ಮಂಗಳೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಮಂಗಳೂರು ತಾಲೂಕು ಘಟಕ ಮತ್ತು ತುಳು ಅಧ್ಯಯನ ಕೇಂದ್ರ ನಿಟ್ಟೆ ವಿಶ್ವವಿದ್ಯಾನಿಲಯ ಇದರ ಸಹಯೋಗದಲ್ಲಿ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ದಿನಾಂಕ 08 ಜೂನ್ 2026ರಂದು ಆಯೋಜಿಸಿದ್ದ ಕವಿ ಮಂದಾರ ಕೇಶವ ಭಟ್ಟ ವಿರಚಿತ ತುಳು ಮಹಾಕಾವ್ಯ ‘ಮಂದಾರ ರಾಮಾಯಣ’ ಗಮಕ ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ನಿಕಟ ಪೂರ್ವ ಉಪಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ “ಹಿಂದೆ ಮಳೆಗಾಲ ಆರಂಭವಾಗಿ ಯಕ್ಷಗಾನ ಮೇಳಗಳು ಒಳ ಸೇರಿದಾಗ ಮನೆ ಮನೆಗಳಲ್ಲಿ ಪುರಾಣ ವಾಚನ ನಡೆಯುತ್ತಿತ್ತು. ನಮ್ಮ ಹಿರಿಯರು ಅವಿದ್ಯಾವಂತರಾಗಿದ್ದರೂ ಪುರಾಣ ಪುಣ್ಯ ಕಥೆಗಳನ್ನು ತಿಳಿದುಕೊಂಡದ್ದು ಭಾರತೀಯ ಮಹಾಕಾವ್ಯಗಳ ವಾಚನ – ಪ್ರವಚನಗಳಿಂದ” ಎಂದು ಹೇಳಿದರು.
ವೇದಮೂರ್ತಿ ಕೃಷ್ಣರಾಜ ತಂತ್ರಿ ಕುಡುಪು ಮತ್ತು ವೇದಮೂರ್ತಿ ಹರಿ ಉಪಾಧ್ಯಾಯ ವಾಮಂಜೂರು, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ಮಾತನಾಡಿ “ಅಳಿವಿನಂಚಿನಲ್ಲಿರುವ ಗಮಕ ಕಲಾ ಪ್ರಕಾರವನ್ನು ಮತ್ತೆ ಮುನ್ನೆಲೆಗೆ ತರುವಲ್ಲಿ ಗಮಕ ಕಲಾಪರಿಷತ್ತು ಬಹಳ ಶ್ರಮ ವಹಿಸುತ್ತಿದೆ” ಎಂದು ಸಂಘಟಕರನ್ನು ಅಭಿನಂದಿಸಿದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಶುಭ ಹಾರೈಸಿದರು. ದಿ. ಮಂದಾರರ ಪುತ್ರಿ ಶಾರದಾಮಣಿಯವರು ‘ನಾ ಕಂಡಂತೆ ನನ್ನ ಅಪ್ಪ’ ಎಂಬ ವಿಚಾರವಾಗಿ ಮಂದಾರ ಕೇಶವ ಭಟ್ಟರ ಕುರಿತು ನುಡಿ ನಮನ ಸಲ್ಲಿಸಿದರು. ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ರಾವ್ ಅತ್ತೂರು ಉಪಸ್ಥಿತರಿದ್ದರು.

‘ಪುಂಚದ ಬಾಲೆ’ ವಾಚನ – ವ್ಯಾಖ್ಯಾನ : ಅಧಿಕ ಮಾಸದ ನಾಲ್ಕನೇ ಸಪ್ತಾಹವಾಗಿ ಕುಡುಪು ದೇವಸ್ಥಾನದಲ್ಲಿ ನಡೆದ ‘ಮಂದಾರ ರಾಮಾಯಣ’ ತುಳು ಸಪ್ತಾಹದ ಮೊದಲ ದಿನ ಪ್ರಥಮ ಅಧ್ಯಾಯ ‘ಪುಂಚದ ಬಾಲೆ’ ಎಂಬ ಕಾವ್ಯ ಭಾಗವನ್ನು ಗಮಕಿ ಸುರೇಶ್ ರಾವ್ ಅತ್ತೂರು ವಾಚಿಸಿದರು. ಯಕ್ಷಗಾನ ಅರ್ಥಧಾರಿ, ಪ್ರವಚನಕಾರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ಮಾಡಿದರು.
ಮೂಲ ವಾಲ್ಮೀಕಿ ರಾಮಾಯಣದಲ್ಲಿ ಕ್ರೂರಿಯಾದ ಓರ್ವ ಬೇಡರವನಾಗಿದ್ದವನು ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆಗೊಂಡ ಕಥೆಯನ್ನು ಮಂದಾರ ಕೇಶವ ಭಟ್ಟರು ಕಾಡಿನಲ್ಲಿ ಜನರ ತಲೆ ಹೊಡೆಯುತ್ತಿದ್ದ ಮಲೆಕುಡಿಯ ಚೆನ್ನನೆಂಬ ಹೆಸರಲ್ಲಿ ಚಿತ್ರಿಸಿದ್ದು ಆತ ಸಪ್ತರ್ಷಿಗಳ ಉಪದೇಶದಿಂದ ರಾಮ ನಾಮವನ್ನು ಜಪಿಸಿ ‘ಪುಂಚದ ಬಾಲೆ’ ಎಂದು ಸ್ವಯಂ ಬ್ರಹ್ಮ ದೇವನಿಂದಲೇ ಅನುಗ್ರಹಿಸಲ್ಪಟ್ಟು, ನಾರದರ ಮಾರ್ಗದರ್ಶನದಲ್ಲಿ ಮಹಾಕಾವ್ಯವನ್ನು ಬರೆದ ಕಥಾ ಭಾಗವನ್ನು ಪ್ರವಚನಕಾರು ಸಮರ್ಥವಾಗಿ ವ್ಯಾಖ್ಯಾನಿಸಿದರು.

ನಿಟ್ಟೆ ವಿಶ್ವವಿದ್ಯಾನಿಲಯದ ‘ತಿರ್ಲಜಕೆ’ ತುಳು ಅಧ್ಯಯನ ಕೇಂದ್ರದ ಸಂಶೋಧನಾ ಮಾರ್ಗದರ್ಶಿ ಡಾ. ಸಾಯಿಗೀತ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಲ್ಪಶ್ರೀ ಮತ್ತು ಶರಧಿ ಉಪಾಧ್ಯಾಯ ಪ್ರಾರ್ಥನೆ ಸಲ್ಲಿಸಿದರು. ಜಯಲಕ್ಷ್ಮಿ ರಾಜೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸುರೇಶ್ ರಾವ್ ಅತ್ತೂರು ವಂದಿಸಿದರು. ಗಮಕಲಾ ಪರಿಷತ್ ಮಂಗಳೂರು ತಾಲೂಕು, ಜಾನಪದ ಪರಿಷತ್, ತುಳು ಅಧ್ಯಯನ ಕೇಂದ್ರ ಹಾಗೂ ಮಂದಾರ ಪ್ರತಿಷ್ಠಾನದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
