ಮಂಗಳೂರು : ಮಂಗಳೂರಿನ ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠದ ಸಹಯೋಗದೊಂದಿಗೆ ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿದ್ವಾನ್ ಎನ್. ಗೋಪಾಲಕೃಷ್ಣ ಅಯ್ಯರ್ ಶಿಷ್ಯರ ಸಹಕಾರದೊಂದಿಗೆ ಸಂಗೀತ ಪರಿಷತ್ ಮಂಗಳೂರು (ರಿ.) ಇವರ ಆಶ್ರಯದಲ್ಲಿ ಸಂಗೀತ ವಿದ್ವಾನ್ ಎನ್. ಗೋಪಾಲಕೃಷ್ಣ ಐಯ್ಯರ್ ಸ್ಮರಣಾರ್ಥ ಸಂಗೀತ ಕಛೇರಿಯು ದಿನಾಂಕ 17 ಮೇ 2026ರ ಭಾನುವಾರ ಮಂಗಳೂರಿನ ರಾಮಕೃಷ್ಣ ಮಠದ ಅಮೃತ ಭವನದಲ್ಲಿ ನಡೆಯಿತು.

ಪುತ್ತೂರಿನ ಕುಮಾರಿ ಅನುಶ್ರೀ ಮಳಿ ಇವರ ಹಾಡುಗಾರಿಕೆಗೆ ವಿಜೇತ ಸುಬ್ರಹ್ಮಣ್ಯ ಇವರ ವಯಲಿನ್ ಹಾಗೂ ವೆಂಕಟ ಯಶಸ್ವಿ ಇವರು ಮೃದಂಗ ಸಹಕಾರ ಹಾಗೂ ಚೆನೈನ ಭರತ್ ನಾರಾಯಣ್ ಇವರ ಹಾಡುಗಾರಿಕೆಗೆ ವಯಲಿನ್ ನಲ್ಲಿ ತ್ರಿಶೂರ್ ನ ಆದಿತ್ಯ ಅನಿಲ್, ಮೃದಂಗದಲ್ಲಿ ಕೊಚ್ಚಿಯ ಕೃಪಾಲ್ ಸಾಯಿರಾಮ್ ಹಾಗೂ ಮೋರ್ಸಿಂಗ್ ನಲ್ಲಿ ಪುತ್ತೂರಿನ ಬಾಲಕೃಷ್ಣ ಸಾಥ್ ನೀಡಿದರು.

ವಿದುಷಿ ವೀಣಾ ಶಾಸ್ತ್ರಿಯವರು ಅನುಶ್ರೀ ಕಛೇರಿಯ ಬಗ್ಗೆ ತಮ್ಮ ಅನಿಸಿಕೆ ಪ್ರಸ್ತುತ ಪಡಿಸಿ “ಯುವ ಸಮುದಾಯದವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆಸಕ್ತಿಯಿಂದ ಕಲಿಯಬೇಕು. ಹೆತ್ತವರು ತಮ್ಮ ಮಕ್ಕಳಲ್ಲಿ ಆದಷ್ಟು ನಮ್ಮ ಸಂಸ್ಕೃತಿಯ ಒಲವು ಮೂಡಿಸಬೇಕು” ಎಂದು ಕಿವಿಮಾತು ಹೇಳಿದರು. ಎನ್.ಜೆ. ಗೋಪಾಲ್ ಮೌಧ್ಗಲ್ ಅವರು ಭಾರತ್ ನಾರಾಯಣ್ ಕಛೇರಿಯ ಬಗ್ಗೆ ವಿವರಿಸುತ್ತಾ ತಮ್ಮ ಮೆಚ್ಚುಗೆಯನ್ನು ಸೂಚಿಸುವ ಮೂಲಕ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು. ಕೃಷ್ಣಮೂರ್ತಿ ಹಾಗೂ ಅಶ್ವಿನಿಯವರು ಕಲಾವಿದರನ್ನು ಪರಿಚಯಿಸಿದರು.
ಗೋಪಾಲಕೃಷ್ಣ ಐಯ್ಯರ್ ಅವರ ಶಿಷ್ಯರೂ ಹಾಗೂ ಹೈಕೋರ್ಟಿನ ವಕೀಲರೂ ಆಗಿರುವ ಶ್ರೀಯುತ ರವಿರಾಜ್ ಇವರು ಕಲಾವಿದರನ್ನು ಗೌರವಿಸಿದರು. ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಜಿತಕಾಮಾನಂದಜೀ, ಸಂಗೀತ ಪರಿಷತ್ತಿನ ಗೌರವಾಧ್ಯಕ್ಷ ಡಾ. ಸಿ.ಆರ್. ಬಲ್ಲಾಳ್, ಡಾ. ಚಕ್ರಪಾಣಿ, ಅಡ್ವೊಕೇಟ್ ಅನಂತಕೃಷ ಉಡುಪ, ಐಯ್ಯರ್ ಅವರ ಹಲವಾರು ಶಿಷ್ಯಂದಿರು ಹಾಗೂ ಇತರ ಕಲಾಭಿಮಾನಿಗಳು ಉಪಸ್ಥಿತರಿದ್ದರು.
