ಬೆಂಗಳೂರು : ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವತಿಯಿಂದ ‘ಕರ್ನಾಟಕ ಸಂಘಟಕರ ಸಮಾವೇಶ’ ಸಾಂಸ್ಕೃತಿಕ ಸಂಘಟಕರ ಸಮಾಗಮ ಕಾರ್ಯಕ್ರಮವನ್ನು ದಿನಾಂಕ 25 ಮೇ 2026ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಕನ್ನಡ ಭವನದ ನಯನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಹಿರಿಯ ಸಂಸ್ಕೃತಿ ಚಿಂತಕರಾದ ಪ್ರೊ. ಬರಗೂರು ರಾಮಚಂದ್ರಪ್ಪ ಇವರು ಉದ್ಘಾಟನೆ ಮಾಡಲಿದ್ದು, ಸಂಘಟಕರ ಸಮಾವೇಶದ ಅಧ್ಯಕ್ಷರಾದ ರಾಜ ಶೇಖರ ಕದಂಬ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಇವರು ಮೊದಲ ಮಾತುಗಳನ್ನಾಡಲಿದ್ದಾರೆ. ಮಧ್ಯಾಹ್ನ 12-00 ಗಂಟೆಗೆ ಮೊದಲ ಗೋಷ್ಠಿಯಲ್ಲಿ ‘ಸಾಹಿತಿ, ಕಲಾವಿದರು ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಂಬಂಧಗಳು’, ಮಧ್ಯಾಹ್ನ 2-00 ಗಂಟೆಗೆ ಎರಡನೇ ಗೋಷ್ಠಿಯಲ್ಲಿ ‘ಅಕಾಡಮಿ, ಪ್ರಾಧಿಕಾರ, ರಂಗಾಯಣ ಹಾಗೂ ಟ್ರಸ್ಟ್ ಗಳು ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಹೊಣೆಗಾರಿಕೆ’, ಮಧ್ಯಾಹ್ನ 3-30 ಗಂಟೆಗೆ ಮೂರನೇ ಗೋಷ್ಠಿಯಲ್ಲಿ ‘ಸಂಘ ಸಂಸ್ಥೆಗಳು ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಅನುದಾನ’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ, ಸಂಜೆ 5-00 ಗಂಟೆಗೆ ಅಧ್ಯಕ್ಷರೊಂದಿಗೆ ಸಂವಾದ, ರಂಗ ಗೌರವ ಹಾಗೂ ಸಂಜೆ 6-00 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಸಂಘಟನೆ: ಪುನರುತ್ಥಾನದ ಹಾದಿ ಮತ್ತು ಸರ್ಕಾರದ ಮುಂದಿರುವ ತುರ್ತು ಒತ್ತಾಯಗಳು
ಕರ್ನಾಟಕ ರಂಗ ಪರಿಷತ್ತು, ಕೇಂದ್ರ ಸಮಿತಿ, ಬೆಂಗಳೂರು ಹಮ್ಮಿಕೊಂಡಿರುವ ಈ ಸಮಾವೇಶ ಕೇವಲ ಒಂದು ಔಪಚಾರಿಕ ಕಾರ್ಯಕ್ರಮವಲ್ಲ; ಇದು ಸಾಂಸ್ಕೃತಿಕ ರಂಗದ ಬೇರಾದ ‘ಸಂಘಟನೆ’ ಎಂಬ ಗೊಂದಲಕಾರಿ ಮತ್ತು ಕ್ಲಿಷ್ಟ ಸಂಗತಿಯನ್ನು ಬಿಡಿಸುವ ಒಂದು ಆಶಾದಾಯಕ ಆಂದೋಲನ.
ನಮ್ಮ ಜನಪದರು ಯಾವುದೇ ಅಪೇಕ್ಷೆಯಿಲ್ಲದೆ ಕಲೆ ಮತ್ತು ಸಂಸ್ಕೃತಿಯನ್ನು ಕಾಯ್ದುಕೊಂಡು ಬಂದವರು. ಹವ್ಯಾಸಿ ರಂಗಭೂಮಿಯ ಉದಯದೊಂದಿಗೆ ಖಾಸಗಿ ಕಂಪನಿಗಳ ಹಿಡಿತದಿಂದ ಮುಕ್ತವಾಗಿ ಪ್ರಜಾಸತ್ತಾತ್ಮಕ ರೂಪ ಪಡೆದ ನಮ್ಮ ಸಾಂಸ್ಕೃತಿಕ ಸಂಘಟನೆಗಳು, 70ರ ದಶಕದಲ್ಲಿ ಸರ್ಕಾರಿ ಸರ್ವಾಧಿಕಾರತ್ವದ ವಿರುದ್ಧ ಸಾಂಸ್ಕೃತಿಕವಾಗಿ ಗರ್ಜಿಸಿದ್ದವು. ಆದರೆ ಇಂದು, ವೈಚಾರಿಕ ಜಡತ್ವ ಮತ್ತು ಅನುದಾನಿತ ಚಟುವಟಿಕೆಗಳ ನಡುವೆ ‘ಸಂಘಟನೆ’ ತನ್ನ ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಿದೆ.
ಜಯಂತಿ, ಉತ್ಸವ ಮತ್ತು ಸರ್ಕಾರಿ ಫೈಲ್ಗಳನ್ನು ಸಿದ್ಧಪಡಿಸುವುದಷ್ಟೇ ಸಾಂಸ್ಕೃತಿಕ ಸಂಘಟನೆಯೇ? ಖಂಡಿತ ಇಲ್ಲ. ಜಡ್ಡುಗಟ್ಟಿದ ರೂಢಿಗತ ವಿಚಾರಗಳನ್ನು ಕೊಡವಿಕೊಂಡು, ಸರ್ವಾಧಿಕಾರಿ ಮತ್ತು ಕಟ್ಟರ್ ಮನಸ್ಥಿತಿಗಳ ವಿರುದ್ಧ ಸಾಂಸ್ಕೃತಿಕವಾಗಿ ಉತ್ತರಿಸುವ ಕಾಲ ಬಂದಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಂಗ ಪರಿಷತ್ತು ಮತ್ತು ಸಮಸ್ತ ಸಾಂಸ್ಕೃತಿಕ ಸಂಘಟಕರು ಒಕ್ಕೊರಲಿನಿಂದ ರಾಜ್ಯ ಸರ್ಕಾರವನ್ನು ಬನ್ನಿ, ಒತ್ತಾಯಿಸೋಣ.
ನಮ್ಮ ಪ್ರಮುಖ ಬೇಡಿಕೆಗಳು:
1) ಸಾಂಸ್ಕೃತಿಕ ನೀತಿ ಜಾರಿಗೊಳಿಸಿ: ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ಸಮಗ್ರ ‘ಸಾಂಸ್ಕೃತಿಕ ನೀತಿ’ಯಲ್ಲಿ ಜಾರಿಗೊಳಿಸಿರುವ ಎಲ್ಲಾ ಅಂಶಗಳನ್ನು ಅನುಷ್ಠಾನ ಗೊಳಿಸಬೇಕು ಹಾಗೂ ಅನುಷ್ಠಾನ ಸಮಿತಿಯನ್ನು ರಚಿಸಬೇಕು.ಇದು ಸಾಂಸ್ಕೃತಿಕ ಲೋಕದ ಅರಾಜಕತೆಯನ್ನು ಹೋಗಲಾಡಿಸಲು ಇರುವ ಏಕೈಕ ದಾರಿ.
2) ಬಜೆಟ್ ಹೆಚ್ಚಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾರ್ಷಿಕ ಬಜೆಟ್ ಅನ್ನು 1000 ಕೋಟಿ ರೂಪಾಯಿಗಳಿಗೆ ಹೆಚ್ಚಿಸಬೇಕು.
3) ಕಲಾವಿದರ ಹಿತರಕ್ಷಣೆ: ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ಕಲಾವಿದರ ಮಾಸಾಶನವನ್ನು ಕನಿಷ್ಠ 5000 ರೂಪಾಯಿಗಳಿಗೆ ಹೆಚ್ಚಿಸಬೇಕು.
4) ಅಕಾಡೆಮಿಗಳ ಬಲವರ್ಧನೆ: ಸಾಂಸ್ಕೃತಿಕ ಅಕಾಡೆಮಿಗಳ ಕಾರ್ಯಕ್ಷಮತೆ ಹೆಚ್ಚಿಸಲು ವಾರ್ಷಿಕ ಅನುದಾನವನ್ನು 5 ಕೋಟಿ ರೂಪಾಯಿಗಳಿಗೆ ಹೆಚ್ಚಿಸಬೇಕು.
5) ಸಂಘ-ಸಂಸ್ಥೆಗಳಿಗೆ ಪ್ರೋತ್ಸಾಹ: ಸಾಂಸ್ಕೃತಿಕ ರಂಗವನ್ನು ಜೀವಂತವಾಗಿಟ್ಟಿರುವ ಸಂಘ-ಸಂಸ್ಥೆಗಳಿಗೆ ನೀಡುವ ಒಟ್ಟು ಅನುದಾನವನ್ನು 50 ಕೋಟಿಗೆ ಹೆಚ್ಚಿಸಬೇಕು..
6) ಗಡಿ ಮತ್ತು ಮೂಲಸೌಕರ್ಯ: ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂಪಾಯಿ ಅನುದಾನ ನೀಡಬೇಕು ಹಾಗೂ ಎರಡು ವರ್ಷಗಳಿಂದ ನಿಲ್ಲಿಸಿರುವ ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ನೀಡುವ ಧನಸಹಾಯ ಯೋಜನೆಯನ್ನು ಮತ್ತೆ ಪ್ರಾರಂಭಿಸಬೇಕು.
7) ಕೆಟ್ಟಿರುವ ರಾಜ್ಯದ ಎಲ್ಲಾ ಜಿಲ್ಲಾ ರಂಗಮಂದಿರಗಳನ್ನು ಸರಿಪಡಿಸಬೇಕು.
