ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ಸುರತ್ಕಲ್ ನ ನಾಗರಿಕ ಸಲಹಾ ಸಮಿತಿಯ ಸಹಯೋಗದಲ್ಲಿ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ದಿನಾಂಕ 03 ಮೇ 2026ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಇವರು ಮಾತನಾಡಿ “ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳ ಅಭ್ಯಾಸದಿಂದ ಸಂಸ್ಕಾರ, ಸಂಸ್ಕೃತಿ ಮತ್ತು ಪೌರಾಣಿಕ ಪ್ರಜ್ಞೆ ಮೂಡಲು ಸಾಧ್ಯವಿದೆ. ಎಳೆಯ ಕಲಾವಿದರಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಗಳು ಲಭ್ಯವಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಅಭಿರುಚಿ ಬೆಳೆಸಲು ಪ್ರೇರಣೆಯಾಗಬೇಕು” ಎಂದು ನುಡಿದರು.

ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಕರ್ಮಯೋಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಯುವ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ನುಡಿದು ಶುಭ ಕೋರಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಮಾತನಾಡಿ “ಅವಿಭಜಿತ ದಕ್ಷಿಣ ಕನ್ನಡದ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಗೌರವಯುತ ಪ್ರದರ್ಶನ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಸಂಗೀತ ಸಭಾಗಳು ಮತ್ತು ನೃತ್ಯ ಸಂಘಗಳು ಸಂಘಟಿತವಾಗಿ ಪ್ರಯತ್ನಿಸಬೇಕು” ಎಂದು ಅಗ್ರಹಿಸಿದರು.
ವಿದುಷಿ ಶಾರದಾಮಣಿ ಶೇಖರ್, ವಿದ್ವಾನ್ ಚಂದ್ರಶೇಖರ ನಾವಡ, ಸಂಗೀತ ಪರಿಷತ್ತಿನ ಅಧ್ಯಕ್ಷ ಸುಬ್ರಮಣ್ಯ ರಾವ್ ಹೆಚ್. ಉಡುಪಿ ರಾಗ ಧನ ಸಂಸ್ಥೆಯ ಅರವಿಂದ ಹೆಬ್ಬಾರ್, ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೃಷ್ಣ ಮೂರ್ತಿ, ವಿಭು ರಾವ್ ಉಪಸ್ಥಿತರಿದ್ದರು. ಉಡುಪಿಯ ಸುಮೇಧ ರಾವ್ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟರು. ಶ್ರೀರಾಗ್ ಪಿ. ರಾವ್ ಉಡುಪಿ ವಯಲಿನ್ ನಲ್ಲಿ ಹಾಗೂ ಪ್ರಜ್ಞಾನ್ ನಾಯಕ್ ಉಡುಪಿ ಮೃದಂಗದಲ್ಲಿ ಸಹಕರಿಸಿದರು. ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆ ಸಿಂಚನಾ ಎಸ್. ಕುಲಾಲ್ ಇವರಿಂದ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನಡೆಯಿತು.
