ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಂದ ‘ಸುರ್ ಸಂಭ್ರಮ 2026’ ಸಂಗೀತ ಕಾರ್ಯಕ್ರಮವು ದಿನಾಂಕ 08 ಮಾರ್ಚ್ 2026ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣ್ನಲ್ಲಿ ಜರಗಿತು.
ಈ ಕಾರ್ಯಕ್ರಮವನ್ನು ಗುಮಟೆ ಬಾರಿಸಿ, ಉದ್ಘಾಟನೆ ನೆರವೇರಿಸಿದ ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ. ಖಾದರ್ ಮಾತನಾಡಿದ “ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಬಹಳಷ್ಟು ಇದೆ. ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಆಕೆಯ ಪಾತ್ರ ಮೆಚ್ಚುವಂತಾದ್ದು. ಮದುವೆಯಾಗಿ ರಾತ್ರಿ ಬೆಳಗಾಗುವುದರೊಳಗೆ ಪರಂಪರೆ, ಸಂಸ್ಕೃತಿ, ದೇಶ ಭಾಷೆ ಬೇರೆಯಾದರೂ ಆಕೆ ಸಹಿಸಿಕೊಂಡು, ಸೈರಿಸಿಕೊಂಡು ಕುಟುಂಬ ನಡೆಸುತ್ತಾಳೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಐವತ್ತು ಶೇಕಡಾ ಇರುವ ಮಹಿಳೆಯರು ಮುಖ್ಯವಾಹಿನಿಗೆ ಬಂದರೆ ದೇಶ ಬಲಿಷ್ಟವಾಗುತ್ತದೆ. ಮಹಿಳೆಯರು ಎಲ್ಲಾ ಜವಾಬ್ದಾರಿಗಳನ್ನು ಸಲೀಸಾಗಿ ನಿರ್ವಹಿಸಬಲ್ಲರು. ಅವರು ಹೆಚ್ಚು ಹೆಚ್ಚು ರಾಜಕಾರಣಕ್ಕೆ ಬಂದರೆ ಮಾನವೀಯ ಮೌಲ್ಯಗಳಿಂದ ಕೂಡಿದ ರಾಜಕಾರಣ ನಡೆಸಬಹುದು” ಎಂದು ಹೇಳಿದರು.


ಕೊಂಕಣಿಯಿಂದ ಕನ್ನಡಕ್ಕೆ ಅನುವಾದ ಮಾಡಿದ ‘ಕಥಾ ಪಲ್ಲವಿ’ ಮತ್ತು ‘ಕಾವ್ಯ ಪಲ್ಲವಿ’ ಸಂಕಲನಗಳನ್ನು ಬಿಡುಗಡೆ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಇವರು ಮಾತನಾಡಿ “ಭಾರತದಲ್ಲಿ 72 ಶೇಕಡಾ ಮಹಿಳೆಯರು ಕೃಷಿಯಲ್ಲಿ ತೊಡಗಿದ್ದರೂ 54 ಶೇಕಡಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 70 ವರ್ಷಗಳಾದರೂ ನಾವು ಮಹಿಳಾ ಮುಖ್ಯಮಂತ್ರಿಯನ್ನು ಪಡೆಯುವ ಭಾಗ್ಯ ಪಡೆದಿಲ್ಲ. ಈ ಎಲ್ಲಾ ಇಲ್ಲಗಳ ನಡುವೆ ಈ ವರ್ಷವೂ ಮಹಿಳಾ ದಿನಾಚರಣೆ ನಡೆಸುತ್ತಿದ್ದೇವೆ. ಇಂದಿಲ್ಲಿ ಎರಡು ಪುಸ್ತಕಗಳು ಬಿಡುಗಡೆಗೊಂಡವು. ಒಂದು ಗದ್ಯ, ಒಂದು ಪದ್ಯ. ಭಾಷಾ ಅಕಾಡೆಮಿಗಳು ಪರಸ್ಪರ ಸಹಕಾರದಿಂದ ಅನುವಾದ ಮಾಡಿದರೆ ಸಮಾಜ ಮತ್ತು ಸಾಹಿತ್ಯ ಗಟ್ಟಿಯಾಗುತ್ತದೆ. ಸಾಧ್ಯವಾದಲ್ಲಿ ಆಯ್ದ ಪಾಡ್ದನಗಳನ್ನು ಕೊಂಕಣಿಗೆ ತನ್ನಿ. ಅಕಾಡೆಮಿ ನಮ್ಮದು. ಆಡುವವರು, ಹಾಡುವವರು ನಮ್ಮವರೇ ಎಂಬ ಭಾವ ಬಂದಾಗ, ಭಾಷೆ ಉಳಿಸಬೇಕು ಎಂಬ ಎಚ್ಚರ ಬಂದಾಗ ಭಾಷೆ ಬೆಳೆಯುತ್ತದೆ, ಉಳಿಯುತ್ತದೆ” ಎಂದು ಹೇಳಿದರು.



ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶಾಲೆಟ್ ಪಿಂಟೊ, ಬೆಥನಿ ಸಂಸ್ಥೆಯ ಮುಖ್ಯಸ್ಥರಾದ ಸಿ. ರೊಸ್ ಸೆಲಿನ್ ಬಿ.ಎಸ್. ಶುಭ ಹಾರೈಸಿದರು. ಅಕಾಡೆಮಿ ಅಧ್ಯಕ್ಷರಾದ ಜೊಕಿಂ ಸ್ಟ್ಯಾನಿ ಆಲ್ವಾರಿಸ್ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ರಿಜಿಸ್ಟ್ರಾರ್ ರಾಜೇಶ್ ಜಿ. ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ಅಕ್ಷತಾ ನಾಯಕ್, ಸಪ್ನಾ ಕ್ರಾಸ್ತಾ, ದಯಾನಂದ್ ಮಡ್ಕೇಕರ್ ಉಪಸ್ಥಿತರಿದ್ದರು. ಸ್ಟೀವನ್ ಕ್ವಾಡ್ರಸ್ ಧನ್ಯವಾದವನ್ನಿತ್ತರು. ನಂತರ ವಿವಿಧ ಪ್ರದೇಶಗಳ ಏಳರಿಂದ ಎಪ್ಪತ್ತು ವಯೋಮಾನದ ಸ್ತ್ರೀಯರ ತಂಡಗಳಿಂದ ಕೊಂಕಣಿ ಗಾಯನ ನಡೆಯಿತು. ರೋಶನ್ ಡಿ’ಸೋಜ ಆಂಜೆಲೋರ್ ನೇತೃತ್ವದಲ್ಲಿ ಸಂಗೀತಗಾರರು ಸಂಗೀತ ನೀಡಿದರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.


