ಮಂಗಳೂರು : ಕೋಡಿಕಲ್ ನ ವಿಪ್ರ ವೇದಿಕೆ (ರಿ.) ಇದರ ತಿಂಗಳ ಕಾರ್ಯಕ್ರಮವು 07 ಜೂನ್ 2026ರಂದು ವಿಪ್ರ ವೇದಿಕೆಯ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಚಿಂತನಕಾರರಾಗಿ ಭಾಗವಹಿಸಿದ ನಿವೃತ್ತ ಅಧ್ಯಾಪಕ, ಧಾರ್ಮಿಕ ಚಿಂತಕ ಡಾ. ವಾಗೀಶ್ವರೀ ಶಿವರಾಂರವರು “ಪುರಾಣ ಜಗತ್ತು ಆಳ ಸಮುದ್ರದಂತೆ ಬಗೆದಷ್ಟು ಮುತ್ತು – ರತ್ನಗಳು – ಸ್ಪಟಿಕ ಮಣಿಗಳು ದೊರೆಯುತ್ತವೆ. ಅಲ್ಲಿ ಕಾಣಸಿಗುವ ಬಾಲಕರ ಬದುಕು ಸಾಹಸಮಯದ್ದಾಗಿದ್ದು ನಮಗೂ ಪ್ರೇರಣೆಯನ್ನು ನೀಡುತ್ತದೆ. ಬೇರೆ ಬೇರೆ ಪುರಾಣಗಳು ಹೇರಳ ಜ್ಞಾನವನ್ನು ಒದಗಿಸುತ್ತವೆ. ನಚಿಕೇತನಿಂದಾಗಿ ನಚಿಕೇತೋಪಖ್ಯಾನವೇ ಸೃಷ್ಠಿಯಾಯಿತು. ಚಕ್ರವ್ಯೂಹವನ್ನೇ ಬೇಧಿಸಿದ ಅಭಿಮನ್ಯು, ಬಾಲಕ ಶ್ರವಣ ಕುಮಾರ ಹೀಗೆ ಈ ಬಾಲಕರು ಸಾಹಸಮಯ ಜಗತ್ತನ್ನೇ ತೆರೆದಿಡುತ್ತಾರೆ. ತಾಯಂದಿರು ತಮ್ಮ ಕಂದಮ್ಮಗಳನ್ನು ಈ ರೂಪದಲ್ಲಿ ಕಾಣಬಯಸುತ್ತಾರೆ. ವಿಪ್ರ ವೇದಿಕೆಯಲ್ಲಿ ಈ ಆಧ್ಯಾತ್ಮ ಬಾಲಕರು ಹಾದು ಹೋದದ್ದು ಮನನೀಯ” ಎಂದು ಹೇಳಿದರು.

ಶ್ರೀಮತಿ ವಿದ್ಯಾ ಗಣೇಶ್ ರಾವ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಥೆಗಾರರಾಗಿ ವೇದಮೂರ್ತಿ ವಿಶ್ವಕುಮಾರ ಜೋಯಿಸರು (ಭಕ್ತ ಮಾರ್ಕಂಡೇಯ), ಶ್ರೀಮತಿ ಸುರೇಖಾ ಶ್ರೀಹರಿ (ಪ್ರಹ್ಲಾದ), ಶ್ರೀಮತಿ ಅಪರ್ಣಾ ಉಪಾಧ್ಯಾಯ (ಭಕ್ತ ಧ್ರುವ) ಭಾಗವಹಿಸಿದ್ದರು. ಶ್ರೀ ಗಣೇಶ್ ರಾವ್ ರವರು ಧನ್ಯವಾದವಿತ್ತರು. ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ ಕಥಾ ಉಪಸಂಹಾರ ಮಾಡಿದರು. ಗೌರವಾಧ್ಯಕ್ಷ ಜಯರಾಮ ಪದಕಣ್ಣಾಯರು ಪ್ರಾಯೋಜಕರಾದ ಶ್ರೀಮತಿ ವಿನೋದಾ ಶಾಸ್ತ್ರೀಯವರನ್ನು ಅಭಿನಂದಿಸಿದರು. ಕೋಶಾಧ್ಯಕ್ಷ ಕಿಶೋರ್ ಕೃಷ್ಣರವರು ಕಥೆಗಾರರನ್ನು ಗೌರವಿಸಿದರು.
