ಉಡುಪಿ : ಬೆಂಗಳೂರಿನ ಯಕ್ಷದೇಗುಲ ಸಂಸ್ಥೆಯ ಸಂಯೋಜನೆಯಲ್ಲಿ ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಕೇಂದ್ರ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಆಯೋಜಿಸಲಾದ ಯಕ್ಷಗಾನ ಗೊಂಬೆಯಾಟ ಉತ್ಸವವು ದಿನಾಂಕ 26 ಜುಲೈ 2026ರಂದು ಕೋಟ ಡಾ. ಶಿವರಾಮ ಕಾರಂತ ಥೀಮ್ ಪಾರ್ಕಿನಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಗೊಂಬೆಯ ಮೂಲಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಉಡುಪಿ – ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಸಂಸದರಾದ ಶ್ರೀನಿವಾಸ ಪೂಜಾರಿಯವರು “ನೂರಾರು ವರ್ಷಗಳ ಇತಿಹಾಸವಿರುವ ಯಕ್ಷಗಾನದ ಶ್ರೀಮಂತ ಪ್ರಕಾರವಾಗಿರುವ ಗೊಂಬೆಯಾಟವನ್ನು ಕಲಾ ಪ್ರೋತ್ಸಾಹಕರು ಪ್ರೇಕ್ಷಕರು ಜೊತೆಗೂಡಿ ಉಳಿಸಬೇಕಾಗಿದೆ. ಯಕ್ಷಗಾನ ವಿವಿಧ ಪ್ರಕಾರಗಳಿಗೆ ವಿಪುಲವಾದ ಅವಕಾಶಗಳಿದ್ದರೂ ಪಡುವಲಪಾಯ ಎಂದು ಕರೆಸಿಕೊಳ್ಳುವ ಈ ಜನಪದ ಕಲೆಯಲ್ಲಿ ಇಂದು ಎರಡೇ ಗೊಂಬೆಯಾಟ ತಂಡಗಳು ಉಳಿದುಕೊಂಡಿವೆ. ಯಕ್ಷಗಾನ ವಾಲ್ಮೀಕಿ ಎಂದು ಕರೆಸಿಕೊಂಡಿರುವ ಪಾರ್ತಿಸುಬ್ಬನ ವಂಶದವರಿಂದ ಪ್ರಾರಂಭವಾದ ಕಾಸರಗೋಡು ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ತಂಡ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.
ಹಾಗೆ ವೇದಿಕೆಯಲ್ಲಿಕಾರಂತ ಪ್ರತಿಷ್ಠಾನ ಕೋಟ ಇದರ ಅಧ್ಯಕ್ಷರಾದ ಆನಂದ ಸಿ.ಕುಂದರ್, ಉಡುಪಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ತೆಕ್ಕಟ್ಟೆ ಯಶಸ್ವಿ ಕಲಾವೃಂದದ ವೆಂಕಟೇಶ ವೈದ್ಯ, ಜ್ಞಾನ ಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಅಧ್ಯಕ್ಷರಾದ ಮೋಹನ್ ಕುಮಾರ್, ಬೆಂಗಳೂರಿನ ಯಕ್ಷದೇಗುಲದ ಸಂಚಾಲಕರಾದ ಸುದರ್ಶನ ಉರಾಳರು, ಗೊಂಬೆಯಾಟದ ನಿರ್ದೇಶಕರಾದ ಕೆ.ವಿ. ರಮೇಶ್ರವರು ಉಪಸ್ಥಿತರಿದ್ದರು. ಯಕ್ಷಗಾನ ವಿದ್ವಾಂಸರಾದ ಸುಜಯೀಂದ್ರ ಹಂದೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನಂತರ ಅಂತರರಾಷ್ಟ್ರೀಯ ಖ್ಯಾತಿಯ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘ ಕಾಸರಗೋಡು ಇವರಿಂದ ಕೆ.ವಿ. ರಮೇಶ್ ನಿರ್ದೇಶನದಲ್ಲಿ ‘ಶ್ರೀ ದೇವಿ ಮಹಾತ್ಮೆ’ ತೆಂಕುತಿಟ್ಟಿನ ಯಕ್ಷಗಾನ ಗೊಂಬೆಯಾಟ ಪ್ರದರ್ಶನಗೊಂಡಿತು.

