ಕಮತಗಿ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಇದರ ವತಿಯಿಂದ ಹಮ್ಮಿಕೊಳ್ಳುವ ‘ಮೇಘಮೈತ್ರಿ ದ್ವಿತೀಯ ಯುವ ಸಾಹಿತ್ಯ ಸಮ್ಮೇಳನ 2026’ವು ದಿನಾಂಕ 15 ಮಾರ್ಚ್ 2025ರಂದು ಬೆಳಗ್ಗೆ 9-30 ಗಂಟೆಗೆ ಮುಧೋಳ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭವನದಲ್ಲಿ ನಡೆಯಲಿದೆ. ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ, ಕವಿಗೋಷ್ಠಿ, ವಿಚಾರಗೋಷ್ಠಿ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಇದಾಗಿದೆ.
ಯುವ ಸಾಹಿತಿ ಡಾ. ವೆಂಕಟೇಶ ಗುಡೆಪ್ಪನವರ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವನ್ನು ಯುವ ಕವಿ ಗಳಾದ ಆರಿಫ್ ರಾಜಾ ಇವರು ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಡಾ. ಪ್ರಕಾಶ ಖಾಡೆ ಇವರು ಡಾ. ವೆಂಕಟೇಶ ಗುಡೆಪ್ಪನವರ ಇವರ ‘ಶೋಧ’ ಮಕ್ಕಳ ಸಾಹಸ ಕಾದಂಬರಿ, ಡಾ. ಶ್ರೀದೇವಿ ಸುವರ್ಣ ಖಂಡಿರವರ ‘ಭೃಂಗದ ಬೆನ್ನೇರಿ’ ಹಾಗೂ ಹುಸೇನ್ ಪತ್ತೇಖಾನರವರ ‘ಬಾಳ ಶಾಣ್ಯಾಕಿ’ ಮತ್ತು ಹೆತ್ತವರು’ ಎಂಬ ಕವನ ಸಂಕಲನಗಳನ್ನು ಬಿಡುಗಡೆ ಮಾಡಲಿದ್ದಾರೆ. ಹಿರಿಯ ಪತ್ರಕರ್ತರಾದ ಅಶೋಕ ಕುಲಕರ್ಣಿ ಇವರ ಅಧ್ಯಕ್ಷತೆಯಲ್ಲಿ ವಿಚಾರ ಗೋಷ್ಠಿ, ಸಾಹಿತಿ ಭೀಮಣ್ಣ ಹುಣಸಿಕಟ್ಟಿ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರಾದ ಕಲ್ಲಪ್ಪಣ್ಣ ಸಬರದ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ವಿವಿಧ ಕ್ಷೇತದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

