ಬೆಂಗಳೂರು : ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ‘ಅಬ್ಸ್ಟ್ರಾಟಿಕ್ಸ್’ (Abstratics) ಸಂಸ್ಥೆಯು ಉದಯೋನ್ಮುಖ ನೃತ್ಯಕಲಾವಿದರಿಗೆ ಉತ್ತಮ ವೇದಿಕೆಯನ್ನು ಒದಗಿಸುವ ಸದಾಶಯ ಹೊಂದಿದೆ. ಭರವಸೆಯ ಕಲಾವಿದರಲ್ಲಿ ಅಡಗಿರುವ ಸುಪ್ತಪ್ರತಿಭೆಗಳನ್ನು ಪೋಷಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸೃಜನಶೀಲತೆ ಮತ್ತು ಕಲಾತ್ಮಕ ಅಭಿವ್ಯಕ್ತಿಗೆ ಒತ್ತು ನೀಡುವ ಈ ವಿಶಿಷ್ಟ ಮಹೋತ್ಸವವು ದಿನಾಂಕ 10 ಮೇ 2026ರ ಭಾನುವಾರದಂದು ಬೆಂಗಳೂರಿನ ಮಲ್ಲೇಶ್ವರದ ಸೇವಾಸದನದಲ್ಲಿ ಸಂಜೆ 5-30ಕ್ಕೆ ನಡೆಯಲಿದೆ. ಪ್ರತಿವರ್ಷ ಈ ಸಂದರ್ಭದಲ್ಲಿ ಈ ವೇದಿಕೆಯು ಉದಯೋನ್ಮುಖ ನೃತ್ಯ ಕಲಾವಿದರು ಮತ್ತು ನೃತ್ಯ ಸಂಯೋಜಕರನ್ನು ಒಂದೆಡೆ ಸೇರಿಸುವ ಹಾಗೂ ಜಗತ್ತಿನ ಸಾರ್ವತ್ರಿಕ ಮಾಧ್ಯಮವಾದ ನೃತ್ಯದ ಮೂಲಕ ನೃತ್ಯರೂಪಕಗಳಿಗೆ ಜೀವ ಚೈತನ್ಯ ತುಂಬುವ ರೋಮಾಂಚಕ ಅವಕಾಶವೊಂದನ್ನು ಕಲ್ಪಿಸಿಕೊಡುತ್ತದೆ.

ಈ ಮಹೋತ್ಸವದ ಹಿಂದಿನ ಶಕ್ತಿ ಅಬ್ಸ್ಟ್ರಾಟಿಕ್ಸ್ನ ಸ್ಥಾಪಕರು ಮತ್ತು ಕಲಾತ್ಮಕ ನಿರ್ದೇಶಕರಾದ ಕಾರ್ತಿಕ್ ತಂತ್ರಿ ಸಮಕಾಲೀನ ನೃತ್ಯದ ನುರಿತ ಕಲಾವಿದರು. ಅವರ ದೂರದೃಷ್ಟಿಯ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ‘ಕ್ಯಾನ್ವಾಸ್’ ಎಂಬುದು ಉದಯೋನ್ಮುಖರಿಗೆ ಅತ್ಯಂತ ಸ್ಪೂರ್ತಿದಾಯಕ ನೃತ್ಯೋತ್ಸವ. ನೃತ್ಯವನ್ನು ಕಥೆ ಹೇಳುವ, ಸಾಂಸ್ಕೃತಿಕ ವಿನಿಮಯ ಮತ್ತು ಮಾನವ ಸಂಬಂಧಗಳನ್ನು ಬೆಸೆಯುವ ಪ್ರಬಲ ಮಾಧ್ಯಮವೆಂಬುದು ಇವರ ನಂಬಿಕೆ.


ಮಹೋತ್ಸವದ ವೈಶಿಷ್ಟ್ಯ- ಭಾರತೀಯ ಶಾಸ್ತ್ರೀಯ ಸಾಂಪ್ರದಾಯಕ ಶ್ರೀಮಂತಿಕೆಯೊಂದಿಗೆ ಸಮಕಾಲೀನ (Contemporary) ನೃತ್ಯದ ನಾವೀನ್ಯತೆಯನ್ನು ಸಮಾಗಮಗೊಳಿಸುವ ವಿಶಿಷ್ಟ ‘ಕ್ಯಾನ್ವಾಸ್’ ತನ್ನದೇ ಅದ ಅಸ್ಮಿತೆಯನ್ನು ಎತ್ತಿಹಿಡಿಯುವ ಅನ್ವೇಷಕ ಮತ್ತು ಪ್ರಾಯೋಗಿಕ ಅಂಶಗಳಿಗೆ ಮಹತ್ವ ನೀಡುತ್ತದೆ. ಇದು ಮುಂದಿನ ಪೀಳಿಗೆಯ ಯುವಕಲಾವಿದರುಗಳಿಗೆ ಮಾದರಿ ಎಂದರೂ ತಪ್ಪಿಲ್ಲ. ಛೋಟಾ ಕ್ಯಾನ್ವಾಸ್- ಯುವ ಕಲಾವಿದರ ಆವೃತ್ತಿ – ಪ್ರತಿ ವರ್ಷ ಮೇ ತಿಂಗಳಲ್ಲಿ ನಡೆಯುವ ಈ ಸಂಭ್ರಮ 8ರಿಂದ 15 ವರ್ಷ ವಯಸ್ಸಿನ ನೃತ್ಯ ಕಲಾವಿದರಿಗಾಗಿ ಮೀಸಲು. ಇದರಿಂದ ಅವರಿಗೆ ಆತ್ಮವಿಶ್ವಾಸ ಅಧಿಕವಾಗಿ, ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಹಾಯಕವಾಗುವ ರಂಗಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಈ ಛೋಟಾ ಕ್ಯಾನ್ವಾಸ್ ಪೂರಕವಾಗಿರುತ್ತದೆ. ಈ ಬಾರಿಯ ಉತ್ಸವದಲ್ಲಿ ದೇಶ-ವಿದೇಶಗಳಿಂದ ಆಗಮಿಸುವ 10 ಜನ ಉದಯೋನ್ಮುಖ ನೃತ್ಯ ಕಲಾವಿದೆಯರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಇದು ಬೆಂಗಳೂರಿಗರ ಪಾಲಿಗೊಂದು ಕಣ್ಮನ ಸೂರೆಗೊಳ್ಳುವ ರಸದೌತಣ.

*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
