ಶಾಲೆಯ ಪಠ್ಯಪುಸ್ತಕದಲ್ಲಿ ಸಿಪಾಯಿದಂಗೆ, ರಾಜಮಹಾರಾಜರ ದರ್ಬಾರು, ಇತಿಹಾಸ ಇವನ್ನೆಲ್ಲ ಓದಿರುತ್ತೇವೆ. ಸಿಪಾಯಿ ದಂಗೆಯ ನಂತರ ರಾಜಮಹಾರಾಜರ ಪರಿಸ್ಥಿತಿ ಏನಾಯಿತು? ಅಂದು ರಾಣಿವಾಸದಲ್ಲಿದ್ದು ಐಷಾರಾಮಿ ಬದುಕು ನಡೆಸಿದವರು ದಿಲ್ಲಿಯ ಬೀದಿಬೀದಿಗಳಲ್ಲಿ ಹರಿದ ಬಟ್ಟೆಯುಟ್ಟು, ಊಟಕ್ಕಾಗಿ ಪರದಾಡುವಂತಹ ಪರಿಸ್ಥಿತಿಯನ್ನು ಊಹಿಸಬಲ್ಲಿರಾ. ಡಾ. ಎನ್. ಜಗದೀಶ್ ಕೊಪ್ಪರವರು ಖ್ಯಾತ ಕವಿ ‘ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’ದ ಮೂಲಕ ಅವರ ಜೀವನಕಥನವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಅವರ ಬದುಕಿನಲ್ಲಿ ರಾಜನ ದರ್ಬಾರಿನಲ್ಲಿ ಕವಿಯಾಗಿ, ಇತಿಹಾಸ ಬರೆಯುವವನಾಗಿ ರಾಜನ ಆಸ್ಥಾನದಲ್ಲಿ ಸನ್ಮಾನಗಳನ್ನು ಪಡೆದು ಐಷಾರಾಮಿ ಜೀವನ ನಡೆಸಿ ಮುಂದೆ ನಡೆದಾಡುವ ದೇವರೆಂದು ಭಾವಿಸಿದ್ದ ರಾಜನಿಗೂ ಮನೆಯಲ್ಲಿಯೇ ಕಾರಾಗೃಹವಾಸ ಅನುಭವಿಸುವ ಸ್ಥಿತಿ ಬಂದರೆ ಈ ಕವಿಗೆ ಎಲ್ಲಿಯ ಕೆಲಸ ಅಲ್ಲವೇ?
ಕಾಲೇಜು ಒಂದರಲ್ಲಿ ಉಪನ್ಯಾಸ ಹುದ್ದೆಗೆ ಇಂಟರ್ವ್ಯೂವ್ ನೀಡಲು ಕರೆಬರಲು ಅರಮನೆಗೆ ಹೋಗುವವರಂತೆ ಪಲ್ಲಕ್ಕಿ, ಆಳುಕಾಳುಗಳನ್ನು ಕರೆದೊಯ್ದು, ತನ್ನನ್ನು ಸನ್ಮಾನ ಮಾಡಿ ಎದುರ್ಗೊಳ್ಳಲು ಬರುವವರೆಂದು ಕಾದರೆ ಕಾಲೇಜಿನವರು ಕೆಲಸಕ್ಕೆ ಅರ್ಜಿ ಸಲ್ಲಿಸಲು ಬರುವವರಿಗೆ ಇದೆಲ್ಲ ನಮ್ಮ ಕ್ರಮವಲ್ಲವೆಂದು ಸುಮ್ಮನಿದ್ದರೆ ಕವಿಯ ಗತಿಯೇನಾಯಿತು. ಆ ಹುದ್ದೆ ಇನ್ನೊಬ್ಬರ ಪಾಲಾದರೂ ತನ್ನ ಬದುಕಿನಲ್ಲಿ ಕಂಡ ಬಡತನ, ಸಿರಿತನ, ಪ್ರೇಯಸಿಯಿಂದ ದೂರವಾಗುವ ವಿರಹವೇದನೆ, ತಾನು ಪ್ರೀತಿಸುವ ಮಧುಪಾನದ ಮೇಲಲ್ಲ ಕವಿತೆ ಬರೆಯುತ್ತಾ ದೇವರಿದ್ದರೂ, ಒಬ್ಬನೇ ದೇವರು, ಹಿಂದೂ, ಇಸ್ಲಾಂ ಎಲ್ಲರೂ ಒಬ್ಬರೇ ಎಂದು ತನ್ನ ಕಾವ್ಯದಲ್ಲಿ ಬರೆದಿರುವ ಕವಿಯ ಕವಿತೆಗಳನ್ನು ಓದಿ ಸವಿದಾಗಲೇ ನಮಗದರ ರುಚಿ ತಿಳಿವುದು.
ತನ್ನ ಜೀವನದುದ್ದಕ್ಕೂ ಕಾವ್ಯಕ್ಕಾಗೇ ಬದುಕಿ, ಕಾವ್ಯವನ್ನೇ ಉಸಿರಾಡಿ, ಅದಕ್ಕಾಗೇ ತನ್ನ ಬದುಕನ್ನು ಮುಡಿಪಾಗಿಟ್ಟ ಕವಿಯೆಂದರೆ ಸಂಶಯವಿಲ್ಲ. ಅವರ ಕವಿತೆಯನ್ನೆಲ್ಲ ಕವಿಯ ಭಾವಕ್ಕೆ ಸ್ವಲ್ಪವೂ ಕುಂದುಕೊರತೆಬಾರದೇ ನಮ್ಮ ಕನ್ನಡದ ಮನಸುಗಳಿಗೆ ನಾಟುವಂತೆ ಅದನ್ನು ಕನ್ನಡೀಕರಿಸಿ ಡಾ. ಜಗದೀಶ್ ರವರು ನಮಗೆ ಗಾಲಿಬ್ ರವರ ಕವಿತೆಗಳನ್ನು ನಮಗೆ ನೀಡಿದ್ದಾರೆ.
‘ಈ ಪ್ರೇಮಪತ್ರಗಳು
ನನ್ನ ನೋವ ದಾಟಿಸಲು
ವಿಫಲವಾಗಿವೆ.
ನೆತ್ತರೊಳಗೆ ಅದ್ದಿ
ಬರೆದ ಲೇಖನಿಗಳ
ಅವಳೆದುರು ಇಡುವ ಬಗೆ
ನನಗೆ ಕಾಣದಾಗಿದೆ’.
ಹೀಗೆ ತನ್ನ ಪ್ರೇಯಸಿಗಾಗಿ, ಬದುಕಿಗಾಗಿ, ಮಧುವಿಗಾಗಿ ಕವಿತೆಗಳನ್ನು ಬರೆದಿರುವ ಕವಿಯ ಕವಿತೆಗಳು ನಮ್ಮನ್ನು ಆವರಿಸಿಬಿಡುತ್ತವೆ.
ರಾಜ ಮಹಾರಾಜರ ಪ್ರೋತ್ಸಾಹ, ಅತ್ಯುತ್ತಮ ಪರ್ಷಿಯನ್, ಉರ್ದು ಕವಿತೆಗಳನ್ನು ಬರೆಯುವ ಕಲೆ ಬದುಕಿನ ಏಳುಬೀಳುಗಳನ್ನು ಅನುಭವಿಸುತ್ತಾ ಅವನ್ನೇ ಬರೆದು ಒಮ್ಮೊಮ್ಮೆ ಜಗತ್ತೇ ಬೇಡವಾಗಿ, ಬದುಕೇ ದುಸ್ತರವಾದಂತಹ ಪರಿಸ್ಥಿತಿಯನ್ನು ಎದುರಿಸಿದ ಕವಿಯ ಕವಿತೆಗಳಲ್ಲಿ ನಮಗೆ ಅವರ ಬದುಕಿನ ಚಿತ್ರಣ ಸಿಗುತ್ತದೆ.
ತನ್ನನ್ನೇ ಸಮಾಧಾನ ಪಡಿಸಿಕೊಳ್ಳುತ್ತಾ
‘ಕಡಲೊಳಗೆ ದೋಣಿ ಮುಳುಗಿರುವಾಗ
ನಾವಿಕನ ಅನ್ಯಾಯದ ಬಗ್ಗೆ ದೇವರಲ್ಲಿ
ದೂರು ಸಲ್ಲಿಸುವುದು ಏಕೆ ಗಾಲಿಬ್?’
ಹೀಗೆ ಅವರ ಕವಿತೆಗಳನ್ನು ಓದಲು ಅವಕಾಶವಾಗುವಂತೆ ಅವುಗಳ ಬಗ್ಗೆ ಅಧ್ಯಯನ ನಡೆಸಿ ನಮ್ಮ ಮುಂದೆ ಇಟ್ಟಿರುವ ಡಾ. ಜಗದೀಶ್ ಕೊಪ್ಪರವರಿಗೆ ಧನ್ಯವಾದಗಳನ್ನು ಹೇಳಲೇಬೇಕು.
ಪುಸ್ತಕ : ‘ಮಿರ್ಜಾ ಗಾಲಿಬ್’ ಕಥನ ಮತ್ತು ಕಾವ್ಯ
ಲೇಖಕರು : ಡಾ. ಎನ್. ಜಗದೀಶ್ ಕೊಪ್ಪ
ಬೆಲೆ : 150/- , ಪುಟ : 136, ಪ್ರಕಾಶನ : ಅಮೂಲ್ಯ ಪುಸ್ತಕ

ವಿಮರ್ಶಕಿ : ಸಾವಿತ್ರಿ ಶ್ಯಾನುಭಾಗ
ಮಲೆನಾಡಿನ ಸಿರ್ಸಿ ಊರಿನವರಾದ ಸಾವಿತ್ರಿ ಶಾನುಭಾಗ್ ಬೆಂಗಳೂರಿನಲ್ಲಿ ಏಳು ವರುಷ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿ ಈಗ ಗೃಹಿಣಿಯಾಗಿ ಓದುವ ಬರೆಯುವ ಹವ್ಯಾಸವನ್ನು ಮುಂದುವರಿದಿದ್ದಾರೆ. ಇದುವರೆಗೂ ಮಹಿಳೆಯರು, ಅವರ ಜೀವನದ ಬಗ್ಗೆ ಬರಹಗಳನ್ನು ಬರೆದು, ಅವುಗಳ ಕಿರುಪರಿಚಯ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಮಕ್ಕಳೊಂದಿಗೆ ಕಾಲ ಕಳೆಯುತ್ತಾ ಅವರ ಆಟೋಟಗಳಲ್ಲೇ ಸಮಯ ಕಳೆಯುತ್ತಾ ಅವರ ಕುರಿತು, ಅವರನ್ನು ನಿಭಾಯಿಸುವ ಕುರಿತು ಬರೆಯುವುದೆಂದರೆ ಅವರಿಗೆ ಅಚ್ಚುಮೆಚ್ಚು. ಇವರ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಲೇಖಕ : ಡಾ. ಎನ್. ಜಗದೀಶ್ ಕೊಪ್ಪ
