ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಗ್ರಾಮೀಣ ಭಾಗದಲ್ಲಿ ಸಂಯೋಜಿಸುತ್ತಿರುವ ‘ಬಾಲ ಲೀಲಾ’ ಚಿಣ್ಣರ ಬೇಸಿಗೆ ಶಿಬಿರವು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ದಿನಾಂಕ 14 ಮೇ 2026ರಂದು ಉದ್ಘಾಟನೆಗೊಂಡಿತು.
ಈ ಶಿಬಿರಕ್ಕೆ ಚಾಲನೆ ನೀಡಿದ ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಪಕ್ಷಿತಜ್ಞ ಅರವಿಂದ ಕುಡ್ಲ ಇವರು ಮಾತನಾಡಿ “ಈ ತೆರನಾದ ಬೇಸಿಗೆ ಶಿಬಿರವು ಬಹು ಮಹತ್ವಪೂರ್ಣವಾದುದು ಮತ್ತು ಇಂದಿನ ಆಧುನಿಕ ಜೀವನದ ನಡುವೆ ಸಾಂಪ್ರದಾಯಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದರೊಂದಿಗೆ ಮಕ್ಕಳಲ್ಲಿ ಸಂವಹನದ ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಇಲ್ಲಿ ಕಲೆ, ಅಭಿನಯ, ಸಂಗೀತ ಎಲ್ಲವನ್ನೂ ಸಮೀಕರಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ” ಎಂಬುದಾಗಿ ಅಭಿಪ್ರಾಯವಿತ್ತರು.
ಮುಖ್ಯ ಅತಿಥಿಗಳಾಗಿ ಎಂ.ಐ.ಟಿ. ಆರ್ಕಿಟೆಕ್ಚರ್ ವಿಭಾಗದ ಉಪನ್ಯಾಸಕರಾದ ಗಣೇಶ್ ಉರಾಳ, ಭಾವನಾ ಫೌಂಡೇಶನ್ನ ಸ್ಥಾಪಕಾಧ್ಯಕ್ಷರಾದ ಯಕ್ಷಗುರು ಹಾವಂಜೆ ಮಂಜುನಾಥ ರಾವ್ ಹಾಗೂ ಶಿಬಿರ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ, ವಿಶುರಾವ್ ಹಾವಂಜೆ ಹಾಗೂ ವಿದುಷಿ ಅಕ್ಷತಾ ವಿಶು ರಾವ್ ಉಪಸ್ಥಿತರಿದ್ದರು. ಈ ಬೇಸಿಗೆ ಶಿಬಿರವು ನಾಲ್ಕು ದಿನಗಳ ಕಾಲ ನಡೆಯಲಿದ್ದು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ ಹಾಗೂ ಕಸವನ್ನು ರಸವಾಗಿಸುವ ಉದ್ದೇಶದೊಂದಿಗೆ ರೂಪಿಸಲಾಗಿದೆ. ಅಭಿನಯ, ಆವೆಮಣ್ಣಿನ ಶಿಲ್ಪಗಳು, ಕಾವಿ ಕಲೆ, ಪಕ್ಷಿ ವೀಕ್ಷಣೆ, ಮನೆಮದ್ದು, ಗ್ರಾಮೀಣ ಆಟಗಳು, ಸಂಗೀತ, ಬಟ್ಟೆಯ ಮೇಲೆ ಮುದ್ರಣ ಕಲೆ ಮುಂತಾಗಿ ಹತ್ತು ಹಲವಾರು ಅಂಶಗಳನ್ನು ಶಿಬಿರದಲ್ಲಿ ಕಲಿಸಿ ಕೊಡಲಾಗುತ್ತಿದೆ.
ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 17 ಮೇ 2026ರ ಭಾನುವಾರದಂದು ಸಂಜೆ ಗಂಟೆ 2-30ಕ್ಕೆ ನೆರವೇರಲಿದ್ದು, ಇದೇ ಸಂದರ್ಭದಲ್ಲಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ “ವಿಶ್ವ ಕಲಾ ಸಿಂಧು” ಪುರಸ್ಕಾರವನ್ನು ಹಿರಿಯ ಕಲಾವಿದರಾದ ವೆಂಕಟರಮಣ ಭಟ್ ಇವರಿಗೆ “ಭಾವನಾ ಪುರಸ್ಕಾರ”ವನ್ನು ಪಾಕಶಾಸ್ತ್ರ ಪ್ರವೀಣರಾದ ವಿನೋದ್ರಾಜ್ ಭಟ್ರವರಿಗೆ ನೀಡಿ ಗೌರವಿಸಲಾಗುವುದು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ನ ಉಡುಪಿ ವಿಭಾಗದ ಎ.ಜಿ.ಎಂ. ರಮೇಶ್ ವೈದ್ಯ, ಬ್ರಹ್ಮಾವರ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಮುಕ್ತಾ ಬಾಯಿ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮಹೇಶ್ ಬಿ. ಶೆಟ್ಟಿ, ಬಾಳೆಬೈಲು ಸರಕಾರೀ ಪ್ರಾಥಮಿಕ ಶಾಲೆಯ ಉಪನ್ಯಾಸಕಿ ಶಾರದಾ ನಾಯಕ್, ಪ್ರತಿಷ್ಠಾನದ ಅಧ್ಯಕ್ಷರಾದ ಹಾವಂಜೆ ಮಂಜುನಾಥಯ್ಯ ಉಪಸ್ಥಿತರಿರುತ್ತಾರೆ.
