ಕಂಕನಾಡಿ : ದಾಮೋದರ ನಿಸರ್ಗ ತುಳು ಪ್ರತಿಷ್ಠಾನ ಕುಡ್ಲ ವತಿಯಿಂದ ಬಿ. ದಾಮೋದರ ನಿಸರ್ಗ ಸಂಸ್ಮರಣೆಯ ಅಂಗವಾಗಿ ನೀಡಲಾಗುವ ‘ನಿಸರ್ಗ ಗೌರವ ಪುರಸ್ಕಾರ 2026’ನ್ನು ಹಿರಿಯ ವಿದ್ವಾಂಸ, ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಇವರಿಗೆ ದಿನಾಂಕ 30 ಆಗಸ್ಟ್ 2026ರಂದು ಕಂಕನಾಡಿ ಗರೋಡಿ ಸರ್ವಮಂಗಳ ಹಾಲ್ ನಲ್ಲಿ ಪ್ರದಾನ ಮಾಡಲಾಯಿತು.

ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಪ್ರೊ. ಬಿ.ಎ. ವಿವೇಕ ರೈ “ತುಳು ಸಂಘಟನೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ, ಕುಡ್ಲ ತುಳು ಕೂಟದ ಅಧ್ಯಕ್ಷರಾಗಿ ಸುದೀರ್ಘ ನಾಲ್ಕೂವರೆ ದಶಕಗಳ ಕಾಲ ಅನನ್ಯ ಸೇವೆ ಸಲ್ಲಿಸಿದ ಬಿ. ದಾಮೋದರ ನಿಸರ್ಗ ಇವರ ಹೆಸರು ತುಳುನಾಡಿನ ಮಣ್ಣಿನಲ್ಲಿ ಎಂದೆಂದಿಗೂ ಹಸುರಾಗಿರಬೇಕು. ತುಳು ಸಂಘಟನೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸುದೀರ್ಘ ಸೇವೆಯನ್ನು ಗುರುತಿಸಿ ನೀಡಿರುವ ಈ ಗೌರವವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತೇನೆ” ಎಂದು ಹೇಳಿದರು.


ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಅಧ್ಯಕ್ಷ ಕೆ. ಚಿತ್ತರಂಜನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಗುರುಪುರ ಗೋಳಿದಡಿಗುತ್ತು ಗಡಿಕಾರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ವರ್ಕಾಡಿ ರವಿ ಅಲೆವೂರಾಯ, ಡಾ. ವಿನ್ಯಾಸ ನಿಸರ್ಗ, ಡಾ. ಮೇಘ ತ್ರಿದೇವ್, ಅಶೋಕ ಬಿ.ಎನ್. ಮತ್ತಿತರರು ಉಪಸ್ಥಿತರಿದ್ದರು. ಡಾ. ಗಣೇಶ್ ಅಮೀನ್ ಸಂಕಮಾರ್ ಅಭಿನಂದನಾ ನುಡಿಗಳನ್ನಾಡಿದರು. ದಾಮೋದರ ನಿಸರ್ಗ ತುಳು ಪ್ರತಿಷ್ಠಾನ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಜಗದಾಂಬ ಯಕ್ಷಗಾನ ಮಂಡಳಿ ಉರ್ವ ಮಾರಿಗುಡಿ ಬೋಳೂರು ತಂಡ ಹಾಗೂ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ‘ನರಕಾಸುರ ಮೋಕ್ಷ’ ಯಕ್ಷಗಾನ ಪ್ರದರ್ಶನಗೊಂಡಿತು.

