ಮಂಗಳೂರು : “ಚಿತ್ತುಪುಳಿ ಕಹಿ, ಹುಳಿ ಸಿಹಿಗಳಿಂದ ಕೂಡಿರುತ್ತದೆ. ಅದು ಅದರ ಗುಣ, ಅಂತೂ ಕೊನೆಯಲ್ಲಿ ಸಿಹಿಯ ಅನುಭವ, ಇದು ಯಾವ ಹಣ್ಣನ್ನು ವರ್ಣಿಸಿದ್ದಲ್ಲ. ದಿನಾಂಕ 08 ಮಾರ್ಚ್ 2026ರಂದು ಮಂಗಳೂರು ಕುಳಾಯಿಯ ರಾ.ಹೆ.66, ‘ಅನ್ನಪೂರ್ಣ’ ವಠಾರ ‘ಯಕ್ಷರಮಣ ಮಂಟಪದಲ್ಲಿ ಬಿಡುಗಡೆಗೊಂಡ ಚಿತ್ತುಪುಳಿ (ಪ್ರಹಸನ ಸಂಕಲನ)ದ ಬಗ್ಗೆ ಹೇಳಿದ ಮಾತುಗಳು.

ಕೃತಿಕರ್ತ ನ್ಯಾಯವಾದಿ ಪಿ. ಸಂತೋಷ್ ಐತಾಳ ಕುಳಾಯಿ, ಸಂಚಾಲಕ ಯಕ್ಷನಂದನ ಪಿ.ವಿ. ಐತಾಳರ ಇಂಗ್ಲೀಷ್ ಯಕ್ಷಗಾನ ಬಳಗ ಪಣಂಬೂರು ಕುಳಾಯಿ. ಐತಾಳರ ಈ ‘ಚಿತ್ತುಪುಳಿ’ 21 ಎಸಳುಗಳನ್ನು (ಕಿರು ನಾಟಕಗಳು) ಹೊಂದಿದ್ದು, ಒಂದೊಂದು ಒಂದೊಂದು ರುಚಿ, ನೀತಿ ಕಥೆಗಳು ಒಂದೆಡೆಯಾದರೆ, ಸಮಾಜದ ಪಿಡುಗಿನ ನಿವಾರಣೆ ಇನ್ನೊಂದೆಡೆ. ಪರಿಸರ ಸಂರಕ್ಷಣೆ ಮತ್ತೊಂದೆಡೆ, ಕೊನೆಗೆ ಹಾಸ್ಯ ಪ್ರಧಾನವೂ ಹೌದು. ಈ ಕಾರ್ಯಕ್ರಮದ ಜೊತೆ ಜೊತೆಯಲ್ಲಿ, ಷಟ್ಕೋನ ಸಂಭ್ರಮ, ಗುರು ಹಿರಿಯರಿಗೆ ವಂದನೆ. ಸಾಧಕರಿಗೆ ಗೌರವಾರ್ಪಣೆ. ಸಿಬ್ಬಂದಿ ವರ್ಗದವರಿಗೆ ಮನ್ನಣೆ ಮುಂತಾದ ವಿಶೇಷ ಕಾರ್ಯಕ್ರಮಗಳು ಮನಸೆಳೆದವು. ಆಶೀರ್ವಚನವನ್ನಿತ್ತ ಶ್ರೀ ವೇದಮೂರ್ತಿ ವೆಂಕಟರಮಣ ಅಸ್ತ್ರಣ್ಣರು “ಚಿತ್ತುಪುಳಿಯಿಂದ ಪ್ರೇಕ್ಷಕರ ಹಾಗೂ ಓದುಗರ ಚಿತ್ತ ವಿಕಾಸವಾಗಲಿ” ಎಂದು ಹಾರೈಸಿದರು.

ಹಿರಿಯರಾದ ಕುಡುಪು ನರಸಿಂಹ ತಂತ್ರಿಗಳು ದೀಪ ಪ್ರಜ್ವಲನೆಗೈದರು. ರಂಗನಟಿ ಸಿನಿಮಾ ನಿರ್ಮಾಪಕಿ ಶ್ರೀಮತಿ ಗೀತಾ ಸುರತ್ಕಲ್ ಪುಸ್ತಕ ಬಿಡುಗಡೆಗೊಳಿಸುತ್ತಾ ಕೃತಿಕರ್ತ ಐತಾಳರ ಹಾಸ್ಯ ಪ್ರಜ್ಞೆಯನ್ನು ಶ್ಲಾಘಿಸಿದರು. ಮಂಗಳ ಸೇವಾ ಸಮಿತಿ ಟ್ರಸ್ಟಿನ ಡಾ. ಪಿ. ಅನಂತಕೃಷ್ಣ ಭಟ್ ಇವರು ಶುಭ ಹಾರೈಸಿದರು. ಹಿರಿಯ ನ್ಯಾಯವಾದಿ ಶ್ರೀ ಜಯರಾಮ ಪದಕಣ್ಣಯ್ಯ ಅಧ್ಯಕ್ಷರ ನುಡಿ ನೀಡಿದರು. ತರುಣ್ ಮಯ್ಯ ಪ್ರಾರ್ಥನೆಗೈದು, ಡಾ. ಪಿ. ಸತ್ಯಮೂರ್ತಿ ಐತಾಳ ಸ್ವಾಗತಿಸಿದರು. ಪಿ. ಸಂತೋಷ್ ಐತಾಳರು ಪ್ರಾಸ್ತಾವಿಕ ನುಡಿ ನುಡಿದರು. ಪಿ. ಶಿವತೇಜ ಐತಾಳ ವಂದನಾರ್ಪಣೆಗೈದರು. ಶ್ರೀ ಸರ್ಪಂಗಳ ಈಶ್ವರ ಭಟ್ಟರು ಪುಸ್ತಕ ವಿಶ್ಲೇಷಣೆ ಮಾಡಿದರು. ಶ್ರೀಮತಿ ಜಯಂತಿ ಹೊಳ್ಳ ಮತ್ತು ರಂಜನ್ ಹೊಳ್ಳ ನಿರೂಪಿಸಿದರು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾತಿನ ಹರಟೆ ಸಂಸಾರಕ್ಕೆ ಮಾರಕ ಯಾವುದು? “ಹೆಣ್ಣಿನ ಹಟವೋ-ಗಂಡಿನ ಚಟವೋ” ಎಂಬುದು ಪಿ. ರವಿಶಂಕರ ಕಾರಂತರ ಮಧ್ಯಸ್ಥಿಕೆಯಲ್ಲಿ ನಡೆಯಿತು. ಮಂಗಳ ಸೇವಾ ಟ್ರಸ್ಟಿನ ಆಶ್ರಮವಾಸಿಗಳಿಂದ ನೃತ್ಯ, ಸ್ಥಳೀಯ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ, ಕಿರು ನಾಟಕ ಹಾಗೂ ಐತಾಳರ ಕೃತಿ ‘ಪೆದ್ದನ ಮದುವೆ’ ನಾಟಕವನ್ನು ಮಹಿಳಾ ಮಂಡಲ ಕುಳಾಯಿ ಇದರ ಸದಸ್ಯೆಯರು ಆಡಿತೋರಿಸಿ ಚಿತ್ತುಪುಳಿಯ ಸವಿಯನ್ನು ಪ್ರೇಕ್ಷಕರಿಗೆ ಉಣ ಬಡಿಸಿದರು.
