ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಆಯೋಜನೆಯ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆ, ವಿಜೇತರಿಗೆ ಪುರಸ್ಕಾರ ಪ್ರದಾನ ಕಾರ್ಯಕ್ರಮ ‘ಡಾ. ಪಿ. ದಯಾನಂದ ಪೈ ‘ಎಸ್. ಬಿ. ಎಫ್. ಯುವ ಮಹೋತ್ಸವ್-2025’ಇದರ ಉದ್ಘಾಟನಾ ಸಮಾರಂಭವು ದಿನಾಂಕ 08 ಫೆಬ್ರವರಿ 2025ರ ಶನಿವಾರದಂದು ಮಂಗಳೂರಿನ ಡಾನ್ಬಾಸ್ಕೊ ಸಭಾಂಗಣದಲ್ಲಿ sನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪದ್ಮಶ್ರೀ ಪುರಸ್ಕೃತ ಹಿರಿಯ ಬಾನ್ಸುರಿ ಕಲಾವಿದ ಪಂ. ರೋನು ಮುಜುಂದಾರ್ ಮಾತನಾಡಿ “ಯುವಜನರಲ್ಲಿ ಹಿಂದುಸ್ತಾನಿ ಶಾಸೀಯ ಸಂಗೀತವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಸಂಗೀತ ಭಾರತಿ ಫೌಂಡೇಶನ್ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಯುವ ಕಲಾವಿದರು ಉತ್ತಮ ಪ್ರದರ್ಶನ ನೀಡಿರುವುದು ಸಂತಸ ತಂದಿದೆ.” ಎಂದರು.
ಸಂಗೀತ ಭಾರತಿ ಪ್ರತಿಷ್ಠಾನ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷರಾದ ಪ್ರೊ. ನರೇಂದ್ರ ಎಲ್. ನಾಯಕ್, ಅಂತಾರಾಷ್ಟ್ರೀಯ ಕಲಾವಿದರಾದ ಪಂ. ಜಯತೀರ್ಥ ಮೇವುಂಡಿ, ಯುವ ತಬ್ಲಾ ವಾದಕ ಪಂ. ಯಶವಂತ್ ವೈಷ್ಣವ್, ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ, ಡಾ. ಶಶಾಂಕ್ ಮಕ್ತೇದಾರ್, ಉಜ್ಜೈನ್ ಸ್ಮಾಲ್ ಫೈನಾನ್ಸ್ ಇದರ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಕರೋಲ್ ಲೈಡಿಯಾ ಪಿಂಟೋ, ಬ್ಯಾಂಕ್ ಆಫ್ ಮಹಾರಾಷ್ಟ್ರದ ಹೌಸಿಂಗ್ ಫಿನಾನ್ಸ್ ಇದರ ಬ್ರಾಂಚ್ ಚೀಫ್ ಮ್ಯಾನೇಜರ್ ಅಭಿನವ ಕುಮಾರ್ ಶ್ರೀವಾಸ್ತವ, ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಂಗಳೂರು ಬ್ರಾಂಚ್ ಸೀನಿಯರ್ ಮ್ಯಾನೇಜರ್ ಮಹೇಶ್ ಎಂ.ನಾಯರ್, ಸಂಗೀತ ಭಾರತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಸಂಗೀತ ಭಾರತಿ ಪ್ರತಿಷ್ಠಾನದ ಟ್ರಸ್ಟಿ ಅಂಕುಶ್ ಎನ್. ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯ ಉಪನ್ಯಾಸಕಿ ಉಜ್ವಲ್ ಪ್ರದೀಪ್ ಕಾರ್ಯಕ್ರಮ ನಿರೂಪಿಸಿ, ಸಂಗೀತ ಭಾರತಿ ಪ್ರತಿಷ್ಠಾನದ ಖಜಾಂಚಿ ಕರುಣಾಕರ ಬಳ್ಕೂರು, ಟ್ರಸ್ಟಿಗಳಾದ ಮುರುಳೀಧರ ಜಿ. ಶೆಣೈ, ಡಾ. ರಮೇಶ್ ಕೆ. ಜಿ. ಮೊದಲಾದವರು ಸಹಕರಿಸಿದರು.
ನೋಂದಾಯಿತ ಸ್ಪರ್ಧಿಗಳ ಪೈಕಿ ಕೊನೆಯ ಸುತ್ತಿಗೆ ಆನ್ಲೈನ್ನಲ್ಲಿ ಆಯ್ಕೆ ಮಾಡಲಾಗಿದ್ದ 18 ರಿಂದ 30 ವರ್ಷದೊಳಗಿನ 24 ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಪ್ರತಿಭಾವಂತ ಕಲಾವಿದರು ಪರಸ್ಪರ ಪೈಪೋಟಿಯ ಕಲಾಪ್ರದರ್ಶನ ನೀಡಿದರು. ವಾದ್ಯ ವಾದನ (ತಬ್ಲಾ ಮತ್ತು ಪಕವಾಜ್ ಹೊರತುಪಡಿಸಿ) ಹಾಗೂ ಹಾಡುಗಾರಿಕೆ ವಿಭಾಗದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಯಿತು.