ಉಡುಪಿ : ಕರ್ನಾಟಕ ಯಕ್ಷಗಾನ ವತಿಯಿಂದ 2025 ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಯಕ್ಷಗಾನ ಸಂಶೋಧಕ ಡಾ. ಕೆ.ಎಂ. ರಾಘವ ನಂಬಿಯಾರ್ ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯೊಂದಿಗೆ ರೂ. ಒಂದು ಲಕ್ಷ ನಗದು, ಫಲಕ, ಪ್ರಮಾಣಪತ್ರ ಮತ್ತು ಹಾರ ನೀಡಿ ಗೌರವಿಸಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ 3ರಂದು ಅಂಬಲಪಾಡಿಯ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿದೆ.
‘ಕರಾವಳಿ ಯಕ್ಷಗಾನ ಹಿಮ್ಮೇಳ : ಒಂದು ಸಮಗ್ರ ಅಧ್ಯಯನ’ ಮಹಾಪ್ರಬಂಧಕ್ಕೆ ಮಂಗಳೂರು ವಿ.ವಿ. ಪಿಎಚ್.ಡಿ. ಪಡೆದಿದ್ದು, ಪತ್ರಕರ್ತರೂ ಆಗಿರುವ ಇವರು ‘ಉದಯವಾಣಿ’ ಪತ್ರಿಕೆಯಲ್ಲಿ ದೀರ್ಘ ಕಾಲ ಉಪಸಂಪಾದಕರಾಗಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ಸಂಶೋಧನೆ, ರಚನೆ ಹಾಗೂ ಪ್ರದರ್ಶನಗಳ ಮೂಲಕ ವಿಶಿಷ್ಟ ಕೊಡುಗೆ ನೀಡಿದ್ದು, ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನಗಳಲ್ಲಿ ಪರಿಣತಿ ಹೊಂದಿರುವ ಇವರು ಹಲವಾರು ಪ್ರಸಂಗಗಳನ್ನು ರಚಿಸಿ, ಹಿಮ್ಮೇಳ, ವೇಷಭೂಷಣ ಮತ್ತು ರಂಗಪ್ರಯೋಗಗಳಲ್ಲಿ ಹೊಸತನ ತಂದುಕೊಟ್ಟಿದ್ದಾರೆ. ಇವರ ಈ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
