ಕಾಸರಗೋಡು : ಕಾಸರಗೊಡು ಜಿಲ್ಲೆಯ ಸಾಂಸ್ಕೃತಿಕ ಸಾಹಿತ್ಯಕ ಸಂಸ್ಥೆಯಾದ ‘ರಂಗಚಿನ್ನಾರಿ’ ಕಳೆದ ಇಪ್ಪತ್ತು ವರ್ಷಗಳಿಂದ ಕಾಸರಗೋಡಿನಲ್ಲಿ ಹತ್ತುಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ‘ನಾರಿಚಿನ್ನಾರಿ’ ಎಂಬ ಮಹಿಳಾ ಘಟಕ ಮತ್ತು ‘ಸ್ವರಚಿನ್ನಾರಿ’ ಎಂಬ ಸಂಗೀತ ಘಟಕವನ್ನು ಕಟ್ಟಿಕೊಂಡು ಕನ್ನಡದ ಕೆಲಸ ಮಾಡುತ್ತಾ ಬರುತ್ತಿದೆ. ಹಾಗೂ ಹಿರಿಯ ಕಿರಿಯ ಪ್ರತಿಭೆಗಳಿಗೆ ಶ್ರೀ ಕೇಶವಾನಂದ ಭಾರತಿ ಸ್ವಾಮಿಜಿ ಸ್ಮರಣಾರ್ಥ ಪ್ರಶಸ್ತಿ, ರಂಗ ಚಿನ್ನಾರಿ ಪ್ರಶಸ್ತಿ, ರಂಗ ಚಿನ್ನಾರಿ ಯುವ ಪ್ರಶಸ್ತಿ ನೀಡಿ ಪ್ರತಿಭೆಗಳನ್ನು ಗೌರವಿಸಿದೆ. ಇದರಂತೆ 2025-26ನೇ ಸಾಲಿನ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ರಂಗ ಚಿನ್ನಾರಿಯ ನಿರ್ದೇಶಕರುಗಳಾದ ಕಾಸರಗೋಡು ಚಿನ್ನಾ, ಸತೀಶ್ಚಂದ್ರ ಭಂಡಾರಿ, ಸತ್ಯನಾರಾಯಣ ಕೆ., ಡಾ ಸಂತೋಷ್ ಕಾಮತ್ ಮತ್ತು ನ್ಯಾಯವಾದಿ ಕೆ.ಎನ್. ಅಶೋಕ್ ಕುಮಾರ್ ತಿಳಿಸಿದ್ದಾರೆ. ‘ಶ್ರೀ ಕೇಶವಾನಂದ ಭಾರತಿ ಸ್ವಾಮಿಜಿ ಸ್ಮರಣಾರ್ಥ ಪ್ರಶಸ್ತಿ’ (ಡಾ. ಅನಂತ ಕಾಮತ್ ಪ್ರಾಯೋಜಿತ ಹರಿರಾಯ ಕಾಮತ್, ಪ್ರೇಮಾ ಕಾಮತ್ ಸ್ಮರಣಾರ್ಥ ಹತ್ತು ಸಾವಿರ ರೂಪಾಯಿ ನಗದು ಪುರಸ್ಕಾರ) ಪದ್ಮನಾಭ ಶೆಟ್ಟಿ ಮಜಕಾರ, ‘ರಂಗ ಚಿನ್ನಾರಿ ಪ್ರಶಸ್ತಿ’ (ಶಶಿಕಾಂತ ರಾವ್ ಬೇಕಲ್ ಪ್ರಾಯೋಜಿತ ಎನ್.ಆರ್. ಬೇಕಲ್ ಮತ್ತು ಡಾ. ರೆಮಾ ಅಯ್ಯರ್ ಪ್ರಾಯೋಜಿತ ಡಾ. ಆರ್.ಡಿ. ಅಯ್ಯರ್ ಮತ್ತು ರೋಹಿಣಿ ಅಯ್ಯರ್ ಸ್ಮರಣಾರ್ಥ ರೂ.7,500/- ನಗದು ಬಹುಮಾನ) ಜಯಪ್ರಕಾಶ ತೂಮಿನಾಡು ಹಾಗೂ ಮಂಜುಳಾ ಗುರುರಾಜ್ ಇರಾ, ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ (ಸುದಾಕರ ಸಾಲ್ಯಾನ್ ಪ್ರಾಯೋಜಿತ ಕೆ. ದೇರಪ್ಪ ಸ್ಮರಣಾರ್ಥ ಮತ್ತು ಡಾ. ರೆಮಾ ಅಯ್ಯರ್ ಪ್ರಾಯೋಜಿತ ಡಾ. ಆರ್.ಡಿ. ಅಯ್ಯರ್ ಮತ್ತು ರೋಹಿಣಿ ಅಯ್ಯರ್ ಸ್ಮರಣಾರ್ಥ ರೂ.5,000/- ನಗದು ಬಹುಮಾನ) ದೇವಾಂಶ ರೈ ಮತ್ತು ಅನ್ವಿತಾ ಟಿ. ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ 10 ಮೇ 2026ರಂದು ಆದಿತ್ಯವಾರ ಸಂಜೆ 4-00 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ಕಾಸರಗೋಡು ಲಯನ್ಸ್ ಸೇವಾಮಂದಿರದಲ್ಲಿ ನಡೆಯಲಿದೆ.

ಪದ್ಮನಾಭ ಶೆಟ್ಟಿ ಮಜಕಾರ : ಶಂಕರ್ ಶೆಟ್ಟಿ ಮತ್ತು ಕಮಲ ಶೆಟ್ಟಿಯವರ ಪುತ್ರನಾದ ಪದ್ಮನಾಭ ಶೆಟ್ಟಿ ಮಜಕಾರ ಇವರು ಗುರುಗಳಾದ ದಿವಾಕರ ಮಲ್ಲ ಇವರಿಂದ ನಾಟ್ಯಾಭ್ಯಾಸ ಮಾಡಿ ದಿವಂಗತ ಕೂಡ್ಲು ಶಂಬು ಬಲ್ಯಾಯರಿಂದ ಹಾಸ್ಯದ ಬಗ್ಗೆಯೂ ಕಲಿತು ಪ್ರಸಾಧನ ಕಲಾವಿಧನಾಗಿ 35 ವರ್ಷಗಳಿಂದ ಮಲ್ಲ, ಕೂಡ್ಲು, ಕೊಲ್ಲಂಗಾನ, ಮಾಣಿಲ ಮೇಳಗಳಲ್ಲಿ ಸೇವೆಸಲ್ಲಿಸುತ್ತಾ ಬಂದಿದ್ದಾರೆ. ಹೆಂಡತಿ ಶ್ರೀಮತಿ ವಿನೋದ, ಮಗಳು ಅನನ್ಯ ಇವರ ಜೊತೆ ಸುಖ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ವರ್ಷದ ‘ಶ್ರೀ ಕೇಶವಾನಂದ ಭಾರತಿ ಸ್ವಾಮಿಜಿ ಸ್ಮರಣಾರ್ಥ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಜಯಪ್ರಕಾಶ ತೂಮಿನಾಡು (ಜೆ ಪಿ ತೂಮಿನಾಡು) : ಪೂವಪ್ಪ ತೂಮಿನಾಡು ಹಾಗೂ ಜಲಜಾಕ್ಷಿ ದಂಪತಿಗಳ ಪುತ್ರ ಜಯಪ್ರಕಾಶ ತೂಮಿನಾಡು ಮಡದಿ ರಶ್ಮಿಕಾ ಅಮೀನ್. ಕರಾವಳಿ ಕರ್ನಾಟಕದ ಪ್ರತಿಭಾನ್ವಿತ ರಂಗನಟ ನಿರ್ದೇಶಕ, ನಾಟಕಕಾರ, ಚಲನಚಿತ್ರನಟ. ಕಾಸರಗೋಡಿನ ಮಂಜೇಶ್ವರ ಮೂಲದ ಇವರು ಹಲವಾರು ವರ್ಷಗಳಿಂದ ಕನ್ನಡ ತುಳು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಕೈ ಪತ್ತಿನಾರ್, ಬಂಜಿಗ್ ಹಾಕೊಡ್ಚಿ, ಕಥೆ ಎಡ್ಡೆ ಉಂಡು ಮುಂತಾದ ತುಳು ನಾಟಕಗಳನ್ನು ರಚಿಸಿದಲ್ಲದೆ, ಅಂಚಿಗ್ ಇಂಚಿಗ್, ಜನನೇ ಬೇತೆ, ಒಂತೆ ಲೇಟಾಂಡ್ ಮುಂತಾದ ನಾಟಕಗಳನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ. ಸಪ್ತಸಾಗರದಾಚೆ ಎಲ್ಲೋ, ಗರುಡ ಗಮನ ವೃಷಭ ವಾಹನ, ಸ್ವಾತಿ ಮುತ್ತಿನ ಮಳೆಹನಿ, ಒಂದು ಮೊಟ್ಟೆಯ ಕಥೆ, ಕಥಾಸಂಗಮ ಮುಂತಾದ ಸಿನೆಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ವತ ನಟಿಸಿದ ನೂರಕ್ಕೂ ಹೆಚ್ಚು ಪ್ರದರ್ಶನ ಕಂಡ 9 ನಾಟಕಗಳು, ಬರೆದು ನಿರ್ದೇಶಿಸಿ ನಟಿಸಿದ ನಾಲ್ಕು ನಾಟಕಗಳು, ನಟಿಸಿರುವ ತುಳು ಸಿನೆಮಾಗಳು 5, ಕನ್ನಡ ಸಿನೆಮ 5, 2025ರಲ್ಲಿ ಬರೆದು ನಿರ್ದೇಶಿಸಿದ 100 ದಿನ ಪ್ರದರ್ಶನ ಕಂಡ ಕನ್ನಡ ಸಿನೆಮಾ ‘ಸು ಫ್ರಮ್ ಸೋ’ ಸಿನಿಮಾ ಅತ್ಯಂತ ಯಶಸ್ವಿ ಪ್ರದರ್ಶನ ದಾಖಲೆ ನಿರ್ಮಿಸಿದೆ. ಈ ಸಾಧಕನ ಅರ್ಹತೆಗೆ ತಕ್ಕಂತೆ ಈ ವರ್ಷದ ‘ರಂಗಚಿನ್ನಾರಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಮಂಜುಳಾ ಗುರುರಾಜ್ ಇರಾ : ಇವರು ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ಐಲ ದಿವಂಗತ ಪ್ರಭಾಕರ ಮಯ್ಯ ಮತ್ತು ಲಲಿತಾ ಮಯ್ಯ ಇವರ ಪುತ್ರಿ. ಇರಾದ ಗುರುರಾಜ್ ರಾವ್ ಇವರ ಪತ್ನಿ. ತಮ್ಮ 11ನೇ ವಯಸ್ಸಿನಲ್ಲಿ ಹರಿದಾಸ ಕಲಾರತ್ನ ಶಂ ನಾ ಅಡಿಗ ಕುಂಬಳೆ ಇವರ ಶಿಷ್ಯೆಯಾಗಿ ಹರಿಕಥಾ ರಂಗಕ್ಕೆ ಪ್ರವೇಶಿಸಿ ಅಖಿಲ ಕರ್ನಾಟಕ ಕೀರ್ತನಾ ಕಲಾ ಪರಿಷತ್ ನ ಮೂಲಕ ಸಂತ ಭದ್ರಗಿರಿ ಅಚ್ಯುತದಾಸರಿಂದ ನಡೆಸಲ್ಪಡುತ್ತಿದ್ದ ಅನೇಕ ಹರಿಕಥಾ ಪ್ರಶಿಕ್ಷಣ ಶಿಬಿರಗಳಲ್ಲಿ ಭಾಗವಹಿಸುತ್ತಾ ಮುಂದೆ ಸಂತ ಭದ್ರಗಿರಿ ಅಚ್ಯುತದಾಸರಲ್ಲೇ ಹರಿಕಥೆಯನ್ನು ಕಲಿಯುದನ್ನು ಮುಂದುವರಿಸಿದರು. ನಂತರ ಪ್ರಸಿದ್ಧ ಹರಿಕಥಾ ವಿದ್ವಾನ್ ವೇಲಣ್ಕರ್ ಇವರ ಶಿಷ್ಯತ್ವವನ್ನು ಪಡೆದುಕೊಂಡು ಹರಿಕಥೆಗೆ ಮೂರು ಶ್ರೇಷ್ಠ ಗುರುಗಳನ್ನು ಹೊಂದಿದವರು. ಮಂಗಳೂರು ಆಕಾಶವಾಣಿಯ ಎ ಗ್ರೇಡ್ ಕಲಾವಿದೆ. ಸುಮಾರು 4000ಕ್ಕೂ ಅಧಿಕ ಹರಿಕಥಾ ಕಾರ್ಯಕ್ರಮಗಳನ್ನು ಅನೇಕ ಶಾಲಾ ಕಾಲೇಜುಗಳಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಹಲವು ಪ್ರಸಿದ್ಧ ದೇವಸ್ಥಾನಗಳಲ್ಲಿ, ಉತ್ತರಕನ್ನಡ, ಚಿತ್ರದುರ್ಗ, ಆಂದ್ರಪ್ರದೇಶದ ಮಂತ್ರಾಲಯ, ಶ್ರೀಕ್ಷೇತ್ರ ತಿರುಪತಿ, ಮಹರಾಷ್ಟ್ರದ ಮುಂಬೈ ಮೊದಲಾದೆಡೆ ನೀಡಿರುತ್ತಾರೆ. ಇಂಟರ್ ನೇಶನಲ್ ಆರ್ಟ್ಸ್ ಮತ್ತು ಕಲ್ಚರಲ್ ಫೌಂಡೇಶನ್ ಬೆಂಗಳೂರು ಸಂಸ್ಥೆಯಿಂದ ಇವರ ರಾಮಾಯಣ ಕಥಾ ವೆಬ್ ಸೀರೀಸ್ ಪ್ರಸಾರ ಆಗುತ್ತಿದೆ. ಖ್ಯಾತ ಟಿ.ವಿ. ಚಾನೆಲ್ ಗಳಾದ ಶ್ರೀಶಂಕರ, ಝೀ ಟಿವಿ, ಚಂದನ, ಸಿ ಸಿ ಇಂಡಿಯಾ ಮುಂತಾದ ವಾಹಿನಿಗಳಲ್ಲಿ ಇವರ ಕಾರ್ಯಕ್ರಮಗಳು ಸಂದರ್ಶನಗಳು ಪ್ರಸಾರ ಆಗಿದೆ. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಅಧ್ಯಯನ ಮಾಡಿದ್ದಾರೆ. ಕೊಳಲು ಸಂಗೀತ ವಿದ್ಯಾಲಯ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಕಳೆದ 26 ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಮತ್ತು ಭಜನಾ ತರಬೇತಿಯನ್ನೂ ನೀಡುತ್ತಿದೆ. ಉಪ್ಪಳ ಕೃಷ್ಣ ಮಾಸ್ತರ್ ಹಾಗೂ ಜಲಂದರ ರೈ ಇವರ ಬಳಿ ಯಕ್ಷಗಾನ ನಾಟ್ಯ ಹಾಗೂ ಯೋಗೀಶ ಆಳದಂಗಡಿ ಹಾಗೂ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಂದ ಭಾಗವತಿಕೆಯನ್ನೂ ಕಲಿತಿದ್ದಾರೆ. ಇವರ ಸಾಧನೆಗಾಗಿ ತರುಣ ಕಲಾವೃಂದ, ಗಡಿನಾಡ ಕನ್ನಡಿಗರ ಸಂಘ, ಕಾಸರಗೋಡು ಕರ್ನಾಟಕ ಸಮಿತಿ, ಜ್ಞಾನೋದಯ ಬಳಗ ವಿಪ್ರ ವೇದಿಕೆಯಂತಹ ಸಂಸ್ಥೆಗಳು ಸನ್ಮಾನಿಸಿವೆ. 2002ರಲ್ಲಿ ಉಡುಪಿಯ ಶ್ರೀ ಪಲಿಮಾರು ಸ್ವಾಮೀಜಿಗಳಾದ ಶ್ರೀ ವಿದ್ಯಾಧೀಶ ಶ್ರೀಪಾದಂಗಳವರು ‘ಶ್ರೀರಾಮ ವಿಠಲ’ ಅಂಕಿತ ಪ್ರಧಾನ ಮಾಡಿದ್ದಾರೆ. 2008ರಲ್ಲಿ ಅಖಿಲ ಕರ್ನಾಟಕ ಕೀರ್ತನಾ ಕಲಾ ಪರಿಷತ್ ವತಿಯಿಂದ ಕಥಾಕೀರ್ತನ ಕೋವಿದೆ ಬಿರುದು, ಶ್ರೀ ಶ್ರೀಶ ಕೃಪಾಶ್ರಮ ಟ್ರಸ್ಟ್ ಚನ್ನರಾಯಪಟ್ಟಣ ಇವರು 2013ರಲ್ಲಿ ಶ್ರೀಶ ವಿಠಲಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದೀಗ ಈ ವರ್ಷದ ‘ರಂಗಚಿನ್ನಾರಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ದೇವಾಂಶ ರೈ : ಈಜುಗಾರಿಕೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ದೇವಾಂಶ್ ರೈ. ಈತ ಕಾಸರಗೋಡಿನ ಹೆಸರಾಂತ ಮಕ್ಕಳ ತಜ್ಞ ಡಾ. ಜಿತೇಂದ್ರ ರೈ ಹಾಗೂ ಡಾ. ರೇಖಾ ರೈ ದಂಪತಿಯ ಸುಪುತ್ರ. ಓಪನ್ ವಾಟರ್ ಹಾಗೂ ಪೂಲ್ ಇವೆಂಟ್ ಈಜುಗಾರಿಕೆಯಲ್ಲಿ ಕಳೆದ 10 ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವ ಕಾಸರಗೋಡಿನ ಪ್ರತಿಭೆ. ಭಾರತವನ್ನು ಹಾಗೂ ಕರ್ನಾಟಕ ರಾಜ್ಯವನ್ನು ಪ್ರತಿನಿಧೀಕರಿಸುವ ಈತ 6ರಿಂದ 10ಕಿಲೋ ಮೀಟರ್ ತನಕ ಸಮುದ್ರದಲ್ಲಿ ಈಜಬಲ್ಲ. 2025ರಲ್ಲಿ ದುಬೈಯಲ್ಲಿ ಜರಗಿದ ರಾಷ್ಟ್ರಮಟ್ಟದ ಓಶಿಯನ್ ಮೇನ್ ಚಾಂಪಿಯನ್ ಶಿಪ್ನಲ್ಲಿ ಭಾರತವನ್ನು ಪ್ರತಿನಿಧೀಕರಿಸಿದ್ದಾನೆ. ಕೇರಳದ ಕೊಚ್ಚಿಯಲ್ಲಿ ಜರಗಿದ 10 ಕಿಲೋಮೋಟರ್ ಸ್ವಿಮೆಥೋನ್ ನಲ್ಲಿ ರಜತ ಪದಕ ಗೆದ್ದ ಸಾಹಸಿಗ. ಮಹಾಸ್ವಿಮ್ ಚಾಂಪಿಯನ್ ಶಿಪ್ನ 100 ಮೀ, 200 ಮೀ, 400 ಮೀ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಹಾಗೂ 50 ಮೀ ಸ್ಪರ್ಧೆಯಲ್ಲಿ ರಜತ ಪದಕ ಪಡೆದಿರುತ್ತಾನೆ. ಮಂಗಳೂರಿನಲ್ಲಿ ಜರಗಿದ ರಾಷ್ಟ್ರಮಟ್ಟದ ಓಪನ್ ವಾಟರ್ ಈಜುಗಾರಿಕೆಯಲ್ಲಿ 6 ಕಿ.ಮೀ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾನೆ. ಈತನ ಪ್ರತಿಭೆಯನ್ನು ಗಮನಿಸಿ ಪ್ರಸ್ತುತ ವರ್ಷದ ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ಗೆ ಆಯ್ಕೆಮಾಡಲಾಗಿದೆ.

ಅನ್ವಿತಾ ಟಿ : ಶಿವಶಂಕರ ಭಟ್ ಸುಧಾವಾಣಿ ದಂಪತಿಗಳ ಸುಪುತ್ರಿ. ಅಗಲ್ಪಾಡಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ. ಕೇರಳ ಶಾಲಾ ಕಲೋತ್ಸವಗಳಲ್ಲಿ ನಿರಂತರ ನಾಲ್ಕು ವರ್ಷಗಳ ಕಾಲ ಕನ್ನಡ ಕಂಠಪಾಠ, ಶಾಸ್ತ್ರೀಯ ಸಂಗೀತ, ವಯಲಿನ್, ಸಂಸ್ಕೃತ ಗಾನಾಲಾಪನ ಸ್ಪರ್ಧೆಗಳಲ್ಲಿ ಎ ಗ್ರೇಡ್ ಪಡೆದಿರುತ್ತಾಳೆ. ರಾಗ ತರಂಗ ಮಂಗಳೂರು ಇವರು ನಡೆಸಿದ ಶಾಸ್ತ್ರೀಯ ಸಂಗೀತ ಭಾವಗೀತೆ ಸ್ಪರ್ಧೆಗಳಲ್ಲಿ ವಿಜೇತಳಾಗಿ ಮಕ್ಕಳ ಅಧ್ಯಕ್ಷರಾಗಿ ಆಯ್ಕೆಯಾಗಿ ಸನ್ಮಾನಿತಳಾಗಿದ್ದಾಳೆ. ಬಂಟ್ವಾಳದಲ್ಲಿ ನಡೆದ ಸರಿಗಮಪ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಗಾನಸಿರಿ ಕಲಾಕೇಂದ್ರ ಪುತ್ತೂರು ಇವರು ನಡೆಸಿದ ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ, ಶಕ್ತಿ ಸಂಗೀತ ಸಭಾ ಚೆನೈ ಇವರು ನಡೆಸಿದ ರಾಷ್ಟ್ರಮಟ್ಟದ ಶಾಸ್ತ್ರೀಯ ಸಂಗೀತ ಹಾಗೂ ದೇವರ ನಾಮ ಹಾಡುವ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ, ಮಂಗಳೂರು ವಿಶ್ವವಿದ್ಯಾನಿಲಯದ ಕನಕ ಪುರಸ್ಕಾರ, ಕಾಸರಗೋಡು ಕನ್ನಡ ಭವನದ ಭರವಸೆಯ ಬೆಳಕು, ಆರೋಹಣ ರತ್ನ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾಳೆ. ಬೇಕಲ ಗೋಶಾಲೆ, ಮಧೂರು ಕ್ಷೇತ್ರ, ಮಂಗಳೂರು, ಹರಿಹರಪುರ ಇತ್ಯಾದಿ ಕಡೆಗಳಲ್ಲಿ ಸಂಗೀತ ಕಛೇರಿ ನೀಡಿರುತ್ತಾಳೆ. ಈ ವರ್ಷದ ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ಗೆ ಇವಳನ್ನು ಆಯ್ಕೆ ಮಾಡಲಾಗಿದೆ.
