ಉಡುಪಿ : ಶ್ರೀ ಭ್ರಾಮರೀ ನಾಟ್ಯಾಲಯ (ರಿ) ಅಮ್ಮುಂಜೆ ರಜತ ವರ್ಷದ ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ-12 ‘ರಾಧಾಕೃಷ್ಣಾರ್ಪಣ’ ಪರ್ಯಾಯ ಶಿರೂರು ಮಠ ಶ್ರೀ ಕೃಷ್ಣ ಮಠ ಉಡುಪಿ ಇವರ ಸಹಯೋಗದೊಂದಿಗೆ 04 ಆಗಸ್ಟ್ 2026ರ ಮಂಗಳವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಂಡಿತು. ಗುರುಪರಂಪರೆಯನ್ನು ಉಳಿಸಿ ಬೆಳೆಸುವ ನೆಲೆಯಲ್ಲಿ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ ನೃತ್ಯ ಕಲಾ ಸಿಂಧು ನಾಟ್ಯಕಲಾಪ್ರಪೂರ್ಣ ಕೀರ್ತಿಶೇಷ ರಾಧಾಕೃಷ್ಣ ತಂತ್ರಿಯವರ ನೃತ್ಯ ಸಂಯೋಜನೆಗಳಾದ ಕೂಚಿಪುಡಿ ನೃತ್ಯ ಬಂಧಗಳು, ದಿಸ್ಸಾಲಂ ಜತಿ, ಮಂಡೂಕ ಶಬ್ದಂ ಮುಂತಾದ ನೃತ್ಯ ಬಂಧಗಳನ್ನು ಪ್ರಸ್ತುತಪಡಿಸಲಾಯಿತು.

ಕಾರ್ಯಕ್ರಮವನ್ನು ಕಿನ್ನಿಮುಲ್ಕಿ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಆಚಾರ್ಯ ಉಡುಪಿ ಇವರು ಉದ್ಘಾಟಿಸಿದರು. ಗುರು ವಿದುಷಿ ವೀಣಾ ಎಂ. ಸಾಮಗರಿಗೆ ಗುರುವಂದನ ಕಾರ್ಯಕ್ರಮ ನೆರವೇರಿತು. ವಿದುಷಿ ವೀಣಾ ಎಂ. ಸಾಮಗರ ನಿರ್ದೇಶನ ಹಾಗೂ ಹಾಡುಗಾರಿಕೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ವಿದ್ವಾನ್ ಕೆ. ಭವಾನಿ ಶಂಕರ್ ನಟವಾಂಗದಲ್ಲಿ, ಶ್ರೀ ಬಾಲಚಂದ್ರ ಭಾಗವತ್ ಉಡುಪಿ ಮೃದಂಗ, ಶ್ರೀ ಶ್ರೀಧರ್ ಪಾಡಿಗಾರ್ ಪಿಟೀಲಿ, ರಿದಂಪ್ಯಾಡಿನಲ್ಲಿ ಮೋಹನ್ ಮಲ್ಪೆ ಸಹಕರಿಸಿದರು. ಗುರು ವಿದ್ವಾನ್ ಕೆ. ಭವಾನಿ ಶಂಕರ್ ಒಡಗೂಡಿ ನಾಟ್ಯಾಲಯದ ಹಿರಿಯ-ಕಿರಿಯ ಶಿಷ್ಯರು, ಏಳು ಜನ ಪುರುಷ ನೃತ್ಯ ಕಲಾವಿದರು ಸೇರಿದಂತೆ ಮೂವತ್ತು ಮಂದಿ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಸಾದನದಲ್ಲಿ ರಾಜೇಶ್ ಬನ್ನಂಜೆಯವರು ಸಹಕರಿಸಸುವುದರೊಂದಿಗೆ ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.



