ಧಾರವಾಡ : ಕನ್ನಡದ ಆದ್ಯ ನಾಟಕಕಾರ, ಕವಿ ಹಾಗೂ ಕೀರ್ತನಕಾರರಾದ ಶಾಂತಕವಿ ಸಕ್ಕರಿ ಬಾಳಾಚಾರ್ಯರವರ 106ನೇ ಪುಣ್ಯತಿಥಿ (15ನೇ ಮಾರ್ಚ್) ಹಾಗೂ ಶಾಂತಕವಿಗಳ ಹೆಸರಿನಲ್ಲಿ ನಮ್ಮ ಸಂಸ್ಥೆಯು ಸ್ಥಾಪಿಸಿರುವ ‘ಶಾಂತರಂಗ’ ನಾಟಕಕಾರ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 12 ಮಾರ್ಚ್ 2026ನೇ ಗುರುವಾರದಂದು ಸಂಜೆ 5-30 ಘಂಟೆಗೆ ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಏರ್ಪಡಿಸಲಾಗಿದೆ.

ನೀನಾಸಂ ಹೆಗ್ಗೋಡು ಇವರ ಅಧ್ಯಕ್ಷರು ಹಾಗೂ ರಂಗ ನಿರ್ದೇಶಕರಾದ ಶ್ರೀ ಕೆ.ವಿ. ಅಕ್ಷರ ಇವರು ಪ್ರಶಸ್ತಿ ಪ್ರದಾನ ಮಾಡುವರು ಹಾಗೂ ‘ಭಾವಯಿತ್ರೀ ಪ್ರತಿಭೆಯ ಬಿಕ್ಕಟ್ಟು’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಬೆಳಗಾವಿಯ ಶ್ರೀ ಶಿರೀಶ್ ಜೋಶಿರವರು ಕಂಠಿಹಾರ ನಾಟಕ ರಚಿಸಿ ಶಾಂತರಂಗ ನಾಟಕಕಾರ ಪ್ರಶಸ್ತಿ-2025ಕ್ಕೆ ಭಾಜನರಾಗಿರುತ್ತಾರೆ. ತೀರ್ಪುಗಾರರ ಮೆಚ್ಚುಗೆ ಪಡೆದ ಮೊದಲ ನಾಟಕ ಕೃತಿ ಪ್ರಶಸ್ತಿಯನ್ನು ಶ್ರೀಈಶ್ವರ ಹತ್ತಿ ಕೊಪ್ಪಳ ಇವರು ರಚಿಸಿದ ‘ಅರ್ಧ ಸತ್ಯದ ಕಥೆ’ ಕೃತಿಯು ಹಾಗೂ ಎರಡನೇ ನಾಟಕ ಕೃತಿ ಪ್ರಶಸ್ತಿಯನ್ನು ಶ್ರೀ ಎನ್. ಧೀರೇಂದ್ರ ಬೆಂಗಳೂರು ಇವರು ರಚಿಸಿದ ‘ಇರುವಂತ’ ಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ (ರಿ.) ಇವರ ಅಧ್ಯಕ್ಷರಾದ ಶ್ರೀ ಎಸ್. ಬಾಬುರಾವ್ ಇವರು ವಹಿಸಿದ್ದು, ಧಾರವಾಡದ ಖ್ಯಾತ ರಂಗ ಕರ್ಮಿಗಳು ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ ಇವರು ಮುಖ್ಯ ಅತಿಥಿಗಳಾಗಿದ್ದು ತೀರ್ಪುಗಾರರ ಅಭಿಪ್ರಾಯ ತಿಳಿಸಲಿದ್ದಾರೆ ಹಾಗೂ ಧಾರವಾಡದ ರಂಗಾಯಣ ಆಡಳಿತಾಧಿಕಾರಿಗಳು ಶ್ರೀಮತಿ ಶಶಿಕಲಾ ಹುಡೇದ ಇವರು ವಿಶೇಷ ಆಹ್ವಾನಿತರಾಗಿರುತ್ತಾರೆ.

2025ನೇ ಸಾಲಿನ ಶಾಂತರಂಗ ನಾಟಕಕಾರ ಪ್ರಶಸ್ತಿಗೆ ಒಟ್ಟು 22 ಕೃತಿಗಳು ಸ್ವೀಕೃತವಾಗಿತ್ತು. ಅವುಗಳ ಪೈಕಿ 10 ಕೃತಿಗಳನ್ನು ಪ್ರಶಸ್ತಿಗಾಗಿ ಪರಿಗಣಿಸಬಹುದೆಂದು ಆಂತರಿಕ ಆಯ್ಕೆ ಸಮಿತಿಯ ಸದಸ್ಯರು ಶಿಫಾರಸ್ಸು ಮಾಡಿರುತ್ತಾರೆ. ಆಂತರಿಕ ಆಯ್ಕೆ ಸಮಿತಿಯು ಶಿಫಾರಸ್ಸು ಮಾಡಿದ್ದ 10 ಹಸ್ತ ಪ್ರತಿಗಳ ಪೈಕಿ 3 ಕೃತಿಗಳನ್ನು ಪರಿಗಣಿಸಬಹುದೆಂದು ಅಂತಿಮ ಆಯ್ಕೆ ಸಮಿತಿಯ ಸದಸ್ಯರಾದ ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಡಾ. ಬಸವರಾಜ ಡೋಣೂರ, ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕರಾದ ಡಾ. ವೆಂಕಟರಮಣ ಐತಾಳ ಹಾಗೂ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರುಗಳು ಹಸ್ತಪ್ರತಿಗಳನ್ನು ಪರಿಶೀಲಿಸಿ ಶಿಫಾರಸ್ಸು ಮಾಡಿರುತ್ತಾರೆ. ಪ್ರಥಮ ಪ್ರಶಸ್ತಿಯ ಮೊತ್ತ ರೂ.15,000/-ಗಳನ್ನು ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ (ರಿ.) ಧಾರವಾಡ ವತಿಯಿಂದ ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದ ಎರಡು ಕೃತಿಗಳಿಗೆ ತಲಾ ರೂ.2,500/- ಗಳನ್ನು ಅಭಿನಯ ಭಾರತಿ ಧಾರವಾಡ ಇವರು ಕೊಡುತ್ತಾರೆ. ಪ್ರಶಸ್ತಿ ಸ್ಥಾಪಿಸಿದ ಮೊದಲ ವರ್ಷದಲ್ಲೇ 22 ಕೃತಿಗಳನ್ನು ಸ್ವೀಕರಿಸಲಾಗಿದ್ದು, ಯುವ ಪ್ರತಿಭೆಗಳಿಗೆ ನಾಟಕ ರಚಿಸಲು ಪ್ರೋತ್ಸಾಹಿಸಿ ಕನ್ನಡ ರಂಗಭೂಮಿಗೆ ಹೊಸ ನಾಟಕ ಕೃತಿಗಳನ್ನು ನೀಡಿದ ಬಗ್ಗೆ ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ವರ್ಷಗಳಲ್ಲಿ ಬಹುಮಾನಗಳನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತದೆ.
