ಉದಯ ಇಟಗಿಯವರ ‘ಶೇಕ್ಸ್ಪಿಯರನ ಶ್ರೀಮತಿ’ ಸ್ತ್ರೀವಾದಿ ನೆಲೆಯಲ್ಲಿ ಬರೆದ ಒಂದು ಏಕವ್ಯಕ್ತಿ ನಾಟಕವೆಂಬುದನ್ನು ತನ್ನ ಶೀರ್ಷಿಕೆಯಿಂದಲೇ ಅದು ವ್ಯಕ್ತಪಡಿಸುತ್ತದೆ. ಹೆಣ್ಣನ್ನು ಸದಾ ತಾರತಮ್ಯ ದೃಷ್ಟಿಯಿಂದಲೇ ನೋಡುವ ನಮ್ಮ ಸಮಾಜವು ಜಗತ್ತಿನಾದ್ಯಂತ ಅವಳಿಗೆ ‘ಇಂಥವನ ಹೆಂಡತಿ’ ಎಂದಷ್ಟೇ ಐಡೆಂಟಿಟಿಯನ್ನು ಕೊಡುವ ಹಾಸ್ಯಾಸ್ಪದ ಕ್ರಮಕ್ಕೆ ಇನ್ನೂ ಅಂಟಿಕೊಂಡಿರುವ ವ್ಯಂಗ್ಯವನ್ನು ಇದು ಸಶಕ್ತವಾಗಿ ಸೂಚಿಸುತ್ತದೆ. ಅದರಲ್ಲೂ ಖ್ಯಾತನಾಮರ ಹೆಂಡತಿಯರು ತಮ್ಮ ಗಂಡಂದಿರು ಮಾಡಿದ ಸಾಧನೆಗಳಿಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸಹಕಾರ ನೀಡಿದರೂ ಜಗತ್ತಿಗೆ ಗಂಡನನ್ನಷ್ಟೇ ಕೊಂಡಾಡಿ ಅಮರನನ್ನಾಗಿ ಮಾಡುವ ತೆವಲು.
ಆನ್ ಹಾಥ್ವೇ ವಿಲಿಯಂ ಶೇಕ್ಸ್ಪಿಯರ್ ನನ್ನು ಮದುವೆಯಾದದ್ದೇ ಒಂದು ಆಕಸ್ಮಿಕ. ವಿಲಿಯಂಗೆ ಹೆಣ್ಣು ಹುಚ್ಚಿತ್ತು. ಹೆಣ್ಣುಗಳನ್ನು ಆಕರ್ಷಿಸುವ ರೂಪವೂ ನಗುಮುಖವೂ ಇತ್ತು. ಹಾಗೆ ಒಮ್ಮೆ ಭೇಟಿಯಾದಾಗ ಅವನಿಗೆ ಅವಳು ಬೇಕೆನ್ನಿಸಿತು. ಅವಳೂ ಅವನಿಗೆ ಮನಸೋತಳು. ಕೂಡಿದರು. ಅವಳು ಗರ್ಭಿಣಿಯಾದಳು. ನಿಜವಾಗಿಯೂ ಅವಳು ಅವನಿಗಿಂತ ಎಂಟು ವರ್ಷ ದೊಡ್ಡವಳು. ಮದುವೆಯಾಗಲು ಅವನು ಅನುಮಾನಿಸಿದರೂ ಅವಳು ಬಿಡಲಿಲ್ಲ. ಹಾಗೆ ಮದುವೆಯಾಯತು. ಆದರೆ ಮದುವೆಯ ನಂತರ ಅವಳು ಆರ್ಥಿಕ ಮುಗ್ಗಟ್ಟು ಸದಾ ಇರುತ್ತಿದ್ದ ಅವನ ಮನೆಯಲ್ಲಿ ಅತ್ತೆ-ಮಾವಂದಿರ ಮತ್ತು ಮನೆಯ ದನ-ಕರುಗಳ ಚಾಕರಿ ಮಾಡುತ್ತ ದಿನಗಳೆಯಬೇಕಾಯಿತು. ಮನೆಯ ಮಟ್ಟಿಗೆ ವಿಲಿಯಂ ಮಹಾ ಬೇಜವಾಬ್ದಾರಿ ಮನುಷ್ಯ. ಏನೂ ಕೆಲಸ ಮಾಡುತ್ತಿರಲಿಲ್ಲ. ತಾನಾಯಿತು, ತನ್ನ ಕವಿತೆಯಾಯಿತು. ಸದಾ ಅದರ ಗುಂಗಿನಲ್ಲೇ ಇರುತ್ತಿದ್ದ. ಹೆಂಡತಿಗೆ ಅರ್ಥವಾಗದ ರೀತಿಯಲ್ಲಿ ಕವಿತೆಯ ಶೈಲಿಯಲ್ಲಿ ಮಾತನಾಡಿ ಅವಳಿಗೆ ಸಿಟ್ಟು ಬರಿಸುತ್ತಿದ್ದ. ಮನೆಯಲ್ಲಿ ಹಣದ ಸಮಸ್ಯೆಯೆಂದು ಲಂಡನ್ನಿಗೆ ಹೋಗಿ ತನ್ನ ಕಾವ್ಯ ಮತ್ತು ನಾಟಕ ಪ್ರತಿಭೆಗಳಿಂದ ಪ್ರಸಿದ್ಧನಾದ. ಹಣ ಮಾಡಿದ. ಆದರೆ ಅಗಲೂ ಅವನು ತನ್ನ ಸುಖವನ್ನು ಮಾತ್ರ ನೋಡಿಕೊಂಡ. ಕೌಟುಂಬಿಕ ಜವಾಬ್ದಾರಿಯನ್ನು ತೆಗೆದುಕೊಳ್ಳಲೇ ಇಲ್ಲ. ಮೂವರು ಮಕ್ಕಳನ್ನು ಬೆಳೆಸುವ ಹೊಣೆಯೂ ಅವಳ ಮೇಲೆಯೇ ಬಿತ್ತು. ಜೀವನ ಪೂರ್ತಿ ಆನ್ ಹಾಥ್ವೇ ಅಸ್ತಿತ್ವಕ್ಕಾಗಿ ಹೋರಾಡಿದಳು. ಸಹಜ ತಾನೇ ಅವಳಿಗೆ ಅವನ ಮೇಲೆ ಅಸಮಾಧಾನ ತುಂಬಿರುವುದು? ಇದು ಅವಳೊಬ್ಬಳ ಕಥೆಯಲ್ಲ. ಜಗತ್ತಿನ ಹಲವಾರು ಪ್ರಸಿದ್ಧ ಲೇಖಕರು, ಕಲಾವಿದರು, ವಿಜ್ಞಾನಿಗಳು ಮತ್ತು ಇನ್ನೂ ಅನೇಕ ಸಾಧಕರ ಹೆಂಡತಿಯರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ತಾವಾಗಿ ಏನನ್ನೂ ಅವರು ಹೇಳಿಕೊಳ್ಳುವುದಿಲ್ಲ. ಮಾನವಿಯತೆಯ ದೃಷ್ಟಿಯಿಂದ ಇದು ಶುದ್ದ ಅನ್ಯಾಯ. ಆದ್ದರಿಂದ ಇದನ್ನು ಬೆಳಕಿಗೆ ತರುವ ಉದ್ದೇಶದಿಂದ ಉದಯ ಇಟಗಿಯವರು ಆನ್ ಹಾಥ್ವೆಯ ಕುರಿತಾಗಿ ಈ ಹಿಂದೆ ಅನೇಕರು ಬರೆದ ಪುಸ್ತಕಗಳನ್ನು ಮತ್ತು ಲೇಖನಗಳನ್ನು ಸಂಗ್ರಹಿಸಿ ಓದಿ ಭಟ್ಟಿಯಿಳಿಸಿ ವಾಸ್ತವದ ಸತ್ಯಗಳನ್ನು ಪರಿಶ್ರಮ ಪಟ್ಟು ಅಧ್ಯಯನ ಮಾಡಿ ಅದಕ್ಕೆ ಒಂದಷ್ಟು ಕಲ್ಪನೆಯನ್ನು ಸೇರಿಸಿ ಒಂದು ಸುಂದರ ಮನಮುಟ್ಟುವ ನಾಟಕವನ್ನು ಹೆಣೆದಿದ್ದಾರೆ.

ಉದಯ್ ಅವರು ಸಮರ್ಥವಾಗಿ ನಾಟಕವನ್ನು ಬರೆಯಬಲ್ಲರು ಅನ್ನುವುದಕ್ಕೆ ‘ಶೇಕ್ಸ್ಪಿಯರನ ಶ್ರೀಮತಿ’ ಸಾಕ್ಷಿಯಾಗಿ ನಿಲ್ಲುತ್ತದೆ. ನಾಟಕ ಬರೆಯುವುದಕ್ಕೆ ವಸ್ತು ಸಿಕ್ಕಿದರೆ ಸಾಲದು. ವಿಷಯಗಳನ್ನು ಸಂಗ್ರಹಿಸಿದರೆ ಸಾಲದು. ಯಾಕೆಂದರೆ ನೇರವಾಗಿ ನಿರೂಪಿಸುವ ಅವಕಾಶ ಈ ಪ್ರಕಾರದಲ್ಲಿ ಇರುವುದಿಲ್ಲ. ಎಲ್ಲವನ್ನೂ ಸಂಭಾಷಣೆಯ ರೂಪದಲ್ಲಿ ಬರೆಯಬೇಕು. ಒಬ್ಬ ನಾಟಕಕಾರನಿಗೆ ದ್ವನಿಪೂರ್ಣವಾದ ಸಂಭಾಷಣೆಗಳನ್ನು ಬರೆಯುವ ಪ್ರತಿಭೆ ಇರಬೇಕಾಗುತ್ತದೆ. ದುಃಖ, ಸಂತೋಷ, ಸಿಟ್ಟು, ಅಸಮಾಧಾನ, ವ್ಯಂಗ್ಯ, ಹಾಸ್ಯ – ಎಲ್ಲಾ ಭಾವನೆಗಳನ್ನೂ ಸಂಭಾಷಣೆಯ ಧ್ವನಿಯ ಮೂಲಕವೇ ವ್ಯಕ್ತಪಡಿಸುವುದು ನಿಜವಾಗಿಯೂ ದೊಡ್ಡ ಸವಾಲು. ಆ ಸವಾಲನ್ನು ಉದಯ್ ಅವರು ಗೆದ್ದಿದ್ದಾರೆ. ಉದಾಹರಣೆಗೆ ಇಲ್ಲಿ ನಾಯಕಿ ಆನ್ ಹಾಥ್ವೇ ತನ್ನ ಗಂಡನ ಬಗ್ಗೆ ಮಾತನಾಡುವಾಗ ಪ್ರೀತಿಯಿಂದ ಮಾತನಾಡುವುದಿಲ್ಲ, ಒಂದು ಅಂತರವಿಟ್ಡುಕೊಂಡು ಹೊರಗಿನವಳಂತೆ ಮಾತನಾಡುತ್ತಾಳೆ ಅನ್ನುವುದು ಅವಳು ಅವನನ್ನು ಮೊದಲ ಹೆಸರಾದ ವಿಲಿಯಂ ಎಂದು ಕರೆಯದೆ ಶೇಕ್ಸ್ಪಿಯರ್ ಎಂದು ಕರೆಯುವಲ್ಲಿ ಸ್ಪಷ್ಟವಾಗಿ ಅರ್ಥವಾಗುತ್ತದೆ. ಅಲ್ಲದೆ ಅವರು ಆಯ್ದುಕೊಂಡ ಶೇಕ್ಸ್ಪಿಯರನ ಸಾನೆಟ್ಟುಗಳ ಸಾಲುಗಳು ಮತ್ತು ಅವನ ನಾಟಕಗಳ ನುಡಿಮುತ್ತುಗಳು ನಾಟಕದ ವ್ಯಂಗ್ಯ ಧ್ವನಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿವೆ.
ನಾಟಕವನ್ನು ಬರೆದದ್ದು ಮಾತ್ರವಲ್ಲದೆ ಸಮರ್ಥ ನಿರ್ದೇಶಕರಾದ ಕಲಬುರಗಿಯ ವಿಶ್ವರಾಜ ಪಾಟೀಲರ ಸಹಾಯ ತೆಗೆದುಕೊಂಡು ಹೆಸರಾಂತ ನಟಿ ಲಕ್ಷ್ಮಿ ಚಂದ್ರಶೇಖರ್ ಮೂಲಕ ಇದನ್ನು ರಂಗದ ಮೇಲೆಯೂ ಯಶಸ್ವಿಯಾಗಿ ತಂದದ್ದು ಅವರ ಇನ್ನೊಂದು ಸಾಹಸ. ಅಭಿನಂದನೆಗಳು ಉದಯ್ ಇಟಗಿಯವರೆ.

ವಿಮರ್ಶಕಿ : ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

ಲೇಖಕ : ಉದಯ ಇಟಗಿ
