ಕಾಸರಗೋಡು :ಶ್ರೀ ಕ್ಷೇತ್ರ ಮಲ್ಲದಲ್ಲಿ ದಿನಾಂಕ 19 ಜುಲೈ 2026ರಂದು ನಡೆದ ಕೀರ್ತಿಶೇಷ ಬಲಿಪ ಭಾಗವತದ್ವಯರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮತ್ತು ತಾಳಮದ್ದಳೆ ಅತ್ಯುತ್ತಮ ರೀತಿಯಲ್ಲಿ ಸಂಪನ್ನಗೊಂಡಿತು. ಆರಂಭದ ಸಭಾ ಕಾರ್ಯಕ್ರಮದಲ್ಲಿ ಬಲಿಪರ ಒಡನಾಡಿ, ಇದೀಗ ವಿಶ್ರಾಂತ ಜೀವನವನ್ನು ನಡೆಸುತ್ತಿರುವ ಶ್ರೀಯುತ ಕೂಟೇಲು ಬಾಲಕೃಷ್ಣ ಭಟ್ಟರಿಗೆ ರೂ.10,000/- ಗೌರವಧನ, ಮಾನಪತ್ರದೊಂದಿಗೆ ಈ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿದ್ದ ಗಣ್ಯರು ಶುಭಹಾರೈಸಿದರು. ಬಲಿಪ ಶೈಲಿ ಎಂಬುದು ನಾರಾಯಣ ಭಾಗವತರಂತೆ ಹಾಡುವವರಿಗೆ ಮಾತ್ರ ಸೀಮಿತವಾಗಿರದೆ ಆ ಪಾರಂಪರಿಕ ಮಟ್ಟು ಹಾಗೂ ರಂಗನಡೆಯನ್ನು ಪ್ರೀತಿಸುವ, ಅನುಸರಿಸುವ ಸಮಸ್ತ ಕಲಾವಿದರಿಗೆ ಹಾಗೂ ಅಭಿಮಾನಿಗಳಿಗೆ ಸೇರುತ್ತದೆ ಎಂಬ ರಾಧಾಕೃಷ್ಣ ಕಲ್ಚಾರ್ ಅವರ ಮಾತುಗಳು ಅರ್ಥಪೂರ್ಣವಾಗಿದ್ದವು. ನಂತರ ನಡೆದ ‘ಭೃಗುಶಾಪ’ ಎಂಬ ತಾಳಮದ್ದಳೆಯನ್ನು ಕಲಾವಿದರು ಉತ್ತಮ ರೀತಿಯಲ್ಲಿ ನಡೆಸಿಕೊಟ್ಟರು. ಪ್ರೇಕ್ಷಕರು ಸೀಮಿತ ಸಂಖ್ಯೆಯಲ್ಲಿದ್ದರೂ ಇದ್ದಷ್ಟು ಮಂದಿ ಕೊನೆತನಕ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಚಂದಗಾಣಿಸಿದರು.

ಕಾರ್ಯಕ್ರಮದ ಮಧ್ಯದಲ್ಲಿ ಪುಂಡಿಕಾಯಿ ಭಾಗವತರು ಖುದ್ದಾಗಿ ಹಂಚಿದ ಚಾ, ತಿಂಡಿ, ಮನೆಗೊಂದರಂತೆ ಲಡ್ದುಗಳ ಪೊಟ್ಟಣ ಇದೆಲ್ಲಾ ಗಮನಿಸಿದಾಗ ಕಲೆಯೊಂದಿಗೆ ಬಲಿಪ ಮನೆತನದ ಆತಿಥ್ಯವೂ ಮುಂದಿನ ಪೀಳಿಗೆಯಲ್ಲೂ ಮುಂದುವರಿಯುತ್ತಿದೆ ಎಂಬುದು ಸ್ಪಷ್ಟವಾಯಿತು. ಕಲಾವಿದರು ತಮ್ಮ ಸ್ವಂತ ಖರ್ಚಿನಲ್ಲಿ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಾರ್ಥದಲ್ಲಿ ಒಂದು ಕಲಾ ಪೋಷಣೆ. ಉಳಿದವರಿಗೊಂದು ಮಾದರಿ. ಸಂಪೂರ್ಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಬಲಿಪ ಶಿವಶಂಕರ ಭಾಗವತರು ಮತ್ತವರ ಮನೆಯವರಿಗೆ ಅಭಿನಂದನೆಗಳು. ಯಕ್ಷಗಾನ ಕಲೆ ಬೆಳಗಲಿ. ಬಲಿಪ ಶೈಲಿ ಚಿರಾಯುವಾಗಲಿ.
ಡಾ. ವಿಷ್ಣುಪ್ರಸಾದ ಬರೆಕರೆ, ಪೆರ್ಲ
