ಒಡಿಯೂರು : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಗುರುದೇವ ಜ್ಞಾನಮಂದಿರದಲ್ಲಿ ತುಲುವೆರೆ ಕಲ ಟ್ರಸ್ಟ್ ವತಿಯಿಂದ ಆಯೋಜಿಸಿದ ‘ತುಲುವೆರೆ ಕಲ’ ಮೂರನೇ ವಾರ್ಷಿಕೋತ್ಸವ, ಕೃತಿ ಬಿಡುಗಡೆ ಮತ್ತು ಕವಿಗೋಷ್ಠಿಯನ್ನು ದಿನಾಂಕ 24 ಮೇ 2026ರಂದು ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ “ತುಳುವರಲ್ಲಿ ಸೌಹಾರ್ದ ಮನೋಭಾವವಿದೆ. ಎಲ್ಲ ಕಾಲಕ್ಕೂ, ಎಲ್ಲ ಪ್ರದೇಶಕ್ಕೂ ಹೊಂದಿಕೊಳ್ಳುವ ತುಳುವರ ಗುಣವೇ ಅವರ ಬಹುದೊಡ್ಡ ಆಸ್ತಿ. ತುಳು ಸಂಪನ್ನ ಹಾಗೂ ಸಮೃದ್ಧ ಭಾಷೆ. ತುಳು ಭಾಷೆ ಪ್ರಾದೇಶಿಕತೆಗೆ ಅನುಗುಣವಾಗಿ ಬದಲಾವಣೆ ಹೊಂದಿದರೂ ಅದರ ಆತ್ಮ ಒಂದೇ. ಭಾಷೆಯ ಉಳಿವಿಗೆ ‘ತುಳುವೆರೆ ಕಲ’ದಂತಹ ಸಂಘಟನೆಗಳು ಶಕ್ತಿ ತುಂಬುತ್ತಿದೆ. ಆಧುನಿಕತೆ ಭಾಷೆಗೆ ತೊಡಕಾಗದಂತೆ ಎಚ್ಚರ ವಹಿಸಬೇಕು. ಯುವಶಕ್ತಿ, ಮಾತೃಶಕ್ತಿಯಲ್ಲಿ ಅದಮ್ಯ ಚೇತನ ಅಡಗಿದೆ. ಅದರ ಸದ್ಭಳಕೆ ಅಗತ್ಯ. ಕಾರ್ಯದಲ್ಲಿ ಪ್ರೀತಿ, ಪ್ರಯತ್ನ ಇದ್ದಾಗ ಸಂಘಟನೆ ಯಶಸ್ವಿಯಾಗುತ್ತದೆ. ಭಾಷೆ ಸಂಸ್ಕೃತಿಯ ಹೃದಯವಾಗಿದ್ದು, ಅದರ ಉಳಿವಿಗೆ ಶ್ರಮ ಅಗತ್ಯ. ಕೃಷಿ ಸಂಸ್ಕೃತಿಯಲ್ಲಿ ತುಳುವರ ಬದುಕು ಅಡಗಿದೆ” ಎಂದು ಹೇಳಿದರು.

‘ತುಲುವೆರೆ ಕಲ’ ಟ್ರಸ್ಟ್ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಇವರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಮುದ್ದು ಮೂಡುಬೆಳ್ಳೆ, ಒಡಿಯೂರು ಗುರುದೇವಪೀಠ ಸಂಚಾಲಕ ಗಣಪತಿ ಭಟ್ ಸೇರಾಜೆ, ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಸಾಹಿತಿ ರೂಪಕಲಾ ಆಳ್ವ, ಮೂಲ್ಕಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಿಥುನ್ ಉಡುಪ ಕೊಡೆತ್ತೂರು, ಉಪನ್ಯಾಸಕ, ಸಾಹಿತಿ ರಘು ಇಡ್ಕಿದು ಉಪಸ್ಥಿತರಿದ್ದರು.

ವಿಶ್ವನಾಥ ಕುಲಾಲ್ ಮಿತ್ತೂರು ಇವರಿಗೆ ‘ಕಲತ ಬೊಳ್ಳಿ’ ಪ್ರಶಸ್ತಿ ಪ್ರದಾನಿಸಲಾಯಿತು. ‘ಬಾನ ಚಂದ್ರಮೆ’, ‘ಪೇರ್ ಪಂರ್ದ್’, ‘ಗುತ್ತುಗೊಂಜಿ ಕಲತ ಸುತ್ತು’ ಮತ್ತು ‘ಪದ ಪಾಡ್ದನ’ ತುಳು ಕೃತಿಗಳನ್ನು ನಾರಾಯಣ ರೈ ಕುಕ್ಕುವಳ್ಳಿ, ರೂಪಕಲಾ ಆಳ್ವ, ಮಿಥುನ್ ಉಡುಪ, ಮುದ್ದು ಮೂಡುಬೆಳ್ಳೆ ಲೋಕಾರ್ಪಣೆಗೊಳಿಸಿದರು.


ಸ್ಪರ್ಧೆ ವಿಜೇತರಾದ ಹಂಸರಾಗ ಶೆಟ್ಟಿ, ದಿವ್ಯ ರೈ ಪೆರುವಾಜೆ, ಪೆರ್ಮುಖ ಸುಬ್ರಹ್ಮಣ್ಯ ಭಟ್, ಶಾರದಾ ತುಳುನಾಡ್, ಬನಶ್ರೀ ಅವಿನಾಶ್, ಪ. ರಾಮಕೃಷ್ಣ ಶಾಸ್ತ್ರಿ ಮತ್ತು ಸವಿತಾ ಎಸ್. ಭಟ್ ಅಡ್ವಾಯಿ ಇವರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಹಿರಿಯ ಸಾಹಿತಿ, ಪತ್ರಕರ್ತ ಮಲಾರ್ ಜಯರಾಮ ರೈ ಅಧ್ಯಕ್ಷತೆಯಲ್ಲಿ ‘ಬೊಲ್ಪುದಾರಗೆ’ ಕವಿಗೋಷ್ಠಿಯಲ್ಲಿ 35 ಮಂದಿ ಕವಿಗಳು ಪಾಲ್ಗೊಂಡರು. ಪದ್ಮನಾಭ ಪೂಜಾರಿ ಪ್ರಾರ್ಥಿಸಿ, ತುಲುವೆರೆ ಕಲ ಟ್ರಸ್ಟ್ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಸ್ವಾಗತಿಸಿ, ಜಯರಾಮ ಪಡ್ರೆ ವಂದಿಸಿ, ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

