ಮುಂಬಯಿ : ಮಹಾರಾಷ್ಟ್ರ ರಾಜ್ಯದ ವಿವಿಧೆಡೆ ಹಾಗೂ ಮುಂಬೈ ಮಹಾನಗರದ ಉದ್ದಗಲಕ್ಕೆ ಕಳೆದ 24 ವರ್ಷಗಳಿಂದ ಯಕ್ಷಗಾನ ತಾಳಮದ್ದಳೆ, ಬಯಲಾಟ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಎಡೆಬಿಡದೆ ಮಾಡುತ್ತಾ ಬಂದಿರುವ ಮುಂಬೈಯ ಅಜೆಕಾರು ಕಲಾಭಿಮಾನಿ ಬಳಗವು ತನ್ನ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟರ ನೇತೃತ್ವದಲ್ಲಿ ಬಳಗದ ರಜತಪರ್ವ ಆಚರಣೆಯು ವಿಶೇಷ ಪರಿಕಲ್ಪನೆಯೊಂದಿಗೆ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ಸ್ವರೂಪದಲ್ಲಿ ನಡೆಯಲಿದೆ. ದಿನಾಂಕ 3 ಮತ್ತು 4 ಅಕ್ಟೋಬರ್ 2026 ಶನಿವಾರ ಮತ್ತು ಭಾನುವಾರ ಕುರ್ಲಾ ಪೂರ್ವದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಬಂಟರ ಭವನದಲ್ಲಿ ಎರಡು ದಿನಪೂರ್ತಿ ನಡೆಯುವ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಐ.ಎ.ಎಸ್. ಅಧಿಕಾರಿ ಮತ್ತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಯಕ್ಷಗಾನ ಕಲಾಪೋಷಕ ಡಾ. ಟಿ. ಶ್ಯಾಮ ಭಟ್ ಇವರು ಭಾಗವಹಿಸುತ್ತಾರೆ. ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ, ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವರು ದಿನಾಂಕ 3 ಅಕ್ಟೋಬರ್ 2026ರಂದು ಮುಂಜಾನೆ ಸಮ್ಮೇಳನವನ್ನು ವಿಧ್ಯುಕ್ತವಾಗಿ ಉದ್ಘಾಟಿಸುತ್ತಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ರಂಗದ ಹಿರಿಯ ವಿದ್ವಾಂಸರ ಮಹತ್ವದ ಲೇಖನಗಳನ್ನೊಳಗೊಂಡ ಸುಮಾರು 600 ಪುಟಗಳ ‘ಯಕ್ಷಗಾನ ಮುಂಬೆಳಗು’ ಎಂಬ ಬೃಹತ್ ಗ್ರಂಥ ಸಮ್ಮೇಳನದ ನೆನಪಿಗಾಗಿ ಬಿಡುಗಡೆಗೊಳ್ಳಲಿದೆ.
ಮುಂಬಯಿ ಯಕ್ಷಗಾನ ಸಮ್ಮೇಳನದ ಸಮಗ್ರ ನಿರ್ವಹಣೆಗಾಗಿ ಮಹಾದಾನಿ, ಹೇರಂಬ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಡಾ. ಕನ್ಯಾನ ಸದಾಶಿವ ಶೆಟ್ಟಿ ಇವರ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯೊಂದನ್ನು ರಚಿಸಲಾಗಿದೆ. ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಕಾರ್ಯಾಧ್ಯಕ್ಷರು ಹಾಗೂ ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ, ಬಹುಶ್ರುತ ವಿದ್ವಾಂಸ – ಗ್ರಂಥಕರ್ತ ಡಾ. ಎಂ. ಪ್ರಭಾಕರ ಜೋಶಿ ಪ್ರಧಾನ ಸಲಹೆಗಾರರಾಗಿದ್ದಾರೆ. ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹೆಸರಾಂತ ಅರ್ಥಧಾರಿ ಮತ್ತು ಲೇಖಕ ಭಾಸ್ಕರ ರೈ ಕುಕ್ಕುವಳ್ಳಿಯವರು ಪ್ರಧಾನ ಸಂಚಾಲಕರು ಮತ್ತು ‘ಯಕ್ಷಗಾನ ಮುಂಬೆಳಗು’ ಗ್ರಂಥದ ಪ್ರಧಾನ ಸಂಪಾದಕರಾಗಿದ್ದಾರೆ; ಮುಂಬಯಿ ಬಂಟರ ವಾಣಿಯ ಸಂಪಾದಕ ಅಶೋಕ ಪಕ್ಕಳ ಮುಖ್ಯ ಕಾರ್ಯದರ್ಶಿಗಳಾಗಿದ್ದಾರೆ. ದೀವಿತ್ ಎಸ್.ಕೆ. ಪೆರಾಡಿ, ಸತೀಶ್ ಶೆಟ್ಟಿ ಕೊಟ್ರಪ್ಪಾಡಿ, ಸಿಎ ಸುರೇಂದ್ರ ಶೆಟ್ಟಿ ಮತ್ತು ರೇಷ್ಮಾ ಶೆಟ್ಟಿ ಜೊತೆ ಕಾರ್ಯದರ್ಶಿಗಳು. ಕರ್ನೂರು ಮೋಹನ್ ರೈ ಮತ್ತು ನವೀನ್ ಶೆಟ್ಟಿ ಇನ್ನ ಬಾಳಿಕೆ ಸಂಘಟನಾ ಕಾರ್ಯದರ್ಶಿಗಳು. ಆಶಾ ಬಿ. ಶೆಟ್ಟಿ ಖಜಾಂಜಿಯಾಗಿ, ಅಮೃತ ಎ. ಶೆಟ್ಟಿ, ಮೀರಾ ಟಿ. ಶೆಟ್ಟಿ, ಶಾಲಿನಿ ಶೆಟ್ಟಿ, ನಂದಾಶೆಟ್ಟಿ ಆರ್ಥಿಕ ನಿರ್ವಹಣಾ ವಿಭಾಗದಲ್ಲಿದ್ದಾರೆ. ಮುಂಬಯಿ ನಗರ ಹಾಗೂ ಹೊರಭಾಗಗಳಲ್ಲಿರುವ ಅನೇಕ ಗಣ್ಯರು, ಉದ್ಯಮಿಗಳು, ವಿವಿಧ ಸಮುದಾಯಗಳ ಪ್ರತಿನಿಧಿಗಳು, ಪ್ರಾದೇಶಿಕ ಸಂಘ – ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಮುಂಬೈಯ ಪ್ರತಿಷ್ಠಿತ ವ್ಯಕ್ತಿಗಳು ಸ್ವಾಗತ ಸಮಿತಿಯ ಗೌರವಾನ್ವಿತ ಸದಸ್ಯರಾಗಿದ್ದಾರೆ.
ಎರಡು ದಿನದ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸುವರೇ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಅವುಗಳೆಂದರೆ ಆರ್ಥಿಕ ಸಮಿತಿ, ಅತಿಥಿ ಸತ್ಕಾರ ಸಮಿತಿ, ಕಾರ್ಯಕ್ರಮ ನಿರ್ವಹಣಾ ಸಮಿತಿ, ಪ್ರಚಾರ ಸಮಿತಿ, ವೇದಿಕೆ ಸಹಾಯಕ ಸಮಿತಿ, ಸ್ವಯಂಸೇವಕ ಸಮಿತಿ, ವಾಹನ ಸಾಗಾಣಿಕೆ ಸಮಿತಿ ಮೊದಲಾದವುಗಳು. ಇದರೊಂದಿಗೆ ಪ್ರತ್ಯೇಕ ಕಾರ್ಯಕಾರಿ ಸಮಿತಿ ಮತ್ತು ಸಲಹಾ ಸಮಿತಿಯನ್ನು ರೂಪಿಸಲಾಗಿದೆ. ಮುಂಬೈ ನಗರದ ಕಲಾಸಂಘಟನೆಗಳು, ಯಕ್ಷಗಾನ ಸಂಘಗಳು ಮತ್ತು ವಿವಿಧ ದೇವಸ್ಥಾನ ಹಾಗೂ ಧಾರ್ಮಿಕ ಸಂಘಟನೆಯ ಪ್ರಮುಖರನ್ನು ಸಮ್ಮೇಳನ ಸಮಿತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಈಗಾಗಲೇ ಸಮ್ಮೇಳನದ ಸಿದ್ಧತೆಗಳು ಭರದಿಂದ ನಡೆದಿದ್ದು, ಸಮಗ್ರ ಮಾಹಿತಿಯನ್ನೊಳಗೊಂಡ ಆಮಂತ್ರಣ ಪತ್ರಿಕೆ ಶೀಘ್ರವೇ ಬಿಡುಗಡೆಗೊಳ್ಳಲಿದೆ. ಮಹಾರಾಷ್ಟ್ರದಲ್ಲಿ ನೆಲೆಸಿರುವ ಸಮಸ್ತ ತುಳು-ಕನ್ನಡಿಗರ ಬಹು ನಿರೀಕ್ಷೆಯ ಈ ಯಕ್ಷಗಾನ ಸಮ್ಮೇಳನಕ್ಕೆ ಸಹೃದಯರು, ಕಲಾಪೋಷಕರು ಮತ್ತು ಕಲಾಭಿಮಾನಿಗಳೆಲ್ಲ ಮುಕ್ತ ಮನಸ್ಸಿನಿಂದ ನೆರವಾಗಬೇಕೆಂದು ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟರು ತಿಳಿಸಿದ್ದಾರೆ.

