಈ ಎಲ್ಲ ಕೃತಿಗಳು ಇವೆ ಎಂಬುದಾಗಿ ವಿಶ್ಲೇಷಿಸಿದರು.
‘ಕನ್ನಡ ನಾಡು ನುಡಿಗೆ ಮುಂಬೈ ಕೊಡುಗೆ’ ಮತ್ತು ‘ಕನ್ನಡ ಸಾಹಿತ್ಯ ಸಂಸ್ಕೃತಿಗೆ ಮುಂಬೈ ಕೊಡುಗೆ’ ಕೃತಿಗಳನ್ನು ಪರಿಚಯಿಸಿದ ಸುರೇಖಾ ಹರಿಪ್ರಸಾದ್ ಶೆಟ್ಟಿಯವರು, ಕನ್ನಡ ನಾಡು ನುಡಿ, ಸಾಹಿತ್ಯ ಸಂಸ್ಕೃತಿಗೆ ವಿವಿಧ ಕ್ಷೇತ್ರಗಳ ಮೂಲಕ ಮುಂಬೈ ಕನ್ನಡಿಗರು ಕೊಟ್ಟ ಕೊಡುಗೆ, ಅವರ ಹೋರಾಟಗಳು ಮತ್ತು ಸಾಧನೆಗಳನ್ನು ವಿಶಾಲ ನೆಲೆಯಲ್ಲಿ ಚರ್ಚಿಸಿರುವುದು ಚಾರಿತ್ರಿಕ ದೃಷ್ಟಿಯಿಂದ ಮಹತ್ತ್ವದ್ದಾಗಿದೆ. ಭವಿಷ್ಯದಲ್ಲಿ ಕನ್ನಡದ ಬೆಳವಣಿಗೆಗೆ ಬೇಕಾದ ಕೈ ದೀವಿಗೆಯನ್ನು ಈ ಕೃತಿಗಳು ತೋರುತ್ತವೆ ಎಂದರು.

ಅನಿತಾ ಪೂಜಾರಿ ತಾಕೋಡೆ ಅವರು ‘ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು’ ಪರಿಚಯಿಸಿ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೊಸತನವನ್ನು ತಂದುಕೊಟ್ಟ ವಿನಾಯಕರ ಕಾವ್ಯ ಸಾಗರದ ಉನ್ನತ ಮೌಲ್ಯಗಳನ್ನು ಶೋಧಿಸಿ ಬೆಳಕಿಗೆ ತಂದಿರುವುದು ಕೃತಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದೆ; ಸಾಹಿತ್ಯವನ್ನು ಒಂದು ಕಾಯಕದಂತೆ ಅವಿರತವಾಗಿ ಮುನ್ನಡೆಸಿಕೊಂಡು ಬಂದ ವಿನಾಯಕರ ಸಾಹಿತ್ಯ ನಿರ್ಮಿತಿಯ ಹರವುಗಳು ಇಲ್ಲಿ ಬಹುನೆಲೆಗಳಲ್ಲಿ ಚಿತ್ರಿತವಾಗಿವೆ. ವಿನಾಯಕರ ಒಟ್ಟು ಸಾಹಿತ್ಯ ಸಾಧನೆ ಮತ್ತು ಸೃಜನಶೀಲತೆಗೆ ಈ ಕೃತಿ ಕನ್ನಡಿಯಾಗಿದೆ ಎಂದರು.
ಪ್ರತಿಭಾ ರಾವ್ ಅವರು ‘ಗೋದಾವರಿ ತೀರ ಮತ್ತು ಕನ್ನಡದ ಅಸ್ಮಿತೆ’ ಕೃತಿಯನ್ನು ಪರಿಚಯ ಮಾಡಿಕೊಡುತ್ತ, ಮಹಾರಾಷ್ಟ್ರದ ಹಲವು ಸ್ಥಳನಾಮಗಳು, ಕನ್ನಡ ಶಾಸನಗಳಾಧಾರಿತ ಕನ್ನಡಿಗರ ದಾನ ದತ್ತಿಗಳು, ಈಗಿನ ಮಹಾರಾಷ್ಟ್ರವು ಕರ್ನಾಟಕದ ಭಾಗವೇ ಆಗಿತ್ತು ಎಂಬುದಕ್ಕೆ ಬೇಕಾದ ಎಲ್ಲಾ ಪುರಾವೆಗಳನ್ನು ಒಂದೇ ಕಡೆ ಕ್ರೋಢೀಕರಿಸಿ ನಾಡ ಹೊರಗಿನ ಕನ್ನಡದ ಇತಿಹಾಸವನ್ನು ಪರಿಚಯಿಸುವಲ್ಲಿ ಈ ಕೃತಿಯು ಒಂದು ಮಹತ್ತ್ವದ ಕೊಡುಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರೊ. ಉಪಾಧ್ಯರ ‘ವಸುಧಾ ವಲಯ’ದ ಕುರಿತು ಸವಿತಾ ಅರುಣ್ ಶೆಟ್ಟಿ ಅವರು ಮಾತನಾಡಿ, ಮಂಗಳೂರು ಮೈಸೂರು ಧಾರವಾಡ ವಲಯಗಳಂತೆ ಮುಂಬೈ ವಲಯದಲ್ಲೂ ಕನ್ನಡ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ, ಅವಿಶ್ರಾಂತವಾಗಿ ನಡೆಯುತ್ತಿದ್ದುದನ್ನು ನಡೆಯುತ್ತಿರುವುದನ್ನು ಇಲ್ಲಿನ ಲೇಖನಗಳು ಹೇಳುತ್ತವೆ; ಒಂದು ಕಾಲದಲ್ಲಿ ಕನ್ನಡ ನಾಡಿನ ಭಾಗವೇ ಆಗಿದ್ದ ಮಹಾರಾಷ್ಟ್ರದ ಸ್ಥಳಗಳಲ್ಲಿ, ಇಲ್ಲಿ ರಚಿತವಾಗಿರುವ ಕೃತಿಗಳಲ್ಲಿ, ಇಲ್ಲಿರುವ ದೇವಾಲಯಗಳಲ್ಲಿ, ಶಾಸನಗಳಲ್ಲಿ ಕನ್ನಡತನ ಎಷ್ಟು ಶ್ರೀಮಂತವಾಗಿದೆ ಎಂಬುದನ್ನು ಆಧಾರ ಸಹಿತವಾಗಿ ಕೃತಿಕಾರರು ಪ್ರಸ್ತುತಪಡಿಸುವ ಮೂಲಕ ಕರ್ನಾಟಕವನ್ನು ಹೊರತುಪಡಿಸಿ ಹೊರನಾಡಿನಲ್ಲೊಂದು ಸದೃಢ ಕನ್ನಡ ವಲಯ ರೂಪುಗೊಂಡಿದ್ದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ. ವೈ.ವಿ ಮದುಸೂಧನ ರಾವ್ ಇವರಿಗೆ ವಿಕಾಸ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು. ಅದೇ ರೀತಿ ಎಂ.ಬಿ. ಕುಕ್ಕಾನ್ ಬಂಗಾರ ಪದಕ ಪಡೆದ ವಿಕ್ರಂ ಜೋಶಿ ಅವರನ್ನು ವಿಭಾಗದ ಪರವಾಗಿ ಗೌರವಿಸಲಾಯಿತು. ಕನ್ನಡ ವಿಭಾಗದ ವಿದ್ಯಾರ್ಥಿ ಪುಷ್ಪಲತಾ ಗೌಡ ಅವರು ಸಾಹಿತ್ಯ ಶತಗ್ರಂಥಕಾರ- ಪ್ರೊ. ಜಿ.ಎನ್.ಉಪಾಧ್ಯ ವಿಶೇಷ ಸಂಗ್ರಹವನ್ನು ವಿಭಾಗಕ್ಕೆ ಅರ್ಪಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದರು.
