ಕಾಸರಗೋಡು : “ಎಲ್ಲಾ ಜಾತಿ ಮತ ಧರ್ಮಗಳಿಗಿಂತ ಶ್ರೇಷ್ಠವಾದದ್ದು ಸಂಗೀತ ಮನಸ್ಸಿನಲ್ಲಿರುವ ಸಂಕಟ, ಬೇಸರಗಳನ್ನು ನಿವಾರಿಸಲು ಸಂಗೀತವನ್ನು ಕೇಳಬೇಕು. ಒಳ್ಳೆಯ ಸಂಗೀತವನ್ನು ಕೇಳುವುದರಿಂದ ಒಂಟಿತನ ದೂರವಾಗುತ್ತದೆ. ಮಾತ್ರವಲ್ಲ ಶರೀರದ ನರನಾಡಿಗಳಲ್ಲಿ ಪ್ರವಹಿಸಿ ಚೈತನ್ಯ ತುಂಬುತ್ತದೆ” ಎಂದು ಖ್ಯಾತ ವೈದ್ಯರಾದ ಡಾ. ಹರಿಕಿರಣ್ ಟಿ. ಬಂಗೇರ ಅವರು ಹೇಳಿದರು.


ಕಾಸರಗೋಡಿನ ಸುಪ್ರಸಿದ್ಧ ಸಾಹಿತ್ಯಕ ಸಾಂಸ್ಕೃತಿಕ, ಸಾಮಾಜಿಕ ಸಂಸ್ಥೆಯಾದ ರಂಗಚಿನ್ನಾರಿಯ ಸಂಗೀತ ಘಟಕ ಸ್ವರಚಿನ್ನಾರಿ ಮತ್ತು ಐ.ಎಂ.ಎ. ಸಂಸ್ಥೆಯ ಕೆರೋಕೆ ಘಟಕದ ಸಹಯೋಗದೊಂದಿಗೆ ದಿನಾಂಕ 07 ಮೇ 2026ರಂದು ಆದಿತ್ಯವಾರ ಐ.ಎಂ.ಎ. ಸಭಾಗೃಹದಲ್ಲಿ ಜರಗಿದ ‘ಅಂತರ್ಧ್ವನಿ -17 ವೈದ್ಯ ಧ್ವನಿ’ ಸಂಗೀತ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.


ಮಕ್ಕಳಲ್ಲಿರುವ ಸುಪ್ತವಾಗಿರುವ ಪ್ರತಿಭೆಯು ಮೊಬೈಲ್ ನೋಡುವುದರಿಂದ ಕಮರಿ ಹೋಗಬಹುದು. ಸಂಗೀತ, ನೃತ್ಯ, ನಾಟಕಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಗಾಯಕಿ, ಪ್ರಸೂತಿ ತಜ್ಞೆ ಡಾ. ಮಾಯಾ ಎಸ್. ಮಲ್ಯ ಅವರು ಕಾಸರಗೋಡಿನ ಪ್ರತಿಭೆಗಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಗಾಯಕ ಗಾಯಕಿಯರಿಗೆ ವೇದಿಕೆ ಒದಗಿಸುತ್ತಿರುವ ರಂಗಚಿನ್ನಾರಿ ತಂಡಕ್ಕೆ ಶುಭಾಶಯಗಳನ್ನು ತಿಳಿಸಿದರು.


‘ಕವಿ ಸಿಂಚನ’ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ, ಕವಿ ಡಾ. ಕೆ.ವಿ. ತಿರುಮಲೇಶ್ ರ ಬಗ್ಗೆ ಕಥೆಗಾರ್ತಿ, ಸೌಮ್ಯ ಪ್ರವೀಣ್ ಅವರು ಮಾತನಾಡಿ “ಸಂಗೀತದ ಜೊತೆ ಕವಿಗಳನ್ನು ಪರಿಚಯಿಸುವ ಕೆಲಸ ನಿಜಕ್ಕೂ ಶ್ಲಾಘನೀಯ. ಕವಿ ಮಹಾಶಯರು ಬರೆದ ಕವನವನ್ನು ಓದುವ ಹವ್ಯಾಸವನ್ನೂ ಗಾಯಕ ಗಾಯಕಿಯರು ಮೈಗೂಡಿಸಿಕೊಳ್ಳಬೇಕು” ಎಂದರು.


ಅಧ್ಯಕ್ಷತೆಯನ್ನು ಖ್ಯಾತ ನೇತ್ರ ತಜ್ಞರೂ, ಸಾಮಾಜಿಕ ಧಾರ್ಮಿಕ ಮುಂದಾಳುಗಳಾದ ಡಾ. ಕೆ. ಅನಂತ ಕಾಮತ್ ವಹಿಸಿ, ಐ.ಎಂ.ಎ. ಸಂಸ್ಥೆಯ ವೈದ್ಯರ ಪ್ರತಿಭೆಗಳಿಗೂ ವೇದಿಕೆ ನಿರ್ಮಾಣವಾಗಿರೋದು ಖುಷಿ ತಂದಿದೆ. ಅಲ್ಲದೆ ಪ್ರತಿ ತಿಂಗಳೂ ಇಂತಹ ವೈವಿಧ್ಯಮಯ ಕಾರ್ಯಕ್ರಮಗಳು ಜರಗಬೇಕು ಎಂದರು.
ರಂಗಚಿನ್ನಾರಿಯ ನಿರ್ದೇಶಕರೂ, ಅಂತರ್ಧ್ವನಿಯ ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕ ಮಾತನಾಡಿ. ಸ್ವಾಗತಿಸಿದರು.

ಉಷಾ ಟೀಚರ್ ಅವರು ಪ್ರಾರ್ಥನೆ ಹಾಡಿದರು. ರಂಗಚಿನ್ನಾರಿಯ ನಿರ್ದೇಶಕರಾದ ಕೆ. ಸತೀಶ್ಚಂದ್ರ ಭಂಡಾರಿಯವರು ಅತಿಥಿಗಳನ್ನು ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಿದರು ರಂಗಚಿನ್ನಾರಿಯ ನಿರ್ದೇಶಕರಾದ ನ್ಯಾಯವಾದಿ ಎ.ಎನ್. ಅಶೋಕ ಕುಮಾರ್ ವೇದಿಕೆಯಲ್ಲಿದ್ದರು. ಖ್ಯಾತ ವೈದ್ಯ ಗಾಯಕ ಗಾಯಕಿಯರೂ, ಸ್ವರಚಿನ್ನಾರಿಯ ಗಾಯಕ ಗಾಯಕಿಯರು ಹಲವಾರು ಭಾಷೆಯ ಹಾಡುಗಳನ್ನು ಹಾಡಿ ರಂಜಿಸಿದರು. ನಿರ್ದೇಶಕರಾದ ಡಾ. ಸಂತೋಷ್ ಕಾಮತ್ ಅವರು ವಂದಿಸಿದರು.


ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಜನಾರ್ದನ ನಾಯ್ಕ್ ಅವರು ‘ಸಂಗೀತ ಕೂಡಾ ಕೆಲವು ರೋಗಗಳಿಗೆ ದಿವ್ಯ ಔಷಧವಾಗಿದೆ ಎಂದರಲ್ಲದೆ ‘ಮ್ಯೂಜಿಕ್ ಥೆರಪಿ’ ಅನ್ನೋದು ಈಗ ವ್ಯಾಪಕವಾಗಿ ಜನಪ್ರಿಯವಾಗುತ್ತದೆ. ಸಂಗೀತದ ಕಂಪನ ಪ್ರಾಣಿಗಳಲ್ಲಿ ಕೂಡಾ ಪ್ರಭಾವ ಬೀರುತ್ತದೆ ಎಂದು ಹೇಳಿದರು. ರಂಗಚಿನ್ನಾರಿ ಕಳೆದ ಎರಡು ದಶಕಗಳಿಂದ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಬಗ್ಗೆ ಅಭಿನಂದನೆಗಳನ್ನು ತಿಳಿಸಿದರಲ್ಲದೆ ಐ.ಎಂ.ಎ.ಯ ಕರೋಕೆ ಘಟಕದ ಸಹಯೋಗ ಯಾವತ್ತೂ ಸ್ವರಚಿನ್ನಾರಿಯ ಜೊತೆ ಇರುತ್ತದೆ ಎಂದರು.


ಸಮಾರೋಪದ ವೇದಿಕೆಯಲ್ಲಿ ಡಾ. ಅನಂತ ಕಾಮತ್, ಡಾ. ಕೆ.ಕೆ. ಶ್ಯಾನು ಭೋಗ್, ಡಾ. ಸಂತೋಷ್ ಕಾಮತ್, ಕೆ. ಸತೀಶ್ಚಂದ್ರ ಭಂಡಾರಿ ವೇದಿಕೆಯಲ್ಲಿದ್ದರು. ಅಂತರ್ಧ್ವನಿಯ ಸಹ ಸಂಚಾಲಕಿ ಬಬಿತಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

