ಮಂಗಳೂರು : ಅಖಿಲ ಭಾರತೀಯ ಕೊಂಕ್ಣಿ ಚಾರೊಳಿ ಸಾಹಿತ್ಯ ಪರಿಷದ್ ಮತ್ತು ಪಿಂಗಾರ ಮೀಡಿಯಾ ಇದರ ವತಿಯಿಂದ 5ನೇ ರಾಷ್ಟ್ರೀಯ ಕೊಂಕ್ಣಿ ಚಾರೊಳಿ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 19 ಜುಲೈ 2026ರಂದು ಮಂಗಳೂರಿನ ಬಲ್ಮಠ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 8-00 ಗಂಟೆಗೆ ಖ್ಯಾತ ರಂಗಭೂಮಿ ತರಭೇತುದಾರ, ಕವಿ, ಕೊಂಕಣಿ ಶಿಕ್ಷಕ ಗೋವಾ ಕಾಣಕೋಣದ ಗೌರೀಶ ವರ್ಣೇಕರ್ ಚಾಲನೆ ಮಾಡಲಿದ್ದು, ಉದ್ಘಾಟನೆ ಬೆಳಗ್ಗೆ 10-00 ಗಂಟೆಗೆ ಮಂಗಳೂರಿನ ಜಿಲ್ಲಾ ಪ್ರಧಾನ ನ್ಯಾಯವಾದಿ ಆಭಿಯೋಜಕ ಎಂ.ಪಿ. ನೊರೊನಾ ಇವರಿಂದ ನಡೆಯಲಿದೆ. ಮುಖ್ಯ ಅತಿಥಿ ಉದ್ಯಮಿ ವಿನ್ಸೆಂಟ್ ಕುತಿನೊ ಉಪಸ್ಥಿತರಲಿದ್ದು, ನಂತರ ಮತ್ತೆ ಕವಿಗೋಷ್ಟಿ ಮುಂದುವರಿಯಲಿದೆ. ಖ್ಯಾತ ಹಿರಿಯ ಕವಯತ್ರಿಯರಾದ ಮಂಗಳೂರಿನ ಅರುಂಧತಿ ವಿ. ರಾವ್ ಮತ್ತು ಗೋವಾದ ಆನ್ನಿ ದೆ ಕೊಲ್ವಾಲೆ ಇವರಿಗೆ ಚಾರೊಳಿ ರಾಷ್ಟ್ರೀಯ ಸನ್ಮಾನ ಪ್ರದಾನ ಮಾಡಲಾಗುವುದು.
ಮಧ್ಯಾಹ್ನದ ನಂತರ ವಿದ್ಯಾರ್ಥಿ ಹಾಗೂ ಕವಿಗಳು ಮುಕ್ತವಾಗಿ ಸಾಹಿತ್ಯ, ಕವಿತೆ ಬಗ್ಗೆ ಸಂವಾದ ಒಪನ್ ಹೌಸ್ ನಡೆಸಲಿದ್ದಾರೆ. ಸಮಾರೋಪ ಭಾಷಣ ಗೋವಾದ ಪ್ರಕಾಶಕಿ ಹಾಗೂ ಕೊಂಕಣಿ ಮಾತೃಭಾಷೆ ಶಿಕ್ಷಕಿ ಯೊಗಿತಾ ವರ್ಣೇಕರ್ ಮಾಡಲಿದ್ದಾರೆ. ಅತಿಥಿಗಳಾಗಿ ಶ್ರೀನಿವಾಸ ನಾಯಕ್ ಇಂದಾಜೆ, ಎಲಿಯಾಸ್ ಫೆರ್ನಾಂಡಿಸ್ ಇರುತ್ತಾರೆ. ಎರಡನೆಯ ಮತ್ತು ನಾಲ್ಕನೇಯ ಸಮ್ಮೇಳನಗಳು ಗೋವಾದ ಪಣಜಿಯಲ್ಲಿ ಹಾಗೂ ಮೊದಲ ಮತ್ತು ಮೂರನೆಯ ಸಮ್ಮೇಳಗಳು ಮಂಗಳೂರಿನಲ್ಲಿ ನಡೆದಿದ್ದವು. ಸಮ್ಮೇಳನದ ಅಯೋಜನೆಯ ಗುರ್ಕಾರ್ ಗೌರೀಶ ವರ್ಣೇಕರ್ ಮಡ್ಗಾಂವ್ ಗೋವಾ ಮತ್ತು ಸಮಿತಿ ಸದಸ್ಯರು ಕೇರಳದ ವಿಜಯ್ ಪೈ, ಕರ್ನಾಟಕ ಕಾರವಾರದ ಸಂದೇಶ ಬಾಂದೇಕರ್, ಗೋವಾದ ಆನ್ನಿ ಫರ್ನಾಂಡೀಸ್ ತೀವಿಮ್ ಗೋವಾ, ಪಣಜಿ ಗೋವಾದ ಅನಗಾ ಕಾಮತ್, ದೆಹಲಿಯ ಗೋಪಾಲಕೃಷ್ಣ ಪ್ರಭು, ಕರ್ನಾಟಕ ಬೆಂಗಳೂರಿನ ಜಾನೆಟ್ ವಾಸ್ ಆಗಿದ್ದಾರೆ.

