ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಹೆಚ್.ಕೆ.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಕಾರ್ಕಳದ ಪುಸ್ತಕ ಮನೆ ವತಿಯಿಂದ ದಿನಾಂಕ 16 ಸೆಪ್ಟೆಂಬರ್ 2026ರಂದು ‘ಕಾವ್ಯ ಪರ್ವ’ ಕಾವ್ಯ ದಿಗ್ಗಜರ ಅಭಿನಂದನಾ ಸಮಾರಂಭ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕನ್ನಡದ ಪ್ರಖ್ಯಾತ ಹಾಸ್ಯ ಕವಿ ಹಾಗೂ ನಾಟಕಕಾರರಾದ ಶ್ರೀ ಎಚ್. ಡುಂಡಿರಾಜ್ ಇವರ 100ನೇ ಪುಸ್ತಕ ಬಿಡುಗಡೆ ಹಾಗೂ 70ನೇ ವರ್ಷದ ಅಭಿನಂದನೆ ಮತ್ತು ಖ್ಯಾತ ಸಾಹಿತಿಗಳಾದ ಶ್ರೀ ಬಿ.ಆರ್. ಲಕ್ಷ್ಮಣರಾವ್ ಇವರ ಪುಸ್ತಕ ಬಿಡುಗಡೆ ಹಾಗೂ 80ನೇ ವರ್ಷದ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀ ಎಚ್. ಡುಂಡಿರಾಜ್ ಇವರ ‘ಕಾವ್ಯ ಡುಂಡಿಮ’ ಮತ್ತು ಶ್ರೀ ಬಿ.ಆರ್. ಲಕ್ಷ್ಮಣ ರಾವ್ ಇವರ ‘ಸಾವೇ ಬೀಗಬೇಡ’ ಹಾಗೂ ‘ಓಶೋ ರಜನೀಶ್ ನಿಜರೂಪ’ ಎಂಬ ಕೃತಿಗಳು ಲೋಕಾರ್ಪಣೆಗೊಂಡವು. ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ಅಶ್ವತ್ ಎಸ್.ಎಲ್. ಇವರು ನಮ್ಮ ಕ್ರಿಯೇಟಿವ್ ಪುಸ್ತಕ ಮನೆ ನಮ್ಮ ನಾಡಿನ ಖ್ಯಾತ ಬರಹಗಾರರ ಕೃತಿಗಳನ್ನು ಪ್ರಕಾಶನ ಮಾಡಲಾಗುತ್ತಿದೆ. ಹೂವಿನಲ್ಲಿ ಹೇಗೆ ದುಂಬಿಗಳಿರುತ್ತವೋ ಹಾಗೆ ಕನ್ನಡ ಸಾಹಿತ್ಯದಲ್ಲಿ ಡುಂಡಿರಾಜರು ಹಾಗೂ ಕನ್ನಡದ ಪ್ರೇಮಕವಿಯಾಗಿರುವ ಬಿ.ಆರ್. ಲಕ್ಷ್ಮಣ ರಾಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿಗಳು, ವಿಮರ್ಶಕರು, ಲೇಖಕರು ಹಾಗೂ ಅಧ್ಯಾಪಕರಾದ ಡಾ. ಎಚ್.ಎಸ್. ಸತ್ಯನಾರಾಯಣ ಇವರು ಕನ್ನಡದ ಪ್ರೇಮಕವಿ ಎಂದು ಹೆಸರುವಾಸಿಯಾದ ಕೆ.ಎಸ್. ನರಸಿಂಹಸ್ವಾಮಿಯವರಂತೆ ಮುಂದುವರೆದ ಇಂದಿನ ಪ್ರೇಮ ಕವಿ ಬಿ.ಆರ್. ಲಕ್ಷ್ಮಣ ರಾಯರು ಎಂದು ಅವರ ಬಿಡುಗಡೆಯಾದ ಪುಸ್ತಕಗಳನ್ನು ಪರಿಚಯಿಸಿಕೊಟ್ಟರು ಹಾಗೂ ಡುಂಡಿರಾಜರ ಹಲವಾರು ಹನಿಗವನಗಳನ್ನು ವಿದ್ಯಾರ್ಥಿಗಳಿಗೆ ಉಣಬಡಿಸಿ ಕೃತಿ ಹಾಗೂ ಕೃತಿಕಾರರ ಕುರಿತು ಮಾತನಾಡಿದರು.
ಖ್ಯಾತ ಸಾಹಿತಿಗಳಾದ ಶ್ರೀ ಬಿ.ಆರ್. ಲಕ್ಷ್ಮಣ ರಾಯರು ನಮ್ಮ ನಾಡಿನಲ್ಲಿ ಇಂಗ್ಲೀಷ್ ಒಂದು ಭಾಷೆಯಾಗಿ ಬಳಸದೆ ಪ್ರತಿಷ್ಠೆಯಾಗಿ ಬೆಳೆಯುತ್ತಿದೆ. ಕನ್ನಡಕ್ಕಾಗಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವುದಕ್ಕಾಗಿ ಬೇರೆ ಬೇರೆ ಭಾಷೆಗಳನ್ನು ಕಲಿತೆ ಎಂದು ತನ್ನ ಪುಸ್ತಕಗಳನ್ನು ಪ್ರಕಟಿಸಿದ ಪುಸ್ತಕ ಮನೆಗೆ ಅಭಿನಂದಿಸಿದರು. ಕನ್ನಡದ ಪ್ರಖ್ಯಾತ ಹಾಸ್ಯಕವಿ ಹಾಗೂ ನಾಟಕಕಾರರಾದ ಶ್ರೀ ಎಚ್. ಡುಂಡಿರಾಜ್ ಇವರು ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಟಿಸಿದ ನೂರನೇ ಪುಸ್ತಕ ನನ್ನ ಕೃತಿ ‘ಕಾವ್ಯ ಡುಂಡಿಮ’ವೆಂದು ಸಂತಸಪಡುತ್ತಾ ಪುಸ್ತಕ ಮನೆಗೆ ಅಭಿನಂದಿಸಿದರು. ತಮ್ಮದೇ ಹಲವಾರು ಹಾಸ್ಯ ಚುಟುಕುಗಳನ್ನು ವಾಚಿಸಿದರು. ನನ್ನ ಕಾವ್ಯಗಳು ದೇಶ ವಿದೇಶಗಳಲ್ಲಿ ಸ್ನೇಹ ಬಾಂಧವ್ಯವನ್ನು ತಂದು ಕೊಟ್ಟಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆಗೆ ಸಾಹಿತ್ಯ ಓದುವ ಹವ್ಯಾಸ ಮೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿವೃತ್ತ ಪ್ರಾಧ್ಯಾಪಕರು, ಸಾಹಿತಿಗಳಾದ ಡಾ. ಎಚ್.ಎಲ್. ಮಲ್ಲೇಶ್ ಗೌಡ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬೆಂಗಳೂರಿನ ಹೆಸರಾಂತ ಗಾಯಕರಾದ ಪಂಚಮ್ ಹಳಿ ಬಂಡಿ ಹಾಗೂ ಚಿನ್ಮಯಿ ಚಂದ್ರಶೇಖರ್ ಇವರು ಸಾಹಿತಿಗಳ ರಚನೆಯಲ್ಲಿ ಮೂಡಿ ಬಂದ ಕವನಗಳನ್ನು ಗಾಯನ ಮಾಡಿದರು. ಅವಿನಾಶ್ ಕಾಮತ್ ಇವರು ಕಾವ್ಯ ದಿಗ್ಗಜರುಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರವೀಣ್ ಎ. ಹಾಗೂ ಉಪ ಪ್ರಾಂಶುಪಾಲರಾದ ಲೋಕೇಶ್ ಪೂಜಾರಿಯವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ರಮೇಶ್ ಎಂ. ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
