ಮೈಸೂರು : ಕರ್ನಾಟಕ ಸರ್ಕಾರದ ರಂಗಾಯಣ ಸಂಸ್ಥೆ ಆಯೋಜಿಸಿರುವ ‘ಸಿ.ಜಿ.ಕೆ. ನೆನಪಿನ ಗ್ರೀಷ್ಮ ರಂಗೋತ್ಸವ–2026’ವು ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ದಿನಾಂಕ 05 ಜುಲೈ 2026ರಂದು ಉದ್ಘಾಟನೆಗೊಂಡಿತು.

ಹಿರಿಯ ರಂಗಕರ್ಮಿ ಹಾಗೂ ನಿರಂತರ ಫೌಂಡೇಶನ್ ನಿರ್ದೇಶಕ ಪ್ರಸಾದ್ ಕುಂದೂರು ಮಾತನಾಡಿ “ವೃತ್ತಿಪರ ರೆಪರ್ಟರಿಗಳ ಕೊಡುಗೆ ಮಹತ್ವದ್ದಾಗಿದ್ದರೂ, ರಂಗಚಳುವಳಿಯ ಉತ್ಸಾಹ, ಜೀವಂತಿಕೆ ಮತ್ತು ಸೃಜನಶೀಲತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಹವ್ಯಾಸಿ ರಂಗಭೂಮಿಯೇ. ರಂಗಾಯಣದ ಆರಂಭಿಕ ದಿನಗಳನ್ನು ಸ್ಮರಿಸಿದ ಅವರು, ಬಿ.ವಿ. ಕಾರಂತ ಅವರು ವೃತ್ತಿಪರ ರೆಪರ್ಟರಿಯ ಜೊತೆಗೆ ಹವ್ಯಾಸಿ ತಂಡಗಳಿಗೂ ಸಮಾನ ಗೌರವ ನೀಡಿದ್ದರು. ವೃತ್ತಿಪರ ಹಾಗೂ ಹವ್ಯಾಸಿ ರಂಗಭೂಮಿಯ ನಡುವೆ ಪರಸ್ಪರ ಕಲಿಕೆ ಮತ್ತು ಸಹಯೋಗದ ಸಂಬಂಧ ಇರಬೇಕು ಎಂಬುದು ಅವರ ಆಶಯವಾಗಿತ್ತು. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹವ್ಯಾಸಿ ಕಲಾವಿದರು ಮತ್ತು ನಿರ್ದೇಶಕರ ಶ್ರಮದಿಂದಲೇ ರಂಗಚಳುವಳಿ ಇಂದಿಗೂ ಜೀವಂತವಾಗಿದೆ” ಎಂದು ಅಭಿಪ್ರಾಯಪಟ್ಟರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ರಂಗ ನಿರ್ದೇಶಕಿ ಕೆ.ಆರ್. ಸುಮತಿ ಮಾತನಾಡಿ, “1970ರ ದಶಕದ ಕಾಲೇಜು ರಂಗಚಳುವಳಿಯು ಕನ್ನಡ ರಂಗಭೂಮಿಗೆ ಹೊಸ ಪೀಳಿಗೆಯನ್ನು ನೀಡಿದ ಮಹತ್ವದ ಘಟ್ಟವಾಗಿತ್ತು. ಕೈಲಾಸಂ ಮತ್ತು ಶ್ರೀರಂಗ ಅವರ ಏಕಾಂಕ ನಾಟಕಗಳು, ಕಾಲೇಜುಗಳ ಸಾಹಿತ್ಯ ಅಧ್ಯಾಪಕರ ಪ್ರೋತ್ಸಾಹ, ಬೆಂಗಳೂರಿನ ಟ್ರೋಫಿ ಸ್ಪರ್ಧೆಗಳು ಹಾಗೂ ಮೈಸೂರಿನ ಅಮರಕಲಾ ಸಂಘದ ಚಟುವಟಿಕೆಗಳು ಅನೇಕ ಯುವ ಪ್ರತಿಭೆಗಳನ್ನು ರಂಗಭೂಮಿಯತ್ತ ಸೆಳೆದವು ಎಂದು ಅವರು ನೆನಪಿಸಿದರು. ರಂಗಭೂಮಿಯಲ್ಲಿ ಮಹಿಳೆಯರ ಪ್ರಾತಿನಿಧ್ಯದ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಮಹಿಳೆಯರನ್ನು ಇನ್ನೂ ಹೆಚ್ಚಾಗಿ ನಟನೆಯ ಪಾತ್ರಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ನಾಟಕ ನಿರ್ಮಾಣ, ರಂಗಸಂಘಟನೆ ಮತ್ತು ನಿರ್ದೇಶನದಂತಹ ಪ್ರಮುಖ ಜವಾಬ್ದಾರಿಗಳಲ್ಲಿ ಅವರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಅಗತ್ಯವಿದೆ” ಎಂದು ಹೇಳಿದರು.



ಸಭಾ ಕಾರ್ಯಕ್ರಮದ ಬಳಿಕ ನಿರಂತರ ಫೌಂಡೇಶನ್ ತಂಡದಿಂದ ಮಹೇಶ್ ಎಲ್ಕುಂಚ್ವಾರ್ ಅವರ ಮರಾಠಿ ಮೂಲದ ‘ಪಾರ್ಟಿ’ ನಾಟಕ ಪ್ರದರ್ಶನಗೊಂಡಿತು. ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿರುವ ಈ ನಾಟಕವನ್ನು ಚಿದಂಬರರಾವ್ ಜಂಬೆ ನಿರ್ದೇಶಿಸಿದ್ದರು. ಆಧುನಿಕ ಸಮಾಜದ ಮುಖವಾಡಗಳು ಮತ್ತು ವ್ಯಕ್ತಿತ್ವಗಳ ಸಂಘರ್ಷವನ್ನು ಅನಾವರಣಗೊಳಿಸಿದ ನಾಟಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಕಾರ್ಯಕ್ರಮದಲ್ಲಿ ರಂಗಸಮಾಜದ ಸದಸ್ಯ ಎಚ್.ಎಸ್. ಸುರೇಶ್ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ, ರಂಗಾಯಣದ ಮಾಜಿ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್ ಉಪಸ್ಥಿತರಿದ್ದರು. ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅಧ್ಯಕ್ಷತೆ ವಹಿಸಿದ್ದರು.
