ಮಂಗಳೂರು : ಕೋಡಿಕಲ್ ನ ವಿಪ್ರ ವೇದಿಕೆಯ ವತಿಯಿಂದ ದಿನಾಂಕ 05 ಜುಲೈ 2026ನೇ ರವಿವಾರದಂದು ಕೋಡಿಕಲ್ ನ ಬೆನಕ ಜ್ಯೋತಿಷ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂದಿನ ತಿಂಗಳು ನಡೆಯಲಿರುವ ದಶಮಾನೋತ್ಸವ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದ ಎಡನೀರು ಸಂಸ್ಥಾನದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀಶ್ರೀಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು “ಸಮಾಜ ಒಗ್ಗೂಡುವುದರಿಂದ ಬರಬಹುದಾದ ಸಕಲ ಅನಾಹುತಗಳನ್ನು ಎದುರಿಸುವ ಬೃಹತ್ ಶಕ್ತಿ ಮೂಡುತ್ತದೆ. ಅದರಲ್ಲೂ ವಿಪ್ರ ಸಮೂಹ ಲೋಕಕ್ಕೆ ಮಾರ್ಗದರ್ಶನ ನೀಡಬಲ್ಲುದಾಗಿದೆ. ಬಲಂ ಬಲಂ ಬ್ರಹ್ಮ ತೇಜೋ ಬಲಂ…. ಇದನ್ನು ನಮ್ಮ ಹಿರಿಯರು ಸಾಧಿಸಿ ತೋರಿಸಿದ್ದಾರೆ. ಅದನ್ನು ಅನುಭವಿಸುವ ನಾವು ಅದನ್ನು ಯಥಾವತ್ತಾಗಿ ಯುವ ಪೀಳಿಗೆಗೆ ತಲುಪಿಸಬೇಕಾಗಿದೆ. ಆದರೆ ಹೇಗೆ ಎಂಬುದರ ಬಗ್ಗೆ ಗಹನವಾಗಿ ಯೋಚಿಸಬೇಕಾದ ಅನಿವಾರ್ಯತೆ – ಒತ್ತಡ ನಮ್ಮೆಲ್ಲರ ಮೇಲಿದೆ. ಮೂವತ್ತು-ನಲ್ವತ್ತರ ಆಸುಪಾಸಿನ ಯುವಕರೇ ನಮ್ಮ ಆಶಾಕಿರಣವಾಗಿರುವವರು. ಅವರನ್ನು ಒಗ್ಗೂಡಿಸಬೇಕಾಗಿದೆ. ಆಗ ಮಾತ್ರ ನಾವು ಯಶಸ್ವೀ ವಿಪ್ರರಾಗಿ ವಿಶ್ವದ ಮುಂದೆ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದಾಗಿದೆ. ಆ ನಿಟ್ಟಿನಲ್ಲಿ ಈ ವಿಪ್ರ ವೇದಿಕೆ ದಶಮಾನಗಳಿಂದ ನಡೆಸುತ್ತಿರುವ ಕಾರ್ಯಗಳು ಅನುಕರಣೀಯವಾಗಿದೆ. ನಾವೂ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನಗಳನ್ನು ನೀಡುತ್ತಾ ನಿಮ್ಮೊಂದಿಗಿದ್ದೇವೆ” ಎಂದು ಹೇಳಿದರು.

ಸಂಸ್ಥಾಪಕ ವೇದಮೂರ್ತಿ ವಿಶ್ವ ಕುಮಾರ್ ಜೋಯಿಸ್ ಹಾಗೂ ಶ್ರೀಮತಿ ವೃಂದಾರವರು ಪಾದಪೂಜೆಯನ್ನು ವಿದ್ಯುಕ್ತವಾಗಿ ನಡೆಸಿಕೊಟ್ಟರು. “ಪೂಜ್ಯ ಶ್ರೀಗಳು ಬಿಜಯಂಗೈದುದರಿಂದ ನಮ್ಮ ವೇದಿಕೆಗೆ ಆನೆಬಲ ಬಂತು. ಅವರ ಆಶೀರ್ವಚನದಿಂದ ನಾವು ಪಾವನರಾದೆವು. ಇನ್ನು ಮುಂದೆಯೂ ಇದಕ್ಕಿಂತ ಹೆಚ್ಚಿನ ಉತ್ಸಾಹದಲ್ಲಿ ಮುನ್ನಡೆಯೋಣ” ಎಂದು ಗೌರವಾಧ್ಯಕ್ಷರೂ, ಹಿರಿಯ ನ್ಯಾಯವಾದಿಗಳೂ ಆದ ಶ್ರೀ ಜಯರಾಮ ಪದಕಣ್ಣಾಯರು ಕರೆ ನೀಡಿದರು.

ಕುಮಾರಿ ಧಾತ್ರಿ, ಕುಮಾರಿ ಸಿಂಚನ ಹಾಗೂ ಮಾಸ್ಟರ್ ವಿಕ್ರಮ್ ಎಂಬ ವೇದಿಕೆಯ ಸದಸ್ಯರ ಮಕ್ಕಳನ್ನು ನಗದು, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯೊಂದಿಗೆ ಪೂಜ್ಯ ಶ್ರೀಗಳು ಗೌರವಿಸಿದರು. ಪ್ರಾಯೋಜಕರಾದ ಶ್ರೀಮತಿ ಭಾರತಿ ಮತ್ತು ರಾಮಮೂರ್ತಿ ಭಟ್ ಡಿ., ಶ್ರೀಮತಿ ಅಪರ್ಣಾ ಉಪಾಧ್ಯಾಯ ಮತ್ತು ಅನಂತ ಪದ್ಮನಾಭ ಉಪಾಧ್ಯಾಯ, ಶ್ರೀಮತಿ ಗಂಗಾಲಕ್ಷೀ ಮತ್ತು ಪುರುಷೋತ್ತಮ ಭಟ್, ಶ್ರೀ ಪದಕಣ್ಣಾಯರು, ಶ್ರೀಮತಿ ಪ್ರಭಾವತಿ ಮಡಿ, ಉಪಾಧ್ಯಕ್ಷ ತೆಕ್ಕೆಕೆರೆ ವಿಶ್ವೇಶ್ವರ ಭಟ್ ಮತ್ತು ದಾಕ್ಷಾಯಣಿ, ಶ್ರೀ ಶ್ರೀಧರ ಹೊಳ್ಳರನ್ನು ಅಭಿನಂದಿಸಲಾಯಿತು. ಶ್ರೀಮತಿ ವಿದ್ಯಾ ಗಣೇಶ ರಾವ್ ರವರು ವಿದ್ಯಾರ್ಥಿಗಳ ಅಭಿನಂದನಾ ಪತ್ರಗಳನ್ನು ವಾಚಿಸಿದರು.

ಕಾರ್ಯಕ್ರಮ ಆರಂಭ ಮತ್ತು ಉತ್ತರಾರ್ಧದಲ್ಲಿ ಶ್ರೀ ಹಯಗ್ರೀವ ಭಜನಾ ಮಂಡಳಿಯವರಿಂದ ಸಂಕೀರ್ತನಾ ಕಾರ್ಯಕ್ರಮ ನಡೆಯಿತು. ಶ್ರೀಮತಿ ಸೀತಾಲಕ್ಷ್ಮೀಯವರು ಅದನ್ನು ನಿರ್ವಹಿಸಿದರು. ಶ್ರೀ ನಿಧೀಶ್ ಅಲೆವೂರಾಯರು ವೇದ ಘೋಷದೊಂದಿಗೆ ಸ್ವಸ್ತಿವಾಚನ ಮಾಡಿದರು. ಭರತಾಂಜಲಿ ಸಂಸ್ಥಾಪಕ ಶ್ರೀ ಶ್ರೀಧರ ಹೊಳ್ಳ ಇವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ ಸ್ವಾಗತ, ಪ್ರಸ್ತಾವನೆ ಮಾಡಿದರು. ಕಿಶೋರ್ ಕೃಷ್ಣ ಧನ್ಯವಾದ ನೀಡಿದರು.

