ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ದಿನಾಂಕ 09 ಅಗಸ್ಟ್ 2026ರ ಆದಿತ್ಯವಾರ ಬೆಳಗ್ಗೆ 10-00 ಗಂಟೆಯಿಂದ ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ….!ಎಂಬ ಶೀರ್ಷಿಕೆಯ ಸರಣಿ ಕಾರ್ಯಕ್ರಮದಲ್ಲಿ ಯಕ್ಷಗಾನ ಮಹಿಳಾ ಕಲಾವಿದರುಗಳ ಸಮಾವೇಶ ವಿಶೇಷ ‘ಚಿಂತನ- ಮಂಥನ’ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಇಡ್ಯಾ ಸುರತ್ಕಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀಮತಿ ಶಕುಂತಲಾ ರಮಾನಂದ ಭಟ್ ಇವರು ನೆರವೇರಿಸಲಿದ್ದು, ಸಮಾವೇಶದ ಅಧ್ಯಕ್ಷತೆಯನ್ನು ಕಾಸರಗೋಡಿನ ಹಿರಿಯ ಕಲಾವಿದೆ ವಿಶ್ರಾಂತ ಪ್ರಾಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಕ್ಷಗಾನದ ಹಿರಿಯ ಕಲಾವಿದರಾದ ಪುತ್ತೂರು ಶ್ರೀಧರ ಭಂಡಾರಿ ಅವರ ಧರ್ಮಪತ್ನಿ ಶ್ರೀಮತಿ ಉಷಾ ಶ್ರೀಧರ ಭಂಡಾರಿ ಪುತ್ತೂರು, ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟ ಪೂರ್ವ ಸದಸ್ಯರಾದ ಶ್ರೀಮತಿ ನಿರ್ಮಲ ಹೆಗಡೆ ಶಿರಸಿ ಭಾಗವಹಿಸಲಿದ್ದಾರೆ.
ತದನಂತರ ವಿಶೇಷ ಚಿಂತನ ಮಂಥನ ಕಾರ್ಯಕ್ರಮ ನಡೆಯಲಿದ್ದು, ‘ಮಹಿಳೆಯರು ಮತ್ತು ಯಕ್ಷಗಾನದ ಭವಿಷ್ಯ’, ‘ಯಕ್ಷಗಾನದಲ್ಲಿ ಮಹಿಳೆಯರು : ಅವಕಾಶ, ಸವಾಲು ಮತ್ತು ನಾಯಕತ್ವ’, ‘ಮಹಿಳಾ ಶಕ್ತಿ ಮತ್ತು ಯಕ್ಷಗಾನದ ಮುಂದಿನ ಪೀಳಿಗೆ’, ‘ಯಕ್ಷಗಾನದ ಬೆಳವಣಿಗೆಯಲ್ಲಿ ಮಹಿಳೆಯರ ಪೂರಕ ಪಾತ್ರ’, ‘ಭವಿಷ್ಯದ ಯಕ್ಷಗಾನ : ಮಹಿಳೆಯರ ದೃಷ್ಟಿ ಮತ್ತು ದಿಕ್ಕು’ ಮುಂತಾದ ವಿಷಯಗಳಲ್ಲಿ ಶ್ರೀಮತಿ ಜಯಂತಿ ಎಸ್. ಹೊಳ್ಳ ಕೃಷ್ಣಾಪುರ, ಶ್ರೀಮತಿ ಲಲಿತಾ ಭಟ್ ಕುಳಾಯಿ, ಶ್ರೀಮತಿ ನಿರ್ಮಲ ಹೆಗಡೆ ಶಿರಸಿ, ಶ್ರೀಮತಿ ಪದ್ಮ ಆಚಾರ್ ಪುತ್ತೂರು, ಶ್ರೀಮತಿ ಸಿ.ಎ. ವೃಂದಾ ಕೊನ್ನಾರ್ ಮುಂತಾದವರು ಮಾತನಾಡಲಿದ್ದಾರೆ. ಮಧ್ಯಾಹ್ನ 3-00 ಗಂಟೆಗೆ ಸಮರೋಪ ಸಮಾರಂಭದಲ್ಲಿ ಯಕ್ಷಗಾನದ ಹಿರಿಯ ಮಹಿಳಾ ಕಲಾವಿದೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಸುರತ್ಕಲ್ ಹಾಗೂ ಶ್ರೀಮತಿ ಕೃತಿ ಪುರಪ್ಪೆಮನೆ ಸಾಗರ ಇವರು ಮುಖ್ಯ ಅತಿಥಿಗಳಾಗಿ ಹಾಗೂ ನೂರಕ್ಕೂ ಹೆಚ್ಚಿನ ಮಹಿಳಾ ಕಲಾವಿದರು ಈ ಕಾರ್ಯಕ್ರಮದ ಸಂವಾದದಲ್ಲಿ ಭಾಗವಹಿಸಲಿದ್ದಾರೆ.

